ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಬಿಡುಗಡೆ ಕಂಡ ಶ್ರೀಮುರುಳಿ ಅಭಿನಯದ ‘ಬಘೀರ’ ಅಭೂತಪೂರ್ವ ಯಶಸ್ಸು ದಾಖಲಿಸಿದೆ.
ಆ ಮೂಲಕ ಕೆ.ಜಿ.ಎಫ್ ಸರಣಿ ಹಾಗೂ ಕಾಂತಾರ ಚಿತ್ರಗಳ ಜೊತೆಗೆ ಮತ್ತೊಂದು ಯಶಸ್ಸಿನ ಕೀರ್ತಿಯನ್ನು ಹೊಂಬಾಳೆ ಫಿಲಮ್ಸ್ ಮುಡಿಗೇರಿಸಿಕೊಂಡಿತು.
ಹೊಂಬಾಳೆ ಫಿಲಮ್ಸ್ ನ ವಿಜಯ್ ಕಿರಗಂದೂರು ನಿರ್ಮಾಣದ, ಡಾ.ಸೂರಿ ನಿರ್ದೇಶನದ ಹಾಗೂ ಶ್ರೀಮುರಳಿ ಮುಖ್ಯ ಪಾತ್ರದಲ್ಲಿರುವ ‘ಬಘೀರ’ ಚಿತ್ರಕ್ಕೆ ಪ್ರೇಕ್ಷಕನ ಆಶೀರ್ವಾದ ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಶ್ರೀಮುರುಳಿ, ಡಾ.ಸೂರಿ ಹಾಗೂ ಚಿತ್ರತಂಡದ ಸದಸ್ಯರು ಅಭಿಪ್ರಾಯಗಳನ್ನು ಹಂಚಿಕೊಂಡರು.
ಇದು ಅಭಿಮಾನಿಗಳ ಯಶಸ್ಸು; ಚಿತ್ರತಂಡದ ಶ್ರಮ; ಮೂರು ವರ್ಷಗಳ ಪರಿಶ್ರಮ ಎಂದರು ಶ್ರೀಮುರಳಿ. ಯಾವುದಕ್ಕೂ ಕೊರತೆ ಮಾಡದೆ ಹಣ ಹೂಡಿಕೆ ಮಾಡಿದ ಹೊಂಬಾಳೆ ಫಿಲಮ್ಸ್ ವಿಜಯ ಕಿರಗಂದೂರು , ಸತತ ಪರಿಶ್ರಮ ಹಾಕಿದ ನಿರ್ದೇಶಕ ಡಾ.ಸೂರಿ ಹಾಗೂ ತಂತ್ರಜ್ಞರ ಶ್ರಮದ ಫಲ ಇದು ಎಂದರು.
ಛಾಯಾಗ್ರಾಹಕ ಎ.ಜೆ.ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ಹಾಗೂ ಸಹ ಕಲಾವಿದರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು ಶ್ರೀಮುರುಳಿ.
ಹತ್ತು ವರ್ಷಗಳ ಹಿಂದೆ ಡಾ||ಸೂರಿ ಅವರ ಜೊತೆಗೆ ಒಂದು ಚಿತ್ರದ ಕುರಿತು ಮಾತನಾಡಿದ್ದೆ. ಆ ಚಿತ್ರವನ್ನು ಸೂರಿ ಅವರು ಬೇಗ ಆರಂಭಿಸಲಿ ಎಂದರು.
ಇದು ನಮ್ಮ ನಿರೀಕ್ಷೆಗೂ ಮೀರಿದ ಗೆಲುವು. ಹಬ್ಬದ ಸಮಯದಲ್ಲಿ ಇಷ್ಟು ಜನರು ಬಂದು ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿರುವುದು ನಿಜಕ್ಕೂ ಸಂತೋಷವಾಗಿದೆ. ಅವರೆಲ್ಲರಿಗೂ ನಾನು, ನನ್ನ ತಂಡ ಚಿರ ಋಣಿ. ನನ್ನ ಮೇಲೆ ನಂಬಿಕೆಯಿಟ್ಟು ಬಿಗ್ ಬಜೆಟ್ ನ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ, ಒಳ್ಳೆಯ ಕಥೆ ಕೊಟ್ಟ ಪ್ರಶಾಂತ್ ನೀಲ್ ಅವರಿಗೆ, ಬಘೀರನ ಪಾತ್ರಕ್ಕೆ ಜೀವ ತುಂಬಿದ ಶ್ರೀಮುರಳಿ ಅವರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ದೇಶಕ ಡಾ||ಸೂರಿ.
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಎ.ಜೆ.ಶೆಟ್ಟಿ, ಸಂಕಲನಕಾರ ಪ್ರಣವ್ ಶ್ರೀ ಪ್ರಸಾದ್, ಕಲಾ ನಿರ್ದೇಶಕ ರವಿ ಸಂತೆಹೆಕ್ಲು ಸೇರಿದಂತೆ ಅನೇಕ ತಂತ್ರಜ್ಞರು ಹಾಗೂ ಅಚ್ಯುತ ಕುಮಾರ್, ಗರುಡರಾಮ್, ರಘು ರಾಮನಕೊಪ್ಪ ಮುಂತಾದ ಕಲಾವಿದರು ಚಿತ್ರದ ಗೆಲುವನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.