Snehapriya.com

June 7, 2025

ಸರ್ಕಾರಿ ಶಾಲೆಗಳ ಮಹತ್ವ ಸಾರುವ ಮಕ್ಕಳ ಚಿತ್ರ

Social Share :

ಎಷ್ಟೋ ಕಡೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಶೋಚನೀಯ ಸ್ಥಿತಿ ಬಂದೊದಗುತ್ತದೆ. ಕೆಲವೊಮ್ಮೆ ಏನೂ ಕಾರಣವಿಲ್ಲದೆ ಕೆಲವರ ಸ್ವಾರ್ಥಕ್ಕಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿರುತ್ತದೆ. ಅದು ಏಕೆ ಎಂತು ಎಂದು ಪ್ರಶ್ನೆ ಮಾಡದಷ್ಟು ಮುಗ್ಧರಾಗಿರುತ್ತಾರೆ ಜನರು. ಆದರೆ ಇಲ್ಲಿ ವಿದ್ಯಾರ್ಥಿಗಳು ಶಾಲೆಯನ್ನು ಉಳಿಸಿಕೊಳ್ಳುವ ಸಾಹಸ ಮಾಡುತ್ತಾರೆ.

ಇಂತಹ ಕಥಾ ಹಂದರವಿರುವ ಮಕ್ಕಳ ಚಿತ್ರ ಈಚೆಗೆ ಮುಹೂರ್ತ ಆಚರಿಸಿಕೊಂಡಿತು. ಅಂದ ಹಾಗೆ ಹೊಸಬರ ಈ ಮಕ್ಕಳ ಚಿತ್ರದ ಹೆಸರು ‘ನಮ್ಮ ಪ್ರೀತಿಯ ಶಾಲೆ’ ಇದು 30 ವರ್ಷಗಳ ಹಿಂದೆ ಬಂದಿದ್ದ ‘ದಂಗೆ ಎದ್ದ ಮಕ್ಕಳು’ ಚಿತ್ರವನ್ನು ನೆನಪಿಗೆ ತರುತ್ತದೆ.

ಚಿತ್ರದ ಮಹೂರ್ತ ಸಮಾರಂಭವು ಬೆಂಗಳೂರಿನ ಮಿನಿ ಇಸ್ಕಾನ್ ಆವರಣ, ಶ್ರೀ ಲಕ್ಷೀ ನರಸಿಂಹ ದೇವಸ್ಥಾನ ಆವರಣದಲ್ಲಿ ಸರಳವಾಗಿ ಜರುಗಿತು. ಮಾ.ಜಿವಿತ್‌ಭೂಷಣ್ (ಸೆಲ್ವಂ ಪುತ್ರ) ಮತ್ತು ಮಾಸ್ಟರ್ ಮಹಾನಿಧಿ ನಟಿಸುತ್ತಿರುವ ಮೊದಲ ದೃಶ್ಯವನ್ನು ಸೆರೆಹಿಡಿಯಲಾಯಿತು. ನಂತರ ಹೊರಾಂಗಣದಲ್ಲಿ ಚಿತ್ರೀಕರಣ ನಡೆಯಿತು. ತಾರಾಗಣದಲ್ಲಿ ಅಚ್ಯುತಕುಮಾರ್, ದತ್ತಣ್ಣ, ಕೆಜಿಎಫ್ ಖ್ಯಾತಿಯ ಕೃಷ್ಣೋಜಿರಾವ್ ಹಾಗೂ ಇತರರು ನಟಿಸುತ್ತಿದ್ದಾರೆ. (ಸಿಎಂ ಪಾತ್ರವನ್ನು ಸ್ಟಾರ್ ನಟ ಅಭಿನಯಿಸುವ ಸಾಧ್ಯತೆ ಇದೆ)

ಈ ಚಿತ್ರದ ಕಥೆ ಸರಳ. ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇದೆಯೆಂದು ಶಾಲೆಯನ್ನು ಮುಚ್ಚಲಾಗುತ್ತದೆ. ಪೋಷಕರು ಈ ಬಗ್ಗೆ ಪಂಚಾಯತಿ ಅಧ್ಯಕ್ಷರನ್ನು ಕೇಳಿದಾಗ, ಸಿಎಂ ಆದೇಶದಂತೆ ಶಾಲೆಯನ್ನು ಮುಚ್ಚಲಾಗಿದೆ ಎಂಬ ಉತ್ತರ ಬರುತ್ತದೆ. ಬಳಿಕ ಏನಿದ್ದರೂ ನೀವು ಅವರನ್ನೇ ಸಂಪರ್ಕಿಸಬೇಕೆಂಬ ಉತ್ತರ ಬರುತ್ತದೆ. ಇದನ್ನು ಕೇಳಿಸಿಕೊಂಡ ಇಬ್ಬರು ಮಕ್ಕಳು ಯಾರಿಗೂ ಹೇಳದೆ ಶಾಲೆಯನ್ನು ಉಳಿಸಿಕೊಳ್ಳುವ ದಿಶೆಯಲ್ಲಿ ಪ್ರಯತ್ನ ಮಾಡಲು ಬೆಂಗಳೂರಿಗೆ ಬರುತ್ತಾರೆ. ಅವರಿಬ್ಬರೂ ಮಹಾನಗರದಲ್ಲಿ ಏನೆಲ್ಲಾ ತೊಂದರೆ ಎದುರಿಸುತ್ತಾರೆ. ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಏನೇನು ಕಷ್ಟಗಳನ್ನು ಅನುಭವಿಸುತ್ತಾರೆ. ಕೊನೆಗೂ ಅವರ ಶ್ರಮ ಸಾರ್ಥಕವಾಗುತ್ತದೆಯೇ.. ಶಾಲೆ ಪುನ: ತೆರೆಯುವುದೇ.. ಎಂಬುದು ಕಥಾ ಸಾರಾಂಶ.

ಚಿತ್ರದ ರಚನೆ,ಛಾಯಾಗ್ರಹಣ, ನಿರ್ದೇಶನ ಮಾಡುತ್ತಿರುವ ಸೆಲ್ವಂ ನಿರ್ಮಾಣದಲ್ಲಿ ಪಾಲುದಾರರು. ಇವರೊಂದಿಗೆ ಹೈದರಬಾದ್‌ನ ವೈ.ಆರ್.ವೇಮಿರೆಡ್ಡಿ ಶ್ರೀ ಯೋಗ ಲಕ್ಷೀ ನರಸಿಂಹ ಸ್ವಾಮಿ ಕಂಬೈನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಎರಡು ಹಾಡುಗಳಿಗೆ ಪಳನಿ.ಡಿ.ಸೇನಾಪತಿ ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಕಲನ ಕೆ.ಎಂ.ಪ್ರಕಾಶ್, ಸಂಭಾಷಣೆ ಶಿವತೇಜಸ್, ನೃತ್ಯ ಹರಿಕೃಷ್ಣ-ಶ್ರೀಶೈಲಂ, ನಿರ್ಮಾಣ ನಿರ್ವಹಣೆ ಹನುಮಂತು ಅವರದಾಗಿದೆ. ಕೋಲಾರ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *