ಆಕ್ಸಿಡೆಂಟ್ ಚಿತ್ರದ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಶಂಕರ್ ನಾಗ್ ಸುಮಾರು ಮೂವತ್ತು ವರ್ಷಗಳ ಕೆಳಗೆ ವೃತ್ತಿ ಬದುಕಿನ ಯಶಸ್ಸಿನಲ್ಲಿ ಏರು ಮುಖವಾಗಿದ್ದಾಗಲೇ ಅದೇ ಆಕ್ಸಿಡೆಂಟ್ ನಲ್ಲಿ ಹೊರಟು ಹೋದರು.
ಸಂಚಾರಿ ವಿಜಯ್ ಕೂಡ ಅದೇ ಹಾದಿ ಹಿಡಿದು ಬಿಟ್ಟರು. ಅವರೂ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದವರು. ಅದೇ ಆಕ್ಸಿಡೆಂಟ್ ನಲ್ಲಿ ಗಾಯಗೊಂಡು ಇಹಲೋಕ ತ್ಯಜಿಸುವ ಹಾದಿಯಲ್ಲಿದ್ದಾರೆ. ಏಕೆಂದರೆ ಈ ದಿನ ಜೂನ್ 14ರ ಸೋಮವಾರ ಸಂಚಾರಿ ವಿಜಯ್ ಬಾರದ ಲೋಕಕ್ಕೆ ಹೊರಟು ಹೋದರೆಂದು ಕನ್ನಡದ ಮುಂಚೂಣಿಯ ಸ್ಟಾರ್ ಗಳು ಸೋಸಿಯಲ್ ಮೀಡಿಯಾದಲ್ಲಿ ಸುದ್ದಿ ಹರಿಯಬಿಟ್ಟರು. ಆದರೆ ಅವರು ಕೋಮದಲ್ಲಿದ್ದಾರೆ ಇನ್ನು ಸಾವು ಘೋಷಣೆ ಮಾಡಿಲ್ಲ ಎಂದು ಅಪೋಲೋ ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಸದಾ ಹಸನ್ಮುಕಿ ಭಾವದಲ್ಲಿ ಇರುತ್ತಿದ್ದ ಹುಡುಗ ಸಂಚಾರಿ ವಿಜಯ್ ಮೈಸೂರಿನ ರಂಗಾಯಣದ ಪ್ರತಿಭೆ. ಅವರನ್ನು ಶೋಧ ಮಾಡಿ ಚಿತ್ರರಂಗಕ್ಕೆ ಕರೆತಂದಿದ್ದು ಜೋಗಿ ಪ್ರೇಮ್ ಹಾಗೂ ನಿರ್ದೇಶಕ ಎಂ.ಎಸ್.ರಮೇಶ್. ಆ ಚಿತ್ರ ‘ದಾಸವಾಳ’.
ಆ ಚಿತ್ರದಲ್ಲಿ ವಿಕಲ ಚೇತನನ ಪಾತ್ರದಲ್ಲಿ ಮಿಂಚಿದ್ದರು ವಿಜಯ್. ಆ ಬಳಿಕ ಚಿಕ್ಕಪುಟ್ಟ ಪಾತ್ರಗಳು ದಕ್ಕುತ್ತಿದ್ದವಾದರೂ ತಮ್ಮ ಪ್ರತಿಭೆ ತಕ್ಕ ಪಾತ್ರ ಸಿಗಲಿಲ್ಲ ಎಂದು ಕೊರಗುತ್ತಿದ್ದರು. ಇದೇ ವೇಳೆ ಆ ಒಂದು ಚಿತ್ರ ವಿಜಯ್ ಬದುಕನ್ನೇ ಬದಲಿಸಿಬಿಟ್ಟಿತು. ಅದು ‘ನಾನು ಅವನಲ್ಲ ಅವಳು..’. ಲಿಂಗದೇವರು ನಿರ್ದೇಶನದ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ
ಯನ್ನು ಮುಡಿಗೇರಿಸಿಕೊಂಡರು ವಿಜಯ್.
ಆ ಬಳಿಕ ಅನೇಕ ಚಿತ್ರಗಳಲ್ಲಿ ಹೀರೋ ಆದರು. ಆದರೆ ಸ್ಟಾರ್ ಇಮೇಜ್ ಬರಬೇಕೆಂದು ಕಷ್ಟ ಪಡುತ್ತಿದ್ದ ವಿಜಯ್ ಗೆ ಸಿಕ್ಕಿದ್ದು ಅಪ್ರತಿಮ ಕಲಾವಿದ ಎನ್ನುವ ಪಟ್ಟ. ಅದೂ ದೊಡ್ಡದೇ.. ಹಾಗಾಗಿ ಆಕ್ಟ್1978, ಮೇಲೊಬ್ಬ ಮಾಯಾವಿ(ಇನ್ನು ಬಿಡುಗಡೆ ಕಂಡಿಲ್ಲ) ನಾತಿಚರಾಮಿ, ಕೃಷ್ಣತುಳಸಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, 6ನೇ ಮೈಲಿ, ಪಿರಂಗಿಪುರ, ತಲೆ ದಂಡ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿದರು ಸಂಚಾರಿ ವಿಜಯ್.
ಇದಕ್ಕೂ ಮುಂಚೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ರಾಮ್ ಗೋಪಾಲ್ ವರ್ಮಾ ಅವರ ಕಿಲ್ಲಿಂಗ್ ವೀರಪ್ಪನ್ ಹಾಗೂ ಪ್ರಜ್ವಲ್ ದೇವರಾಜ್ ಅವರ ಜೊತೆಯಲ್ಲಿ ಜಂಟಲ್ ಮನ್ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಮಹಾಮಾರಿ ಕೊವಿಡ್ ನಿಂದ ಮನರಂಜನಾ ಕ್ಷೇತ್ರಕ್ಕೆ ಕತ್ತಲು ಕವಿಯಿತು. ಇದೇ ವೇಳೆ ವಿಧಿಸಲಾಗಿದ್ದ ಲಾಕ್ ಡೌನ್ ನಿಂದಾಗಿ ಕಷ್ಟಕ್ಕೆ ಸಿಲುಕಿದ ಕಲಾವಿದರು ಮತ್ತಿತರ ಚಿತ್ರರಂಗದ ಮಂದಿ ಹಾಗೂ ಇತರರು ಅಸಹಾಯಕತೆಯಲ್ಲಿ ಬೇಯುವಾಗ ಅವರ ನೆರವಿಗೆ ನಿಂತಿದ್ದರು ಕರುಣಾಮಯಿ ವಿಜಯ್.
ಆದರೆ ವಿಧಿಯ ಆಟವೇ ಬೇರೆ ಇತ್ತು. ವಿಜಯ್ ಕರೆದುಕೊಳ್ಳಲು ಜವರಾಯ ಹೊಂಚು ಹಾಕಿದ್ದ. ರಾತ್ರಿ ಬೈಕ್ ಸ್ಕಿಡ್ ಆಗಿ ವಿಜಯ್ ಲೈಟ್ ಕಂಬದ ಹೊಡೆತದ ನರಕಕ್ಕೆ ಸಿಲುಕಿದರು. ವಿಜಯ್ ಬಾರದ ಲೋಕಕ್ಕೆ ಹೋಗದಿರಲಿ ಎಂದು ಹಿತೈಷಿಗಳು ಪ್ರಾರ್ಥಿಸುತ್ತಿದ್ದಾರೆ. ಹಾಗೇನಾದರೂ ಪವಾಡ ನಡೆದರೆ ಅದು ಎಲ್ಲರ ಖುಷಿ.
-ಸ್ನೇಹಪ್ರಿಯ ನಾಗರಾಜ್