ರೇಟಿಂಗ್ : 3/5
ಸ್ವಾರ್ಥ ಮನುಷ್ಯರ ವಿಕೃತ ಜಗತ್ತು
ಮನುಷ್ಯನ ಸ್ವಾರ್ಥಪರತೆ ಆಸೆಬುರುಕುತನ ವಂಚನೆ ಇವುಗಳಿಗೆ ಕೊನೆಯೇ ಇರುವುದಿಲ್ಲ. ನಾಗರಿಕತೆ ಹೆಚ್ಚು ಬೆಳೆದಂತೆ ಆತ ಕರುಣೆಯನ್ನೇ ಮರೆತ್ತಿದ್ದಾನೆ.
ಇಲ್ಲಿನ ಹುಡುಗ ಶ್ರೀಕಂಠ ಕಿವಿ ಕೇಳಿಸದ ಮಾತು ಬಾರದ ಚೈತನ್ಯ. ಆತನ ಪ್ರೀತಿ ಭಾವುಕತೆ ಪ್ರಾಣಿಗಳ ಜೊತೆ. ಮನುಷ್ಯ ಇಲ್ಲಿ ಕಠೋರ.
ಜನರು ತಮ್ಮ ಅನೈತಿಕ ವ್ಯವಹಾರಗಳನ್ನು ಗುಟ್ಟಾಗಿ ಇಡುವುದು ಸಾಮಾನ್ಯ. ಸಮಯ ಬಂದರೆ ಅದನ್ನು ಅಮಾಯಕರ ಹೇರುವ ದುಷ್ಟ ಮನಸ್ಸು ಅವರಿಗಿರುತ್ತದೆ.
ಕಚ್ಚೆ ಹರುಕ ಪೂಜಾರಿ ತನ್ನ ತಪ್ಪನ್ನೆಲ್ಲಾ ಚೈತನ್ಯ ಶ್ರೀಕಂಠನ ಮೇಲೆ ಹೇರುವುದರಿಂದ ಆ ಹುಡುಗ ಕಷ್ಟದ ಕಾಠಿಣ್ಯಕ್ಕೆ ಸಿಲುಕುತ್ತಾನೆ. ಆಸರೆಯಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಅಮ್ಮನ ಸಾವು; ಆತ ಊರು ಬಿಡಬೇಕಾದ ಸಂದರ್ಭ ಎಲ್ಲವೂ ಮನ ಮಿಡಿಯುತ್ತದೆ.
ಪಟ್ಟಣಕ್ಕೆ ಬಂದ ನಂತರ ಜನರ ವರ್ತನೆ ಮತ್ತು ಅಮಾಯಕತೆಯಿಂದ ಆತ ಅನಾಥ ಭಾವ ಅನುಭವಿಸುವುದು ಸ್ವಂತ ಭಾವನೇ ಆತನನ್ನು ದೂರ ಮಾಡುವ ಸಂಚು ಹೂಡುವುದು. ಕೊನೆಗೆ ಹೃದಯವಂತ ಇನ್ಸ್ ಪೆಕ್ಟರ್ ಕಾರಣದಿಂದ ಒಂದು ಗುರಿಯನ್ನು ಮುಟ್ಟುವುದು ಅಚ್ಚರಿ.
ಜೆ.ಎಂ.ಪ್ಲಹಾದ್ ಅವರ ಕಥೆಯನ್ನು ಚಿತ್ರವಾಗಿಸಲು ನಟ ಶ್ರೀನಾಥ್ ವಸಿಷ್ಠ
ಅವರ ಮಿತಿಯಲ್ಲಿ ಪ್ರಯತ್ನ ಪಟ್ಟಿದ್ದಾರೆ. ಮನೋಜ್ಞ ಕಥೆಗೆ ಹಳೆಯ ನಿರೂಪಣಾ ವಿಧಾನವನ್ನೇ ಬಳಸಿದ್ದಾರೆ.
ಹೊಸತನಕ್ಕೆ ತೆರೆದುಕೊಂಡು ಮತ್ತಷ್ಟು ಚೆನ್ನಾಗಿ ಕಥೆ ಹೇಳಬಹುದಿತ್ತು ಎಂಬ ಅಭಿಪ್ರಾಯ ಪ್ರೇಕ್ಷಕನಲ್ಲಿ ಮೂಡಿ ಬಂದರೆ ಅದು ಅವರ ತಪ್ಪಲ್ಲ.
ಮುಖ್ಯ ಪಾತ್ರದಲ್ಲಿರುವ ಶ್ರೀಹರ್ಷ, ಕಾರ್ತಿಕ್ ಮಹೇಶ್, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್, ವೆಂಕಟಾಚಲ, ಶ್ರೀನಾಥ್ ವಸಿಷ್ಠ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಜನರ ಕೆಡುಕು ನಡೆಯ ಮೇಲೆ ಬೆಳಕು ಚೆಲ್ಲುತ್ತಲೇ ಮಾನವೀಯ ನೆಲೆಯಲ್ಲಿ ಚಿಂತನೆ ಅಗತ್ಯ ಎಂಬುದನ್ನು ಚಿತ್ರವು ಪ್ರತಿಪಾದಿಸುತ್ತದೆ.
ವಿಕಲ ಚೇತನರು ಮನಸ್ಸು ಮಾಡಿದರೆ ಮತ್ತು ಅವರಿಗೆ ಅಗತ್ಯ ಪ್ರೋತ್ಸಾಹ ದೊರೆತರೆ ಎಂತಹ ದೊಡ್ಡ ಸಾಧನೆಯನ್ನು ಕೂಡ ಮಾಡಬಲ್ಲರು ಎಂಬ ಸಂದೇಶ ಸಾರುವ ಚಿತ್ರವಾಗಿ ಇದು ನಿಲ್ಲುತ್ತದೆ.