Snehapriya.com

June 9, 2025

ನೆನಪಾಗಿ ಹರಿದ ವಿಷ್ಣು ಜೀವನಗಾಥೆ ಸಾಹಸಸಿಂಹನ ತ್ಯಾಗರಾಜ ಇತಿಹಾಸ

Social Share :

* ಸಿಂಹದ ಹಾದಿ ಚಿತ್ರದ ಟ್ರೈಲರ್ *

* ಗೆಳೆಯರ ಹಳೆಯ ದಿನದ ಮೆಲುಕು *

ಸಾಹಸಸಿಂಹ ವಿಷ್ಣುವರ್ಧನ್ ನಿರ್ದೇಶಕರ ನಟರಾಗಿದ್ದರು ಮಾತ್ರವಲ್ಲ; ಅವರೊಬ್ಬ ಮಾನವೀಯ ಅನುಕಂಪವಿರುವ ಸರಳ ಜೀವಿಯಾಗಿದ್ದರು.

ಆದರೆ ಅವರನ್ನು ಸರಿಯಾಗಿ ಅರ್ಥೈಸದ ಕಾರಣ ಆಕ್ಷನ್ ಕಿಂಗ್ ಆಗಬೇಕಿದ್ದವರು ತ್ಯಾಗರಾಜರಾದರು..

ಹೀಗೆ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಬಣ್ಣಿಸಿದವರು ಅವರ ಬಾಲ್ಯದ ಒಡನಾಡಿ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು.

ವಿಷ್ಣು, ಅಂಬರೀಷ್ ಮತ್ತು ನಾನು ಮೈಸೂರಿನಲ್ಲಿ ಕಳೆದ ದಿನಗಳು ಅದ್ಭುತವಾಗಿದ್ದವು. ವಿಷ್ಣು ಆಗ ಬೆಂಗಳೂರಿನಲ್ಲಿ ನೆಲೆಸಿದ್ದರೂ ನಮ್ಮನ್ನು ನೋಡಲು ಹಗಲು ರಾತ್ರಿ ಎಂದು ನೋಡದೆ ಓಡೋಡಿ ಬಂದು ಬಿಡುತ್ತಿದ್ದರು.

‘ಬಂಧನ’ ಚಿತ್ರದ ಬಳಿಕ ಅವರ ಪಾತ್ರಗಳ ಶೈಲಿಯೇ ಬದಲಾಯಿತು. ಅತ್ಯುತ್ತಮ ಸಾಹಸಮಯ ಚಿತ್ರಗಳನ್ನು ಮಾಡುವ ಬದಲಾಗಿ ತ್ಯಾಗ ಮಾಡುವ ಪಾತ್ರಗಳನ್ನು ಮಾಡಬೇಕಾಯಿತು ಎಂದು ಹೇಳುತ್ತಾ ಹೋದರು ಬಾಬು.

ಡಿಸೆಂಬರ್ 30 ವಿಷ್ಣು ಸಂಸ್ಮರಣಾ ದಿನ. ಹಾಗಾಗಿ ಅವರ ನೆನಪು ಈ ಸಂದರ್ಭದಲ್ಲಿ ತೀವ್ರವಾಗಿ ಕಾಡುತ್ತದೆ. ಮುಖ್ಯ ಅವರ ಮಾನವೀಯ ಕಳಕಳಿ ಹೆಚ್ಚು ಪ್ರಚಾರವಾಗದೇ ಹೋಯಿತು ಎಂದರು ರಾಜೇಂದ್ರಸಿಂಗ್ ಬಾಬು.

ವಿಷ್ಣುವರ್ಧನ್ ಅವರಿಗೆ ನನ್ನ ಚಿತ್ರದ ಮೂಲಕ ‘ಸಾಹಸ ಸಿಂಹ’ ಎಂಬ ಬಿರುದು ದಕ್ಕಿತು ಎಂಬುದು ಹೆಮ್ಮೆಯ ವಿಷಯ. ಆದರೆ ಅವರೊಳಗಿದ್ದ ಕಳಕಳಿ, ಕನ್ನಡದ ಬಗೆಗಿನ ಕಾಳಜಿ ಇನ್ನು ಹೆಚ್ಚು ಹೆಚ್ಚು ಜನರ ಗಮನ ಸೆಳೆಯುವುದು ಬೇಕಿತ್ತು ಎಂದವರು ಸಾಹಸಸಿಂಹ ಚಿತ್ರವನ್ನು ನಿರ್ದೇಶನ ಮಾಡಿದ್ದ ಜೋಸೈಮನ್.

ವಿಷ್ಣು ಅವರಿಲ್ಲದೆ 15 ವರ್ಷ ಕಳೆದು ಹೋಯಿತು. ಆದರೆ ಅಭಿಮಾನಿಗಳು ಅವರನ್ನು ಇನ್ನೂ ಜೀವಂತವಾಗಿರಿಸಿದ್ದಾರೆ ಎಂಬ ಹೊಗಳಿಕೆ ಕೇಳಿ ಬಂದಿದ್ದು ‘ಸಿಂಹದ ಹಾದಿ’ ಟೆಲಿ ಚಿತ್ರದ ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ..

ಜಿ. ಕೆ. ಸಿನಿ ಫೈಲ್ಸ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಜಿ. ಕೆ. ಶಶಿರಾಜ್‌ ದೊರೈ ‘ಸಿಂಹದ ಹಾದಿʼ ಎಂಬ ಟೆಲಿಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ.

ಬಾಲ್ಯದಿಂದಲೂ ವಿಷ್ಣುವರ್ಧನ್‌ ಅಭಿಮಾನಿಯಾಗಿರುವ, ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಅಭಿನಯ ಮತ್ತು ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಶಶಿರಾಜ್‌ ದೊರೆ, ವಿಷ್ಣುವರ್ಧನ್‌ ಅವರ ಮೇಲಿನ ಅಭಿಮಾನದಿಂದ ಈ ಟೆಲಿಚಿತ್ರವನ್ನು ನಿರ್ಮಿಸಿ, ತೆರೆಗೆ ತರುವ ಸಾಹಸಕ್ಕೆ ಕೈ ಹಾಕಿದ್ದಾರೆ.

ವಿಷ್ಣುವರ್ಧನ್‌ ಪುಣ್ಯಸ್ಮರಣೆಗೂ ಮುನ್ನ ನಡೆದ ಸಮಾರಂಭದಲ್ಲಿ, ಹಿರಿಯ ನಿರ್ದೇಶಕರಾದ ಎಸ್‌. ವಿ. ರಾಜೇಂದ್ರ ಸಿಂಗ್‌ ಬಾಬು, ಜೋ ಸೈಮನ್‌, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್‌, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌, ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು, ಹಿರಿಯ ನಟಿ ಲಕ್ಷ್ಮೀದೇವಮ್ಮ, ವಿಧಾನ ಪರಿಷತ್‌ ಮಾಜಿ ಸದಸ್ಯ ವೀರಯ್ಯ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಹಾಜರಿದ್ದು, ಟೆಲಿ ಚಿತ್ರದ ಟ್ರೇಲರ್‌ ಅನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಕೋರಿದರು.

ವಿಷ್ಣುವರ್ಧನ್‌ ಅವರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ಕಟ್ಟಿಕೊಂಡ ನಾಲ್ಕು ಜನರ ಜೀವನವನ್ನು ಆಧರಿಸಿ, ಈ ಟೆಲಿ ಚಿತ್ರವನ್ನು ನಿರ್ಮಿಸಲಾಗಿದೆ. ವಿಷ್ಣುವರ್ಧನ್‌ ಅವರ ಚಿತ್ರಗಳು, ಅವರು ನಿರ್ವಹಿಸಿರುವ ಪಾತ್ರಗಳು, ಅವರ ಸಾಮಾಜಿಕ ಕಾರ್ಯಗಳು ಎಲ್ಲವನ್ನೂ ಆಧರಿಸಿದ ಕಥೆ ಇದು ಎಂದರು ನಿರ್ದೇಶಕ ಶಶಿ ದೊರೆರಾಜ್.

ವಿಷ್ಣುವರ್ಧನ್‌ ಅಭಿಮಾನಿಗಳು ಈ ಕಾರ್ಯದಲ್ಲಿ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವಿಷ್ಣುವರ್ಧನ್‌ ಅವರ ಜೀವನ-ಸಾಧನೆಯನ್ನು ಮುಂದಿನ ತಲೆಮಾರಿಗೆ ತೋರಿಸುವ ಸಣ್ಣ ಕೆಲಸ ಈ ಟೆಲಿಫಿಲಂನಿಂದ ಆಗುತ್ತದೆ ಎಂಬ ನಂಬಿಕೆ ನಮ್ಮದು ಎಂದರು.

ಈ ಸಿಂಹದ ಹಾದಿಯಲ್ಲಿ ಶಶಿರಾಜ್‌ ದೊರೆ, ಸಾಯಿ ಜ್ಯೋತಿ, ಸವಿತಾ, ಪಲ್ಲವಿ ರಾವ್‌, ಸಂನ್ಸಿಕಾ, ಪ್ರಕೃತಿ, ಹರಿ ಪ್ರಕಾಶ್‌, ಮಂಜು, ಮಹೇಶ್‌ ಗುರು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಷ್ಣು ಸಾಧನೆಗಳನ್ನು ಬಣ್ಣಿಸುವ ಈ ಟೆಲಿ ಚಿತ್ರ ಅನೇಕ ಚಿತ್ರೋತ್ಸವಗಳಲ್ಲಿ ನಾಮ ನಿರ್ದೇಶನಗೊಂಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಎಂಬ ವಿವರಗಳೂ ಬಂದವು.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *