ಬಹಳ ಸಮಯದ ಬಳಿಕ ಸುಮಂತ್ ಶೈಲೇಂದ್ರ ಮತ್ತೆ ಸರದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದು ವಿಭಿನ್ನ ನೆಲೆಯಲ್ಲಿ..
‘ಬುದ್ಧಿವಂತ-2’ ಚಿತ್ರದ ನಿರ್ದೇಶಕ ಎಂ.ಜಯ್ಯರಾಮಃ ನಿರ್ದೇಶನದ ಚೇಸರ್ ಚಿತ್ರದಲ್ಲಿ ಸುಮಂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಆ ಚಿತ್ರದ ಟೀಸರ್ ಈಚೆಗೆ ಬಿಡುಗಡೆಗೊಂಡಿತು.
ಶಿವಮೊಗ್ಗ ಮೂಲದ ಮಾಲತಿ ಶೇಖರ್ ನಿರ್ಮಾಣದ ಚಿತ್ರದಲ್ಲಿ ಥ್ರಿಲ್ಲರ್, ಚೇಸರ್ ಸಾಹಸಕ್ಕೆ ಹೆಚ್ಚಿನ ಮಹತ್ವ. ಏಕೆಂದರೆ ಚಿತ್ರದ ಹೆಸರೇ ಚೇಸರ್.
ಈಚೆಗೆ ನಡೆದ ಚಿತ್ರದ ಟೀಸರ್ ಅದ್ದೂರಿ ಬಿಡುಗಡೆ ಕಾರ್ಯಕ್ರಮ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ಗಣ್ಯರು ಹಾಗೂ ಅಭಿಮಾನಿಗಳಿಂದ ಜಿ.ಟಿ.ಮಾಲ್ ನ ಎಂಎಂಬಿ ಲೆಗಸಿ ಸಭಾಂಗಣ ತುಂಬಿ ಹೋಗಿತ್ತು.
ಚೇಸರ್ ಅಗಣಿತ ಸಾಹಸಗಳ ಮಹಾಪೂರ ಎಂಬುದಕ್ಕೆ ಬಿಡುಗಡೆಯಾದ ಟೀಸರ್ ಸಾಕ್ಷಿಯಾಗಿತ್ತು. ಬೈಕ್ ನಲ್ಲಿ ಚೇಸ್ ಮಾಡುವ ಒಂದು ಸಾಹಸ ದೃಶ್ಯವನ್ನು ತಾವೇ ಸಂಯೋಜನೆ ಮಾಡಿದ್ದಾಗಿ ಹೇಳಿಕೊಂಡರು ನಿರ್ದೇಶಕ ಎಂ.ಜಯ್ಯರಾಮಃ.
ಅಂಜನಿ ಪುತ್ರ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದೇ ಅದೇ ನನಗೆ ವರವಾಯಿತು. ಈಗ ನಿರ್ಮಾಪಕಿಯಾಗಿ ಇಲ್ಲಿ ನಿಂತಿದ್ದೇನೆ ಎಂದವರು ಮಾಲತಿ ಶೇಖರ್.
ರಾಜಕೀಯ ಕ್ಷೇತ್ರದಲ್ಲಿದ್ದರೂ ಸಿನಿಮಾ ಕ್ಷೇತ್ರ ಕೈ ಬೀಸಿ ಕರೆದಿದೆ. ಈ ಚಿತ್ರದ ನಿರ್ಮಾಣ ಖುಷಿ ಕೊಟ್ಟಿದೆ ಎಂದು ಹೇಳುತ್ತಾ ಹೋದರು ನಿರ್ಮಾಪಕಿ ಮಾಲತಿ ಶೇಖರ್ .
ಅವರಿಗೆ ಸಹಕಾರ ನೀಡಿದ ಕಾರ್ಯಕಾರಿ ನಿರ್ಮಾಪಕ ಕಲ್ಮನೆ ಮಂಜಣ್ಣ ಚಿತ್ರ ಉತ್ತಮವಾಗಿ ಮೂಡಿ ಬರುವ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲಾಗಿದೆ ಎಂದರು.
ಗೆಳೆಯರ ಮದುವೆಗೆ ಸಬ್ ರಿಜಿಸ್ಟರ್ ಕಚೇರಿಗೆ ಹೋದಾಗ, ಅಲ್ಲಿ ತಿಳಿದ ಪ್ರೇಮಿಗಳ ಕಥೆ ಈ ಚಿತ್ರವಾಗಿದೆ ಎಂದರು ನಿರ್ದೇಶಕ ಜಯ್ಯರಾಮಃ.
ಚೇಸರ್ ಎಂದರೆ ಕೇವಲ ಚೇಸಿಂಗ್ ಅಲ್ಲ; ಮನರಂಜನೆಗೆ ಬೇಕಾದ ಎಲ್ಲಾ ಅಂಶಗಳಿವೆ. ನನಗಂತೂ ಎಲ್ಲವೂ ಛಾಲೆಂಜಿಂಗ್ ಆಗಿತ್ತು ಎಂದರು ನಟ ಸುಮಂತ್ ಶೈಲೇಂದ್ರ.
ಚಿತ್ರದ ಟೀಸರ್ ರೋಮಾಂಚಕ ಎಂಬುದು ಎದ್ದು ಕಾಣುತ್ತದೆ. ಸುಮಂತ್ ಸಾಹಸ ಮೆರೆದಿದ್ದಾರೆ. ನಿರ್ದೇಶಕರ ಪ್ರಯತ್ನ ಜನರ ತಲುಪಲಿ, ನಿರ್ಮಾಪಕರ ಪ್ರಯತ್ನಕ್ಕೆ ಜಯವಾಗಲಿ ಎಂದರು ಧ್ರುವ ಸರ್ಜಾ.
ನಟರಾದ ಅರವಿಂದ್, ತ್ರಿವಿಕ್ರಮ್ ಹಾಗು ಕರಣ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ್ ಹಾಗೂ ಹಿನ್ನಲೆ ಸಂಗೀತ ನೀಡಿರುವ ಹರ್ಷವರ್ಧನ್ ಮಾತನಾಡಿದರು.
ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.
ಸುಮಂತ್ ಶೈಲೇಂದ್ರ ಜೋಡಿಯಾಗಿ ರಕ್ಷಾ ಮೆನನ್ ನಟಿಸಿದ್ದಾರೆ. ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡಿಪುಡಿ ಚಂದ್ರು, ಸಂಗೀತ ಚಿತ್ರದ ತಾರಾ ಬಳಗದಲ್ಲಿದ್ದಾರೆ ಎಂಬ ಮಾಹಿತಿಗಳು ಬಂದವು.