ರೇಟಿಂಗ್ : 3.5/5
ನಿರ್ಮಾಣ : ಎಂ.ಶ್ರೀನಿವಾಸ್ ಬಾಬು
ನಿರ್ದೇಶನ : ಪ್ಲೇಯಿಂಗ್ ಕಿಂಗ್ ಮಂಜು
ರಾಜಕೀಯದ ಬೆಂಕಿಯಲ್ಲಿ
ನಲುಗುವ ದಮನಿತರ ಕಥೆ..
ನಿಜವಾಗಿ ಇದು ದಮನಿತರ ಕಥೆ. ಚಿಕ್ಕ ಪುಟ್ಟ ಕೋರಿಕೆಗಳಿಗೆ ರಾಜಕಾರಣಿಗಳ ಕೈಗೆ ಸಿಕ್ಕು ನರಳುವ ಅಮಾಯಕ ಯುವಕರ ಕಥೆಯ ನೈಜ ಅಭಿವ್ಯಕ್ತಿ.
ಅದು ಬಡವರ ಕಾಲೋನಿ..!
ಜಾತಿ ಭೇದ ಇವುಗಳ ಹಂಗಿಲ್ಲ. ಪ್ರೀತಿ ಸ್ನೇಹ ಇವುಗಳಿಗೆ ಕೊರತೆಯೇ ಇಲ್ಲ. ಅದೇ ರೀತಿ ತ್ಯಾಗ ಮನೋಭಾವ ರಕ್ತಗತ ಎಂಬಷ್ಟು ಸಲೀಸು. ಇಂತಹ ಕಾಲೋನಿಯಲ್ಲಿ ಜೀವಕ್ಕೆ ಜೀವ ಕೊಡುವ ಇಬ್ಬರು ಗೆಳೆಯರು.
ರಾಘವ ಮತ್ತು ಶಿವ ಸ್ನೇಹಕ್ಕೂ ಸೈ ತ್ಯಾಗಕ್ಕೂ ಸೈ. ರಾಘವ ಗಂಭೀರ. ಯಾವುದೇ ಕೆಲಸವನ್ನು ವಿವೇಚನೆಯಿಂದ ಮಾಡುವವನು. ಶಿವ ಕೋಪಿಷ್ಟ ಜೊತೆಗೆ ಹತ್ತು ಜನರನ್ನು ಹೊಡೆದು ಹಾಕುವಷ್ಟು ಬಲಿಷ್ಟ.
ಕಾಲೋನಿಯಲ್ಲಿ ಸರಸ ವಿರಸದ ಘಟನೆಗಳು ನಡೆಯುವಾಗಲೇ ಹೊರಗೆ ರಾಜಕೀಯ ಮತ್ತು ಸಂಚು ರೂಪಿತಗೊಳ್ಳುತ್ತಿರುತ್ತದೆ. ಹಾಗೆಯೇ ಶಿವನ ತಂದೆ ಮತ್ತು ಹಿಂದಿನ ಘಟನೆಗಳು ಸೇಡಿಗಾಗಿ ಹೊಂಚು ಹಾಕುತ್ತಿರುತ್ತವೆ.
ಕಾಲೋನಿಯ ಮಕ್ಕಳಿಗೆ ಒಂದು ಆಟದ ಮೈದಾನ ಮಾಡಿಕೊಡಬೇಕು ಎಂಬ ಧಾವಂತದಲ್ಲಿ ಶಿವ ಮತ್ತು ರಾಘವ ಎದುರು ಹಾಕಿಕೊಳ್ಳುವ ಸವಾಲುಗಳು ಕೆಂಡದಂಡೆಗಳಾಗಿ ತೆರೆಯ ಮೇಲೆ ಕಾಣುವಾಗ ಇಬ್ಬರೂ ದುರಂತ ನಾಯಕರು.
ವ್ಯವಸ್ಥೆ ಅಮಾಯಕರನ್ನು ಹೇಗೆ ದುಡಿಸಿಕೊಳ್ಳುತ್ತದೆ ಎಂಬುದು ಎದ್ದು ಕಾಣುವ ಹೊತ್ತಲ್ಲಿ ಪರ ವಿರೋಧ ಎರಡೂ ಗುಂಪುಗಳು ರಕ್ತಕ್ಕಾಗಿ ಹಂಬಲಿಸುತ್ತವೆ. ಮೇಲ್ನೋಟಕ್ಕೆ ರೌಡಿಸಂ ಎನಿಸಿದರೂ ಆಳದಲ್ಲಿ ರಾಜಕೀಯ ಮತ್ತು ಅಸ್ತಿತ್ವಕ್ಕೆ ಮುಗ್ಧ ಜೀವಗಳ ದುರಂತ ಮೆರವಣಿಗೆ ಎಂಬುದು ಭಾಸವಾಗುತ್ತದೆ.
ಕಿಷ್ಕಿಂದೆಯಂತಹ ಜಾಗಗಳಲ್ಲಿ ಕ್ಯಾಮೆರಾ ಇಟ್ಟು ಸಮರ್ಪಕ ನೆರಳು ಬೆಳಕಿನಾಟ ಮೂಡಿಸುವ ಪರಿ, ಕೈಚಳಕ ಎಲ್ಲವೂ ಅದ್ಭುತ ಎನಿಸುತ್ತದೆ. ಆ ಮೂಲಕ ಚಿತ್ರ ತಂಡದ ಶ್ರಮ ಎದ್ದು ಕಾಣುತ್ತದೆ.
ಡ್ರಾವಿಡ ಮೂಲದ ಕಥೆಗಳನ್ನು ವೆಟ್ರಿ ಮಾರನ್ ಸೇರಿದಂತೆ ತಮಿಳಿನ ಹೆಸರಾಂತ ನಿರ್ದೇಶಕರು ನಿರ್ವಹಿಸಿರುವ ರೀತಿಯಲ್ಲಿ ಈ ಕಥೆಯೂ ಕಾಣುವುದು ‘ಕಾಲೋನಿ’ಯ ಹೆಗ್ಗಳಿಕೆ.
ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ನಟನೆ ಜೊತೆಗೆ ನಿರ್ದೇಶಕರಾಗಿ ಭರವಸೆ ಮೂಡಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ರಾಜೀವ್ ಹನು ಹಾಗೂ ಪ್ಲೇಯಿಂಗ್ ಕಿಂಗ್ ಮಂಜು ಇಬ್ಬರೂ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಪ್ಲೇಯಿಂಗ್ ಕಿಂಗ್ ಮಂಜು ದ್ವಿಪಾತ್ರವನ್ನು ನಿರ್ವಹಿಸಿರುವುದು ವಿಶೇಷವಾಗಿ ಕಾಣುತ್ತದೆ.
ಹಾಗೆಯೇ ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಪಾತ್ರಗಳು ಗಮನ ಸೆಳೆಯುತ್ತವೆ.
ಅಭಿನಂದನ್ ಕಶ್ಯಪ್ ಸಂಗೀತ, ಕಾರ್ತಿಕ್ ಎಸ್ ಛಾಯಾಗ್ರಹಣ ಹಾಗೂ ಪ್ರಮೋದ್ ತಲ್ವಾರ್ ಸಂಕಲನ ಚಿತ್ರಕ್ಕೆ ಪೂರಕ.