ನಿರ್ಮಾಣ ನಿರ್ದೇಶನ ಮತ್ತು ಮುಖ್ಯ ಪಾತ್ರದಲ್ಲಿ ನಟನೆ ಒಬ್ಬರದೇ. ಅವರ ಹೆಸರು ಆರ್ಯನ್.
ಚಿತ್ರದ ಹೆಸರು ಕಚೋರಿ..!
ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರು ಬರುವ ಖಾದ್ಯ. ಇಂತಹ ರುಚಿಕರ ಹೆಸರಿಟ್ಟು ಸಿನಿಮಾ ಮಾಡಿದ್ದಾರೆ ಆರ್ಯನ್.
ಸಿನಿವೇ ಸಿನಿ ಕ್ರಿಯೇಶನ್ಸ್ ಮೂಲಕ ಆರ್ಯನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಅವರ ಎದುರು ಇಳಾ ವಿಟ್ಲ ನಟಿಸಿದ್ದಾರೆ.
ಹಿರಿಯ ನಟ ಕೀರ್ತಿರಾಜ್ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೃಪಾಕರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಎಲ್ಲಾ ಸಿದ್ದತೆಯ ಜೊತೆಗೆ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು.
ಸಿನಿವೇ ಸಿನಿ ಆಕ್ಟಿಂಗ್ ಕ್ಲಾಸಸ್ ನಡೆಸುತ್ತಿರುವ ಆರ್ಯನ್ ಅವರಿಗೆ ಆರಂಭದಲ್ಲಿ ಒಂದು ಮಕ್ಕಳ ಚಿತ್ರ ಮಾಡಬೇಕೆಂಬ ಆಸೆ ಇತ್ತಂತೆ. ಆದರೆ ಸ್ನೇಹಿತರಾದ ರಮೇಶ್, ಮಂಜುನಾಥ್, ಖಾಜಾಹುಲಿ ಇವರ ನೆರವಿನಿಂದ ಈ ಚಿತ್ರ ಆರಂಭಿಸಲು ಸಾಧ್ಯವಾಯಿತು ಎಂಬ ವಿವರ ಕೊಟ್ಟರು ಆರ್ಯನ್.
ಕಚೋರಿ ಮಾರುವ ಯುವಕ ಮುಂದೆ ಶ್ರೀಮಂತ ಹುಡುಗಿಯನ್ನು ಪ್ರೇಮಿಸಿ, ಆ ಲವ್ ಬ್ರೇಕಪ್ ಆಗುತ್ತದೆ. ಆ ಬಗ್ಗೆ ಕಾರಣ ಹುಡುಕುವುದೇ ಕಥೆ ಎಂದು ಹೇಳಿಕೊಂಡರು ಆರ್ಯನ್.
ಗಂಗಾವತಿ ಸುತ್ತಮುತ್ತ ಮಾತಿನ ಚಿತ್ರೀಕರಣ ನಡೆಸಲಾಗಿದೆ. ಹೆಸರಾಂತ ಗಾಯಕ ವಿಜಯ ಪ್ರಕಾಶ್ ಹಾಡಿರುವ ಡ್ಯುಯೆಟ್ ಹಾಡನ್ನು ಮನಾಲಿಯಲ್ಲಿ ಚಿತ್ರೀಕರಿಸಿರುವುದು ವಿಶೇಷ.
ಕೆಂಪೇಗೌಡ ಹಾಗೂ ಮೋಹನ್ ಜುನೇಜಾ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕುಟುಂಬ ನೋಡುವಂಥ ಚಿತ್ರ ಇದಾಗಿದ್ದು, ಈಗ ಸೆನ್ಸಾರ್ ಹಂತದಲ್ಲಿದೆ ಎಂದರು.
ನನ್ನದು ಡಾನ್ ಪಾತ್ರ ಎಂದರು ಹಿರಿಯ ನಟ ಕೀರ್ತಿರಾಜ್. ಈ ಚಿತ್ರ ತಂಡ ಉತ್ತಮ ರೀತಿಯಲ್ಲಿ ನೋಡಿ ಕೊಂಡಿತು ಎಂಬ ವಿವರ ಕೊಟ್ಟರು.
ಈ ಸಿನಿಮಾ ಕಚೋರಿ ಸವಿದಷ್ಟೇ ಉತ್ತಮವಾಗಿದೆ ಎಂದರು ಸಂಗೀತ ನಿರ್ದೇಶಕ ಕೃಪಾಕರ್. ಎರಡು ಗಮನ ಸೆಳೆಯುವ ಡುಯೆಟ್ ಹಾಡುಗಳು ಚಿತ್ರದಲ್ಲಿವೆ. ಒಂದು ಐಟಂ ಹಾಡು ಸೇರಿ ಐದು ಹಾಡುಗಳಿವೆ ಎಂಬ ವಿವರ ಬಂತು ಅವರಿಂದ.
ಇದು ನನ್ನ ಮೂರನೇ ಚಿತ್ರ ಎಂದರು ಇಳಾ ವಿಟ್ಲ. ಕಾಲೇಜ್ ಯುವತಿ ನಂತರ ರಾಜಕಾರಣಿಯಾಗಿ ಎರಡು ಶೇಡ್ ಇರುವ ಪಾತ್ರ ಇದಾಗಿದೆ. ನಿಜವಾಗಿ ನಿಗೂಢ ಎನಿಸುವುದು ನನ್ನ ಪಾತ್ರವೇ ಎಂದರು.
ಗೆಳೆಯನ ಪಾತ್ರದಲ್ಲಿ ಅಭಿನಯಿಸಿರುವೆ ಎಂದರು ಕೆಂಪೇಗೌಡ. ಚಿತ್ರದುದ್ದಕ್ಕೂ ಆರ್ಯನ್ ಜೊತೆ ಇರುವ, ಆತನ ಲವ್ಗೆ ಬೆಂಬಲ ನೀಡುವ ಗೆಳೆಯನ ಪಾತ್ರ ಮಾಡಿರುವೆ ಎಂಬ ವಿವರ ಬಂತು.
ಹಾಡುಗಳನ್ನು ಬರೆದಿರುವ ಪ್ರತಾಪರೆಡ್ಡಿ, ಆರ್ಯನ್ ಸ್ನೇಹಿತ ಗಂಗಾವತಿಯ ಖಾಜಾಹುಲಿ, ವಿಲನ್ ಪಾತ್ರ ಮಾಡಿರುವ ಮಂಜುನಾಥ್, ಕಾಮಿಡಿ ಪಾತ್ರಧಾರಿ ದೊಡ್ಡ ಬಸವರಾಜ್ ಮಾತನಾಡಿದರು.
ಧರ್ಮ ಕೀರ್ತಿರಾಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ.