ಜೋಗಿ ಪ್ರೇಮ್ ಸಿನಿಮಾಗಳಲ್ಲಿ ಹಾಡು ಅದ್ದೂರಿ ಎಂಬುದರಲ್ಲಿ ಸಂಶಯವೇ ಇಲ್ಲ; ಆದರೆ ಈ ಹಾಡು ಕನ್ನಡ ಚಿತ್ರರಂಗದ ಶ್ರೀಮಂತಿಕೆಯನ್ನು ಕೊಂಡಾಡುವಷ್ಟು ಶ್ರೀಮಂತವಾಗಿದೆ..
ಅದೇ ಶಿವ ಶಿವ (ಸಿವ ಸಿವ) ಹಾಡು..!
‘ಶಿವನೇ ನಿನ್ನಾಟ ಬಲ್ಲೋರ್ ಯಾರ್ಯಾರೋ..’ ಎಂಬ ಕೈಲಾಸ್ ಖೇರ್ ಮತ್ತು ಪ್ರೇಮ್ (ಕನ್ನಡದಲ್ಲಿ) ಅವರ ಕಂಠ ಸಿರಿಯಲ್ಲಿ ಮೈ ರೋಮಾಂಚನಗೊಳಿಸುವಷ್ಟು ಪರಿಣಾಮಕಾರಿ.
ತಮಿಳು, ತೆಲುಗಿನಲ್ಲಿ ಈ ಹಾಡನ್ನು ಕೈಲಾಸ್ ಖೇರ್ ಅವರ ಜೊತೆ ಕನ್ನಡಿಗ ವಿಜಯ್ ಪ್ರಕಾಶ್ ಹಾಡಿದ್ದು, ಹಿಂದಿ ಹಾಗೂ ಮಲಯಾಳಂ ನಲ್ಲಿ ಸ್ಥಳೀಯ ಗಾಯಕರು ಹಾಡಿದ್ದಾರೆ.
ಕೆಡಿ ಚಿತ್ರದ ಕಥೆ 70ರ ದಶಕದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಆ ಸಂದರ್ಭಗಳನ್ನೇ ಮರು ಸೃಷ್ಟಿಸಿರುವುದು ಹಾಡಿನ ಝಲಕ್ ನಲ್ಲೇ ಎದ್ದು ಕಾಣುತ್ತದೆ.
ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಅವರು ಟೌನ್ ಹಾಲ್ ಸೇರಿದಂತೆ ಬೆಂಗಳೂರಿನ ಸಿಟಿ ಮಾರುಕಟ್ಟೆ ಹಾಗೂ ಇತರ ಜಾಗಗಳನ್ನು ಮರುಸೃಷ್ಟಿ ಮಾಡಿ ಸೆಟ್ ಹಾಕಿದ್ದಾರೆ. ಇದರಲ್ಲಿ ಆ ಕಾಲದ ವರಸೆಯಲ್ಲಿ ಮುಖ್ಯ ಪಾತ್ರದಲ್ಲಿರುವ ಧ್ರುವ ಸರ್ಜಾ ಹಾಗೂ ನಟಿ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ.
ಧ್ರುವ ಸರ್ಜಾ ಕಾರಿನ ಮೇಲೆ ಹತ್ತಿ ಕುಣಿಯುವ ದೃಶ್ಯಗಳ ವರಸೆ ವೈಭವಗಳ ಚಿತ್ರೀಕರಣ ವಿವರಗಳನ್ನು ಚಿತ್ರತಂಡ ಮಾಧ್ಯಮಗಳ ಮುಂದೆ ತೆರೆದಿಟ್ಟಿತು.
ನಿರ್ದೇಶಕ ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್, ಕೆವಿಎನ್ ನಿರ್ಮಾಣ ಸಂಸ್ಥೆಯ ಸುಪ್ರೀತ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಟ ಧ್ರುವ ಸರ್ಜಾ, ನಟಿ ರೀಷ್ಮಾ ನಾಣಯ್ಯ,ಆನಂದ್ ಆಡಿಯೋ ಶ್ಯಾಮ್, ಕಲಾ ನಿರ್ದೇಶಕ ಮೋಹನ್ ಬಿ.ಕೆರೆ, ನೃತ್ಯ ನಿರ್ದೇಶಕ ಮೋಹನ್, ಛಾಯಾಗ್ರಾಹಕ ಡೇವಿಡ್ ವಿಲಿಯಂ ಹೀಗೆ ‘ಶಿವ ಶಿವ’ ಹಾಡು ಬಿಡುಗಡೆಯಲ್ಲಿ ಪಾಲ್ಗೊಂಡ ಎಲ್ಲರೂ ಅದರ ವೈಭವಗಳನ್ನು ಬಣ್ಣಿಸಿದರು.
ಮೊದಲೇ ಹೇಳಿದಂತೆ ಕೆಡಿ ಅಂದರೆ ಕಾಳಿದಾಸ. ಮುಖ್ಯವಾಗಿ ಈ ಚಿತ್ರದ ಹಾಡುಗಳು ನಮ್ಮ ಕಲ್ಪನೆ ಮೀರಿ ಬರಬೇಕು ಎಂಬ ಆಶಯವಿತ್ತು. ಹಾಗಾಗಿ ಇಲ್ಲಿರುವ ಎಲ್ಲರ ಸಹಕಾರದಿಂದ ಅದು ಸಾಧ್ಯವಾಗಿದೆ ಎಂದರು ಪ್ರೇಮ್.
ಹಾಡು ಮತ್ತು ದೃಶ್ಯ ವೈಭವ ನನ್ನ ಕಲ್ಪನೆಯನ್ನು ಮೀರಿ ಬಂದಿರುವುದು ಖುಷಿ ತಂದಿದೆ. ಆನಂದ್ ಆಡಿಯೋ ನಮಗೆ ಹೆಚ್ಚು ಪ್ರೋತ್ಸಾಹ ನೀಡಿದೆ. ದಾಖಲೆ ಬೆಲೆ (17.70 ಕೋಟಿ)ಗೆ ಚಿತ್ರದ ಹಾಡುಗಳು ಮಾರಾಟವಾಗಿವೆ. ಅದಕ್ಕೆ ತಕ್ಕ ಹಾಗೆ ಈ ಚಿತ್ರದ ಸಂಗೀತ ವೈಭವ ಮೋಡಿ ಮಾಡಲಿದೆ ಎಂದರು.
ಈ ಚಿತ್ರದ ಹಾಡಿಗೆ ಖರ್ಚು ಮಾಡಿರುವಷ್ಟು ಹಣದಲ್ಲಿ ಒಂದು ಅದ್ದೂರಿ ಚಿತ್ರವನ್ನು ನಿರ್ಮಾಣ ಮಾಡಬಹುದಿತ್ತು ಎಂದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.
ಸಂಗೀತದ ಪ್ರತಿಯೊಂದು ಮಜಲುಗಳನ್ನು ಪ್ರೇಮ್ ಅವರೇ ನಿರ್ವಹಿಸುತ್ತಾರೆ. ಇಲ್ಲಿ ನಾನು ನೆಪ ಮಾತ್ರ. ಈ ಚಿತ್ರದ ದೊಡ್ಡ ಬಂಡವಾಳ ಸಂಗೀತ. ಹಾಗಾಗಿ ಹೆಚ್ಚಿನ ಒತ್ತಡ ಜವಾಬ್ದಾರಿ ಇದೆ ಎಂದರು.
ಸಂಗೀತಗಾರರು ಹಾಗೂ ಗಾಯಕರನ್ನು ತಾಳ್ಮೆಯಿಂದ ಕಾಯ್ದು ಕರೆಯಲಾಗಿದೆ. ಜಾಕೀರ್ ಹುಸೇನ್ ಅವರ ಸಹೋದರ ತೌಪಿಕ್ ಖುರೇಶ್ ಈ ಚಿತ್ರದಲ್ಲಿ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳುತ್ತಾ ಹೋದರು ಅರ್ಜುನ್ ಜನ್ಯ.
ಈ ಚಿತ್ರದಲ್ಲಿ ನಟಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಯಿತು. ಈ ಶಿವ ಶಿವ ಹಾಡಿನಲ್ಲಿ ಮಾಡಿರುವ ಸಾಹಸಗಳ ಕುರಿತ ದಾಖಲೆ ನಿಮ್ಮ ಮುಂದೆಯೇ ಇದೆ ಎಂದರು ಧ್ರುವ ಸರ್ಜಾ.
ಓಡುವ ಕಾರಿನ ಮೇಲೆ ನೃತ್ಯ ಮಾಡುವುದು ಕಠಿಣ ಸಾಹಸ. ಆ ಸಂದರ್ಭಗಳು ಥ್ರಿಲ್ಲಿಂಗ್ ಆಗಿದ್ದವು ಎಂದು ವಿವರಿಸಿದರು.
ಮೋಹನ್ ಬಿ.ಕೆರೆ ಚಿತ್ರದ ಸೆಟ್ ಹಾಕಿದ ಸಂದರ್ಭಗಳನ್ನು ವರ್ಣಿಸಿದರು. ನೃತ್ಯ ನಿರ್ದೇಶಕ ಮೋಹನ್, ಆನಂದ್ ಆಡಿಯೋ ಶ್ಯಾಮ್, ಹಾಡಿಗೆ ಸಾಹಿತ್ಯ ಬರೆದ ಮಂಜು, ರೀಷ್ಮಾ ನಾಣಯ್ಯ, ಛಾಯಾಗ್ರಾಹಕ ಡೇವಿಡ್ ವಿಲಿಯಂ, ಕೆವಿಎನ್ ಸಂಸ್ಥೆಯ ಸುಪ್ರೀತ್ ಮಾತನಾಡಿದರು.