* ಮೇ 16ಕ್ಕೆ ಬಿಡುಗಡೆ *
ಡ್ರಗ್ ಮಾಫಿಯಾ ಹತ್ತಿಕ್ಕುವ ಹೊಸ ವರಸೆಗಳನ್ನು ಒಳಗೊಂಡಿರುವ ಜೊತೆಗೆ ಮಾದಕ ಒಳ ನೋಟಗಳನ್ನು ಬಿಂಬಿಸುವ ‘ಟಕೀಲ’ ಈ ವಾರ ಬಿಡುಗಡೆ ಕಾಣುತ್ತಿದೆ.
ಧರ್ಮ ಕೀರ್ತಿರಾಜ್ ಹಾಗೂ ನಿಖಿತಾ ಸ್ವಾಮಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಹಿರಿಯ ಸಿನಿ ಛಾಯಾಗ್ರಾಹಕ ಪ್ರವೀಣ್ ನಾಯಕ್ ನಿರ್ದೇಶಿಸಿದ್ದಾರೆ.
ಶ್ರೀಸಿದ್ಧಿವಿನಾಯಕ ಫಿಲಂಸ್ ಲಾಂಛನದಲ್ಲಿ ಮರಡಿಹಳ್ಳಿ ನಾಗಚಂದ್ರ ಅವರ ನಿರ್ಮಾಣದ ಈ ಚಿತ್ರದಲ್ಲಿ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್, ಜಯರಾಜ್, ಸುಶ್ಮಿತಾ, ನಿರ್ದೇಶಕ ಪ್ರವೀಣ್ನಾಯಕ್ ಒಳಗೊಂಡ ತಾರಾಗಣವಿದೆ.
ಜೀವನದಲ್ಲಿ ಒಂದು ಬಾರಿ ಬರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು; ಮಾದಕ ವರಸೆಯಲ್ಲಿ ಕೈ ಜಾರುವ ಬದುಕು ಎಂತಹ ಸಂಕಷ್ಟಕ್ಕೆ ದೂಡಬಹುದು ಎಂಬ ಸಂದೇಶ ಚಿತ್ರದಲ್ಲಿದೆ.
ಈಚೆಗೆ ಬಿಡುಗಡೆ ಕಂಡ ಚಿತ್ರದ ಟ್ರೈಲರ್ ಜನಮನದ ಗಮನ ಸೆಳೆದಿದೆ. ಬಹಳವೇ ಕಷ್ಟದ ಸಂದರ್ಭಗಳನ್ನು ಎದುರಿಸಿ ಮರಡಿಹಳ್ಳಿ ನಾಗಚಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಬಹಳ ಸಮಯದ ಬಳಿಕ ಪ್ರವೀಣ್ ನಾಯಕ್ ಚಿತ್ರವನ್ನು ನಿರ್ದೇಶನ ಮಾಡಿದ್ದು, ಈ ಚಿತ್ರದಲ್ಲಿ ಮಾದಕತೆ ಹೆಚ್ಚಾಗಿ ಬರಲು ಅದರದೇ ಆದ ಕಾರಣಗಳಿವೆ ಎಂಬುದು ಅವರ ಸಮರ್ಥನೆ.
ಮನಶಾಸ್ತ್ರ ಹಾಗೂ ಆಧ್ಯಾತ್ಮಿಕತೆ ಚಿತ್ರದ ಭಾಗವಾಗಿರುತ್ತದೆ. ಮನಸ್ಥಿತಿಗಳನ್ನು ಅರಿಯುವ ಪ್ರಯತ್ನದ ಜೊತೆಗೆ ಮಾದಕ ವಸ್ತು ಜೀವನವನ್ನು ಹೇಗೆ ಹಾಳು ಮಾಡುತ್ತದೆ ಎಂಬುದರ ವಿವರ ಇಲ್ಲಿ ಸಿಗುತ್ತದೆ ಎಂಬ ವಿವರಣೆ ಅವರದು.
ಚಿತ್ರದ ಬಿಡುಗಡೆ ತಡವಾಗಿದೆ ಎಂಬುದು ನಿಜವಾದರೂ ಜಯಣ್ಣ ಫಿಲಮ್ಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಸುಮಾರು 150 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಕಾಣುತ್ತಿದೆ ಎಂಬ ವಿವರಣೆ ನಿರ್ಮಾಪಕ ನಾಗಚಂದ್ರ ಅವರದು.
ಧರ್ಮಾ ಕೀರ್ತಿರಾಜ್ ಶ್ರೀಮಂತ ವ್ಯಾಪಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಖಿತಾ ಸ್ವಾಮಿ ಗ್ಲಾಮರ್ ಬೊಂಬೆಯಾಗಿ ಮೆರೆದಿದ್ದಾರೆ.
ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ರೇಣುಕುಮಾರ್ ಸಂಗೀತ, ಗಿರೀಶ್ ಸಂಕಲನ, ಪ್ರಶಾಂತ್ ಕಲಾನಿರ್ದೇಶನ ಈ ಚಿತ್ರಕ್ಕಿದೆ.