Snehapriya.com

June 7, 2025

ಮನೋಹರ್ ಮೇಕಿಂಗ್ ದರ್ಬಾರ್

Social Share :

ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ವಿ.ಮನೋಹರ್ ಬಹಳ ಸಮಯದ ಬಳಿಕ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದು, ಅದರ ಹೆಸರು ದರ್ಬಾರ್.

ಈ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಲ್ಲಿ ಚಿತ್ರದ ದರ್ಬಾರ್ ವಿಷಯಗಳ ಬಗ್ಗೆ ವಿವರಗಳು ಬಂದವು.

ಚಿತ್ರದ ಮುಖ್ಯ ಪಾತ್ರದಲ್ಲಿರುವ
ಸತೀಶ್ ಕಥೆ ಬರೆದು ನಿರ್ಮಾಣ ಕೂಡ ಮಾಡಿರುವ ಚಿತ್ರವಿದು. ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಸುಮಾರು 23 ವರ್ಷಗಳ ಬಳಿಕ ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಸತೀಶ್ ಅವರ ಆಸಕ್ತಿಯ ಫಲವಾಗಿ ಈ ಚಿತ್ರ ನನಗೆ ಸಿಕ್ಕಿದೆ ಎಂದರು ವಿ.ಮನೋಹರ್. ಇಂದ್ರ ಧನುಷ್ ಚಿತ್ರದ ಬಳಿಕ ಬೇರೆ ಕೆಲಸಗಳಲ್ಲಿ ಬ್ಯುಸಿಯಾದೆ‌. ಸಂಗೀತ, ಧಾರಾವಾಹಿ ಅಂತಾ ಮಾಡುತ್ತಾ ಹೋಗಿ ಸಿನಿಮಾ ನಿರ್ದೇಶನದ ಕಡೆಗೆ ಬರಲು ಸಾಧ್ಯವಾಗಿರಲೇ ಇಲ್ಲ. ಆದರೆ ಈಗ ದರ್ಬಾರ್ ಮಾಡುವ ಅವಕಾಶ ಬಂದಿದೆ ಎಂದರು ವಿ. ಮನೋಹರ್.

ಸಿನಿಮಾರಂಗಕ್ಕೆ ಬರುವ ಮುನ್ನ ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ರಾಜಕೀಯದ ಅರಿವಿತ್ತು. ಈಗ ಅದೇ ರಾಜಕೀಯ ವಿಷಯ ಆಧರಿಸಿ ಈ ಚಿತ್ರ ಮಾಡಲಾಗಿದೆ. ಇಂದಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಕಥೆ ಇದಾಗಿದೆ ಎಂದು ದರ್ಬಾರ್ ಚಿತ್ರವನ್ನು ಮಾಡಲೇ ಬೇಕಾದ ಅನಿವಾರ್ಯತೆ ಎದುರಾದ ಬಗ್ಗೆ ನಿರ್ದೇಶಕ ವಿ. ಮನೋಹರ್ ವಿವರಿಸಿದರು.

ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ.‌ ಅಲ್ಲಿಯ ಜನರೂ ಉತ್ತಮ ಸಹಕಾರ ನೀಡಿದರು. ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧು ಕೋಕಿಲ, ನವೀನ್ ಡಿ. ಪಡೀಲ್, ಹುಲಿ ಕಾರ್ತೀಕ್ ಹೀಗೆ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಜಾಹ್ನವಿ ಮುಖ್ಯ ಪಾತ್ರದಲ್ಲಿದ್ದು, ಚಿತ್ರದಲ್ಲಿ ಮೂರು ಹಾಡುಗಳಿವೆ. ಇದರಲ್ಲಿ ಶೀರ್ಷಿಕೆ ಗೀತೆಯನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ. ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಚಿತ್ರವೀಗ ಡಿಟಿಎಸ್ ಹಂತದಲ್ಲಿದ್ದು, ಏಪ್ರಿಲ್ ವೇಳೆಗೆ ತೆರೆಗೆ ತರುವ ಯೋಜನೆಯಿದೆ ಎಂದು ವಿವರಿಸಿದರು ಮನೋಹರ್.


ನಿರ್ಮಾಪಕ ಸತೀಶ್, ನಟಿ ಜಾಹ್ನವಿ, ನಟ ಹುಲಿಕಾರ್ತೀಕ್ ಹಾಗೂ ಛಾಯಾಗ್ರಾಹಕ ಸಾಮ್ರಾಟ್ ಎಸ್. ಚಿತ್ರದ ಕುರಿತಂತೆ ಮಾತನಾಡಿದರು.

ಹಳ್ಳಿಯೊಂದರಲ್ಲಿ ನಡೆಯುವ ರಾಜಕೀಯದ ಸುತ್ತ ಕಥೆ ಇದು. ಅಧಿಕಾರಕ್ಕಾಗಿ ಅಲ್ಲಿನ ಮುಖಂಡರು ನಡೆಸುವ ಲಾಭಿ ಹಾಗೂ ತಮಾಷೆಯ ವಿಷಯಗಳು ಕಾಣುತ್ತವೆ.

ವಿ.ಮನೋಹರ್ ಸಂಗೀತವನ್ನೂ ನೀಡುತ್ತಿದ್ದು, ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಬಿ.ಎನ್. ಶಿಲ್ಪ ನಿರ್ಮಾಣ ಮಾಡಿದ್ದಾರೆ.

ಮಾಸ್ ಮಾದ, ವಿನೋದ್ ನಿರ್ದೇಶನದ ಮೂರು ಸಾಹಸ ದೃಶ್ಯಗಳು ಚಿತ್ರದಲ್ಲಿವೆ. ಮಂಡ್ಯ, ಮದ್ದೂರು ಹಾಗೂ ಮಾಲೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರಗಳು ಬಂದವು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *