ಕೆಳ ಸ್ತರದಲ್ಲಿ ಬದುಕುವವರಿಗೆ ಇತ್ತ ಭೂಮಿಯು ಇರುವುದಿಲ್ಲ; ಅತ್ತ ಗೌರವಯುತ ಬದುಕೂ ಸಾಧ್ಯವಿರುವುದಿಲ್ಲ..
ಏನೋ ಒಂದಷ್ಟು ಭೂಮಿ ಬದುಕಿಗೆ ಆಸರೆ ಎಂದು ಕೊಂಡರೆ, ಅದನ್ನು ಉಳಿಸಿಕೊಳ್ಳುವುದು ಸವಾಲಾಗುತ್ತದೆ; ಬಂದೂಕು ಬದುಕನ್ನು ಕಾಯುತ್ತದೆ..
ಇಂತಹ ಹೃದಯ ಮೀಟುವ ಕಥೆ ಇರುವ ‘ಧೈರ್ಯಂ ಸರ್ವತ್ರ ಸಾಧನಂ’ ಇದೇ ತಿಂಗಳಿನಲ್ಲಿ (ಫೆ.23) ಬಿಡುಗಡೆ ಕಾಣುತ್ತಿದ್ದು, ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಇಡೀ ತಂಡ ಅತ್ಯುತ್ಸಾಹದಿಂದ ಭಾಗವಹಿಸಿತ್ತು.
‘ಕಮರೋಟ್ಟು ಚೆಕ್ ಪೋಸ್ಟ್’ ‘ಗುಬ್ಬಿ ಮರಿ’ಯಂತಹ ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನು ಮಾಡಿದ್ದ ಆನಂದ್ ಬಾಬು ಜಿ. ಈ ಚಿತ್ರದ ನಿರ್ಮಾಪಕರು. ಇದು ಕೂಡ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರವೇ.
ಚಿತ್ರದ ಟ್ರೈಲರ್ ಹಾಗೂ ಟೀಸರ್ ಬಿಡುಗಡೆಗೊಂಡ ಸಂದರ್ಭದಲ್ಲಿ ಚಿತ್ರತಂಡದ ಜೊತೆಗೆ ಧಾರ್ಮಿಕ ಮುಖಂಡರೂ ಭಾಗವಹಿಸಿದ್ದರು.
ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ ಹಾಗೂ ಇತರರು ಗುರುಗಳು ಈ ಸಂದರ್ಭದಲ್ಲಿ ಹಾಜರಿದ್ದು ಆಶೀರ್ವಚನ ನೀಡಿದರು.
ಇದು ಸತ್ಯ ಘಟನೆ ಆಧರಿಸಿದ ಚಿತ್ರ. ಸಾಮಾಜಿಕ ಅಸಮಾನತೆ ಮತ್ತು ಕ್ರೌರ್ಯದ ಸುತ್ತಲೂ ಇರುತ್ತದೆ. ಕೆಲವು ಸನ್ನಿವೇಶಗಳನ್ನು ಘಟನೆ ನಡೆದ ಸ್ಥಳದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ ಎಂದು ವಿವರ ನೀಡಿದವರು ನಿರ್ದೇಶಕ ಎ.ಆರ್.ಸಾಯಿರಾಮ್.
ಚಿತ್ರದ ಬಿಡುಗಡೆಯ ಹೊತ್ತಿಗೆ ಚಿತ್ರದಲ್ಲಿ ಮೂಡಿ ಬಂದಿರುವ ಪಾತ್ರಗಳು ಯಾರವು ಎಂಬುದನ್ನು ಬಹಿರಂಗಪಡಿಸಲಾವುದು. ನಿಜ ವ್ಯಕ್ತಿ ಯನ್ನು ಮಾಧ್ಯಮಗಳಿಗೆ ಪರಿಚಯಿಸಲಾಗುವುದು ಎಂದರು.
ಚಿತ್ರದಲ್ಲಿ ಸೂಕ್ಷ್ಮ ಸಂವೇದನೆಯ ಛಾಯಾಗ್ರಹಕ ರವಿಕುಮಾರ್ ಸ.ನಾ ಕೆಲಸ ಮಾಡಿರುವುದು ವಿಶೇಷ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚಿತ್ರದ ಟ್ರೈಲರ್ ಗೆ ವಿಡಿಯೋ ಮೂಲಕ ಶುಭ ಹಾರೈಸಿದ್ದರು.
ಕೆ.ಕೆ.ವಿವಾನ್ ಹಾಗೂ ಅನುಷಾ ರೈ ಮುಖ್ಯ ಪಾತ್ರದಲ್ಲಿದ್ದು, ಈ ಚಿತ್ರದಲ್ಲಿ ಅಭಿನಯಿಸಿದ್ದು ವಿಶೇಷ ಅನುಭವ ನೀಡಿತು ಎಂದು ಹೇಳಿಕೊಂಡರು.
ಅಲ್ಲದೆ ಯಶ್ಶೆಟ್ಟಿ, ಬ.ಲ.ರಜವಾಡಿ, ಚಕ್ರವರ್ತಿ ಚಂದ್ರಚೂಡ್, ವರ್ಧನ್, ಪ್ರದೀಪ್ ಪೂಜಾರಿ ರಾಮ್ ಪವನ್, ಮೀನಾ, ಪದ್ಮಿನಿಶೆಟ್ಟಿ, ಅರ್ಜುನ್ಪಾಳೆಗಾರ, ರಾಮ್ ನಾಯಕ್, ಹೊಂಗಿರಣ ಚಂದ್ರು ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಹೃದಯಶಿವ, ಕಿನ್ನಾಳ್ರಾಜ್, ಅರಸು ಅಂತಾರೆ ಸಾಹಿತ್ಯದ ಐದು ಹಾಡುಗಳಿಗೆ ಜ್ಯೂಡಾಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಶ್ರೀಕಾಂತ್ ಸಂಕಲನ, ಕುಂಗುಫು ಚಂದ್ರು ಸಾಹಸ, ಕ್ಯಾಪ್ಟನ್ ಕಿಶೋರ್ ನೃತ್ಯವಿದೆ.
ತುಮಕೂರು, ಕೊರಟಗೆರೆ, ದೇವರಾಯನ ದುರ್ಗದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರಗಳು ಬಂದವು.