ರಿಯಲ್ ಸ್ಟಾರ್ ಉಪೇಂದ್ರ ಖುಷಿಯ ಲಹರಿಯಲ್ಲಿದ್ದರು; ಎಂತಹ ಖಡಕ್ ಪ್ರಶ್ನೆಗೂ ಸಮರ್ಥನೆಯ ಉತ್ತರ ನೀಡುತ್ತಿದ್ದರು..
ಅದು ‘ಯುಐ’ ಚಿತ್ರದ ಯಶಸ್ಸು ಮತ್ತು ಖುಷಿಯನ್ನು ಹಂಚಿಕೊಳ್ಳುವ ಸಲುವಾದ ಪ್ರಚಾರ ಸಭೆ. ಲಹರಿ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಾದ ಮನೋಹರ ನಾಯ್ಡು, ಲಹರಿ ವೇಲು ಮತ್ತೊಬ್ಬ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹಾಗೂ ಚಿತ್ರತಂಡ ಮಾತಿಗೆ ಕುಳಿತ್ತಿತ್ತು.
ಸನ್ನಿ ಲಿಯೋನ್ ಚಿತ್ರದಲ್ಲಿ ಇರುವುದು ನಿಜವೇ ಎಂಬ ಪ್ರಶ್ನೆಯಿಂದ ಹಿಡಿದು.. ‘ನೀವು ಬುದ್ಧಿವಂತರಾಗಿದ್ದರೆ ಎದ್ದೋಗಿ..’ ಎಂಬುದು ಸರಿಯೇ ಅಲ್ಲಿಯವರೆಗಿನ ಕಠಿಣ ಪ್ರಶ್ನೆಗೂ ಉಪೇಂದ್ರ ಲವಲವಿಕೆಯ ಉತ್ತರಗಳನ್ನೇ ನೀಡಿದರು.
ಸಿನಿಮಾ ಗೆದ್ದಿದೆ. ನಿರ್ಮಾಪಕರು ಖುಷಿಯಾಗಿದ್ದಾರೆ. ಅದಕ್ಕಿಂತಲೂ ಇನ್ನೇನು ಬೇಕು. ಇದೊಂದು ಬೇರೆ ಬಗೆಯ ಪ್ರಯತ್ನ ಮತ್ತು ಪ್ರಯೋಗ. ಅದು ಗೆದ್ದಿರುವುದಕ್ಕೆ ಖುಷಿಯಾಗಿದೆ ಎಂದರು ಉಪೇಂದ್ರ.
ಚಿತ್ರದ ಗಳಿಕೆ ವಿಷಯದಲ್ಲಿ ನಿರ್ಮಾಪಕರಿಗೆ ಸಂತೃಪ್ತಿ ಇದೆ ಎಂದರು ಲಹರಿ ವೇಲು. ಸಿನಿಮಾ ಗೆದ್ದಿದೆ; ನಾವು ಖುಷಿಯಿಂದ ಇದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಆದರೆ ಗಳಿಕೆಯ ಪೂರ್ಣ ವಿವರವನ್ನು ಇನ್ನೂ ಬಿಟ್ಟುಕೊಡಲಾಗದು. ಏಕೆಂದರೆ ಚಿತ್ರ ಈಗಲೂ ಹೌಸ್ ಫುಲ್ ಆಗಿ ಹೋಗುತ್ತಿದೆ. ಸ್ವಲ್ಪ ಸಮಯ ಕೊಡಿ, ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದರು ಲಹರಿ ವೇಲು.
ಇದು ಬೇರೆ ಮಾದರಿಯ ಚಿತ್ರ. ಬುದ್ಧಿಗೆ ಕೆಲಸ ಕೊಡುವ; ತರ್ಕಕ್ಕೆ ಗಮನ ಕೊಡುವ; ತತ್ವಕ್ಕೆ ತಲೆ ಕೊಡುವ ಮತ್ತು ಮನರಂಜನೆಗೆ ಮನಸ್ಸು ಕೊಡುವ ಹೀಗೆ ವಿಭಿನ್ನ ನೆಲೆಯಲ್ಲಿ ಚಿಂತನೆಗೆ ಹಚ್ಚುವ ಚಿತ್ರ.
ಇದೇ ನಿಟ್ಟಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಪ್ರಶ್ನೆಗಳು ಎದುರಾದವು. ಜಿ.ಮನೋಹರ ನಾಯ್ಡು, ಕೆ.ಪಿ.ಶ್ರೀಕಾಂತ್, ನವೀನ್ ಮನೋಹರ್, ನಟಿ ರೀಷ್ಮಾ ನಾಣಯ್ಯ, ನಟ ಕಾಕ್ರೋಚ್ ಸುಧಿ ಹಾಗೂ ಚಿತ್ರತಂಡದ ಉಪಸ್ಥಿತಿ ಇತ್ತು.