ಹೆಸರಾಂತ ನಿರ್ದೇಶಕ; ಕನ್ನಡದ ಶೋಮ್ಯಾನ್ ಖ್ಯಾತಿಯ ಜೋಗಿ ಪ್ರೇಮ್ ಅವರು ಹಾಡುಗಳ ವಿಷಯದಲ್ಲಿ ಯಾವಾಗಲೂ ಹೆಚ್ಚುಗಾರಿಕೆ ಕಾಯ್ದುಕೊಳ್ಳುವುದು ರೂಢಿ.
ಪ್ರೇಮ್ ಅವರ ಬಹು ನಿರೀಕ್ಷೆಯ ‘ಕೆಡಿ’ ಚಿತ್ರದ ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ (ಸುಮಾರು 17.70 ಕೋಟಿ) ಮಾರಾಟವಾಗಿರುವುದು ಸ್ಯಾಂಡಲ್ ವುಡ್ ಗೆ ದೊಡ್ಡ ಪ್ರಭಾವಳಿಯನ್ನು ತಂದು ಕೊಟ್ಟಿದೆ.
ಮತ್ತು ಈಗ ಮೊದಲ ಹಾಡು ‘ಶಿವ ಶಿವ’ ಬಿಡುಗಡೆಯ ಹಾದಿಯಲ್ಲಿ ಬಹು ದೊಡ್ಡ ನಿರೀಕ್ಷೆ ಹಾಗೂ ಕುತೂಹಲ ಏರ್ಪಟ್ಟಿದೆ.
ಆನಂದ್ ಆಡಿಯೋ ಮೂಲಕ ಕನ್ನಡದ ಸಿನಿಮಾವೊಂದರ ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗಿರುವುದರಿಂದ ಈ ವಿಷಯದಲ್ಲಿ ಹೊಸ ಸಾಧ್ಯತೆಗಳು ತೆರೆದುಕೊಂಡಂತ್ತಾಗಿವೆ. ಹಾಗೆಯೇ ಈ ವಿಷಯದಲ್ಲಿ ಜೋಗಿ ಪ್ರೇಮ್ ಇಡೀ ಸ್ಯಾಂಡಲ್ ವುಡ್ ಬೆರಗಾಗುವಂತೆ ಅಚ್ಚರಿಗಳನ್ನು ಮೊಗೆದು ಕೊಟ್ಟಿದ್ದಾರೆ.
ಈಚೆಗೆ ನಿರ್ದೇಶಕ ಜೋಗಿ ಪ್ರೇಮ್, ನಾಯಕ ನಟ ಧ್ರುವ ಸರ್ಜಾ ಹಾಗೂ ಕಾರ್ಯಕಾರಿ ನಿರ್ಮಾಪಕ (ಕೆವಿಎನ್ ಸಂಸ್ಥೆಯ) ಸುಪ್ರೀತ್ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ವಿವರಗಳನ್ನು ನೀಡಿದರು.
ಕರ್ನಾಟಕದಲ್ಲಿ ಕೊತ್ವಾಲ್ ರಾಮಚಂದ್ರ, ಜೈರಾಜ್, ಆಯಿಲ್ ಕುಮಾರ್ ಹೀಗೆ ರೌಡಿ ಸಾಮ್ರಾಜ್ಯ ಮೆರೆದಾಡುವುದಕ್ಕೂ ಮುಂಚೆ ಇದ್ದ ವಿಚಿತ್ರ ಮ್ಯಾನರಿಜಂನ ಕಾಳಿದಾಸ (ಚಿತ್ರದಲ್ಲಿ ಹೆಸರು) ಎಂಬ ರೌಡಿಸಂ ಹಿನ್ನೆಲೆಯ ವ್ಯಕ್ತಿಯ ಕಥೆ ಇದು.
70ರ ದಶಕದಲ್ಲಿ ನಡೆಯುವ ಈ ಕಥೆಗೆ ಅದೇ ಮಾದರಿಯ ವಸ್ತ್ರ ವಿನ್ಯಾಸವನ್ನು ಚಿತ್ರದಲ್ಲಿ ಕಾಯ್ದುಕೊಳ್ಳಲಾಗಿದೆ. ಬದಲಾದ ತಂತ್ರಜ್ಞಾನದ ಸಂಪೂರ್ಣ ಬಳಕೆ ಮಾಡಲಾಗಿದೆ ಎಂಬ ವಿವರಗಳನ್ನು ನೀಡಿದರು ನಿರ್ದೇಶಕ ಜೋಗಿ ಪ್ರೇಮ್.
ಕಾಳಿದಾಸ ಪಾತ್ರದ ಹೆಸರು. ಆದರೆ ನಿಜವಾಗಿ ಅದು ಯಾರು ಎಂಬುದನ್ನು ಬಹಿರಂಗಪಡಿಸಲಾಗುವುದಿಲ್ಲ. ಏಕೆಂದರೆ ‘ಕರಿಯ’ ಚಿತ್ರ ಮಾಡಿದಾಗ ಹೆಸರಿನಿಂದ ಸಮಸ್ಯೆ ಎದುರು ಹಾಕಿಕೊಂಡಿದ್ದೆವು ಎಂಬ ವಿವರ ಕೊಟ್ಟರು.
ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಕೆಡಿ’ ಎರಡು ಹಾಡುಗಳ ಹೊರತುಪಡಿಸಿ ಚಿತ್ರೀಕರಣ ಮುಗಿಸಿದೆ. ಹಾಗೆಯೇ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋ ದಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.
ಈ ತಿಂಗಳು ಅಂದರೆ ಡಿಸೆಂಬರ್ 24 ರಂದು ‘ಶಿವ ಶಿವ’ ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ; ಈ ಹಾಡನ್ನು ಪ್ರೇಮ್ ಹಾಗೂ ಕೈಲಾಶ್ ಖೇರ್ ಹಾಡಿದ್ದಾರೆ.
ಉಳಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಲ್ಲಿನ ಗಾಯಕರೇ ಹಾಡಿದ್ದಾರೆ.
ಚಿತ್ರದಲ್ಲಿ ಆರು ಹಾಡುಗಳಿದ್ದು ‘ಕೆಡಿ’ ಇಂಡಿಯಾದಲ್ಲೇ ದೊಡ್ಡ ಆಲ್ಬಂ ಆಗಿ ಹೊರ ಹೊಮ್ಮಲಿದೆ ಎಂಬುದು ಚಿತ್ರತಂಡದ ನಿರೀಕ್ಷೆ.
ಜಾನಪದ ಶೈಲಿ ಹಾಡು ಕೂಡ ಚಿತ್ರದಲ್ಲಿದೆ. ಮೊದಲ ಹಾಡು ಇಲ್ಲಿ ಬಿಡುಗಡೆ ಮಾಡಲಾಗುವುದು. ಮತ್ತೊಂದು ಹಾಡು ಮುಂಬೈನಲ್ಲಿ ಬಿಡುಗಡೆ ಕಾಣುತ್ತಿದೆ.
ಚಿತ್ರಕ್ಕೆ ಒಟ್ಟು 150 ದಿನಗಳ ಚಿತ್ರೀಕರಣ ನಡೆದಿದ್ದು, ಇನ್ನುಎರಡು ಹಾಡುಗಳು ಮಾತ್ರ ಬಾಕಿ ಇವೆ ಮತ್ತು ಸಿನಿಮಾದಲ್ಲಿ ಬ್ಲಡ್ ಶೇಡ್ ಇದ್ದರೂ ಕಥೆಗೆ ಅದನ್ನೆಲ್ಲಾ ನಿಭಾಯಿಸುವ ಶಕ್ತಿ ಇದೆ ಎಂದು ಹೇಳುತ್ತಾ ಹೋದರು ಪ್ರೇಮ್.
ಧ್ರುವ ಸರ್ಜಾ ಕೇವಲ 21 ದಿನದಲ್ಲಿ 18 ಕೆ.ಜಿ. ತೂಕ ಕಡಿಮೆ ಮಾಡಿಕೊಂಡು ಈ ಚಿತ್ರದ ಸಲುವಾಗಿ ಬಹಳವೇ ಶ್ರಮ ಹಾಕಿದ್ದಾರೆ. ಅವರ ತ್ಯಾಗ ಮನೋಭಾವ ಬಹಳ ದೊಡ್ಡದು ಎಂದರು.
‘ನಾನು ನನ್ನ ಅಭಿಮಾನಿಗಳನ್ನು ರಂಜಿಸಲು ಎಂತಹ ತೊಂದರೆಯನ್ನು ಕೂಡ ಎದುರಿಸಲು ಸಿದ್ಧವಾಗಿರುವೆ’ ಎಂದು ಇದೇ ಸಂದರ್ಭದಲ್ಲಿ ಗಟ್ಟಿಯಾಗಿ ಹೇಳಿದರು ಧ್ರುವಸರ್ಜಾ.
ಈ ಸಿನಿಮಾದ ವ್ಯಾಪಾರಕ್ಕೆ ಇನ್ನು ತೆರೆದುಕೊಂಡಿಲ್ಲ; ಆದರೆ ಆಡಿಯೋ ಹಕ್ಕುಗಳು ದೊಡ್ಡ ಮಟ್ಟಕ್ಕೆ ಮಾರಾಟವಾಗಿದೆ. ನಿಮಗೆ ಬೇಕಾದರೆ ಒಪ್ಪಂದದ ದಾಖಲೆ ಮುಂದಿಡುವೆ ಎಂದರು ಕಾರ್ಯಕಾರಿ ನಿರ್ಮಾಪಕ ಸುಪ್ರೀತ್.
ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ’ ಯಲ್ಲಿ ಸಂಜಯ್ದತ್ ಧಕ್ ದೇವನಾಗಿ ಮಿಂಚಿದ್ದಾರೆ. ಅಲ್ಲದೆ ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
70 ರ ದಶಕದಲ್ಲಿ ನಡೆಯುವ ಕಥೆಯ ಚಿತ್ರೀಕರಣದ ಸಲುವಾಗಿ 20 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್ನ್ನು ಹಾಕಿ ಚಿತ್ರೀಕರಿಸಲಾಗಿದೆ.
ಹಾಡುಗಳು ವರ್ಣರಂಜಿತ ಮತ್ತು ಅದ್ದೂರಿ ಎಂಬುದರಲ್ಲಿ ಸಂಶಯವೇ ಇಲ್ಲ. ಅರ್ಜುನ್ ಜನ್ಯ 200 ವಿಶೇಷ ಸಂಗೀತಗಾರರನ್ನು ಕಲೆ ಹಾಕಿ ಹಾಡುಗಳನ್ನು ಸಂಯೋಜನೆ ಮಾಡಿದ್ದು, ಆರ್ಕೇಸ್ಟ್ರಾ ವಿಶೇಷ ನೆಲೆಯಲ್ಲಿ ದಾಖಲೆ ಮಾಡಿದೆ.
ಹಾಡುಗಳ ಸಲುವಾಗಿ ಆರು ನೃತ್ಯ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.
ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಚಿತ್ರದ ನಾಯಕಿಯಾಗಿದ್ದು, ನೋರಾ ಫತೇಹಿ ಸೇರಿದಂತೆ ಬಾಲಿವುಡ್ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರವು ಮುಂದಿನ ವರ್ಷದ ಯುಗಾದಿ ಹೊತ್ತಿಗೆ ತೆರೆಕಾಣಲಿದೆ ಎಂಬ ವಿವರಗಳು ಬಂದವು.