* ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ *
* ಸಾಂಪ್ರದಾಯಿಕ ಉಡುಪಿನಲ್ಲಿ ಶಿವರಾಜ್ ಕುಮಾರ್ *
* ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರಿಂದ ಹಾಡು ಬಿಡುಗಡೆ *
ಬಹು ನಿರೀಕ್ಷಿತ ’45’ ಚಿತ್ರದ ಹೊಸ ಹಾಡು ಶಿವಂ ಶಿವಂ ಸನಾತನಂ ಬಿಡುಗಡೆಗೊಂಡಿದೆ.
ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಹಾಗೂ ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಮಾ ರಮೇಶ್ ರೆಡ್ಡಿ ನಿರ್ಮಿಸುತ್ತಿರುವ ಚಿತ್ರದ ಈ ಹಾಡಿನಲ್ಲಿ ಬಹಳಷ್ಟು ವಿಶೇಷಗಳಿವೆ.
ಡಾ.ವಿ.ನಾಗೇಂದ್ರಪ್ರಸಾದ್ ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ಅರ್ಜುನ್ ಜನ್ಯ ಸಂಗೀತ ನೀಡಿರುವ ‘ಶಿವಂ ಶಿವಂ ಸನಾತನಂ..’ ಹಾಡು ಈಚೆಗೆ ಬಿಡುಗಡೆಗೊಂಡಿದೆ.
ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ ಅವರು ದೂರದ ದೆಹಲಿಯಿಂದ ಆಗಮಿಸಿ ಶಿವನ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡದವನ್ನು ಆಶೀರ್ವದಿಸಿದರು.
ಈ ಹಾಡಿಗೆ ಶಿವರಾಜಕುಮಾರ್ ಅವರು ನೃತ್ಯ ಮಾಡಿದ್ದು ವಿಶೇಷವಾಗಿತ್ತು. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಶಿವನ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಒತ್ತಡದ ಕಾರ್ಯಗಳಿದ್ದರೂ ದೂರದ ಊರಿನಿಂದ ಬಂದು ಹಾಡು ಬಿಡುಗಡೆ ಮಾಡಿಕೊಟ್ಟ ಪೂಜ್ಯರಿಗೆ ಅನಂತ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.
ಚಿತ್ರಕ್ಕೆ ಅರ್ಜುನ್ ಜನ್ಯ ಅವರಂತಹ ನಿರ್ದೇಶಕರು ಸಿಕ್ಕಿದ್ದು ಬಹಳ ಖುಷಿಯಾಗಿದೆ. ಈ ಚಿತ್ರದ ಆರಂಭದಿಂದಲೂ ಅವರು ಈ ಚಿತ್ರಕ್ಕಾಗಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಇಂದು ಬಿಡುಗಡೆಯಾಗಿರುವ ಶಿವನ ಕುರಿತಾದ ಹಾಡಂತೂ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಈ ಹಾಡು ಇಡೀ ದೇಶದೆಲ್ಲೆಡೆ ಸದ್ದು ಮಾಡಲಿದೆ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ವಿಜಯ್ ಪ್ರಕಾಶ್ ಅವರ ಗಾಯನ ಮಧುರವಾಗಿದೆ. ಶಿವರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಇಡೀ ತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕರು.
ಈ ಹಾಡು ಹಾಗೂ ಚಿತ್ರ ಇಷ್ಟು ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕ ರಮೇಶ್ ರೆಡ್ಡಿ ಅವರ ಉದಾರ ಮನಸ್ಸು ಪ್ರಮುಖ ಕಾರಣ. ಡಾ.ಶಿವರಾಜ್ ಕುಮಾರ್ ಅವರ ಹೃದಯ ವೈಶಾಲ್ಯ ಮನೋಭಾವದಿಂದ ನಾನು ನಿರ್ದೇಶಕನ ಸ್ಥಾನ ಅಲಂಕರಿಸಿರುವೆ
ಎಂದರು ಅರ್ಜುನ್ ಜನ್ಯ.
ಕಳೆದ ವರ್ಷ ನಾನು ಈ ಚಿತ್ರದ (ಕನ್ನಡ) ಡಬ್ಬಿಂಗ್ ಮುಗಿಸಿದ್ದೆ. ಈಗ ತಮಿಳಿನಲ್ಲಿ ಡಬ್ ಮಾಡುತ್ತಿದ್ದೇನೆ. ಆದಷ್ಟು ಎಲ್ಲಾ ಭಾಷೆಗಳಲ್ಲೂ ನಾನೇ ಡಬ್ ಮಾಡುತ್ತೇನೆ. ನನ್ನ ಧ್ವನಿ ಎಲ್ಲಾ ಕಡೆ ತಲುಪಲಿ ಎಂಬುದು ನನ್ನ ಆಶಯವಾಗಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದರು.
ಹಾಡಿನ ಬಗ್ಗೆ ಡಾ.ವಿ.ನಾಗೇಂದ್ರ ಪ್ರಸಾದ್ ಮಾಹಿತಿ ನೀಡಿದರು. ಗಾಯಕ ವಿಜಯ್ ಪ್ರಕಾಶ್ ಸಹ ಹಾಡಿನ ಕುರಿತು ಅನುಭವವನ್ನು ಹಂಚಿಕೊಂಡರು.