Snehapriya.com

June 9, 2025

ಭೈರಾದೇವಿ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಶಮಿಕ ಎಂಟರ್ ಪ್ರೈಸಸ್ ಮೂಲಕ ರಾಧಿಕಾ ಕುಮಾರಸ್ವಾಮಿ

ನಿರ್ದೇಶನ : ಶ್ರೀ ಜೈ

ಅಘೋರಿಗಳ ಅದ್ದೂರಿ ಕುಣಿತ
ಪಾಪ ಕರ್ಮಗಳ ಪ್ರಾಯಶ್ಚಿತ್ತ..

ಮನುಷ್ಯರ ನಡವಳಿಕೆ ಕುರಿತ ಮನುಷ್ಯರು ಕಾಣದ ಅಗೋಚರ ಪ್ರಪಂಚ ಅಘೋರಿಗಳ ಸಾಧನೆ..

ಪ್ರಾಪಂಚಿಕವಾದ ಎಲ್ಲಾ ನಿಯಮಗಳನ್ನು ತೊರೆದು ಮುಕ್ತವಾಗಿ ಜೀವಿಸುವ ಅವರ ಜೀವನ ಕ್ರಮ ಅತಿ ಭಯಾನಕ..

ಮನುಷ್ಯನ ಆತ್ಮವನ್ನು ಹಿಡಿದಿಟ್ಟು ಮಾತನಾಡಿಸಬಲ್ಲ ಸಾಮರ್ಥ್ಯ; ಸಾಧನೆ ಸಿದ್ಧಿಗಾಗಿ ಅಥವಾ ಅತಿಮಾನುಷ ಶಕ್ತಿಯನ್ನು ವಶಪಡಿಸಿಕೊಳ್ಳಲು ಅವರು ಅನುಸರಿಸುವ ಮಾರ್ಗ ವೈರಾಗ್ಯಕ್ಕಿಂತಲೂ ಕಠಿಣ..

ಆದರೆ ಅಘೋರಿಗಳ ‌ಸಾಧನೆಯ ಬೆನ್ನು ಹತ್ತಿ ಹೋಗಿರುವ ಭೈರಾದೇವಿ ಯಲ್ಲಿ ಕಾಣುವುದು ಭಯಾನಕವಲ್ಲದ ಸುಂದರ ಮೂರ್ತ ರೂಪ(ಕ)ಗಳು..

ಮನೆಯಲ್ಲಿಯೇ ಕಾಡುವ ಅಮೂರ್ತ ರೂಪದ ‌ಭಯಾನಕ ಆತ್ಮ ಮತ್ತು ಅದರ ಅಸ್ತಿತ್ವ ಕೆದುಕಲು ಹೋದ ಪೊಲೀಸ್ ವರಿಷ್ಠಾಧಿಕಾರಿ ತಾನೇ ನೇಯ್ದ ಬಲೆಯಲ್ಲಿ ಸಿಕ್ಕಿಕೊಳ್ಳುವುದು ವಿಚಿತ್ರ.

ಬೇರೆಯದೇ ಆದ ನೆಲೆಯಲ್ಲಿ ಕಥೆ ಕಟ್ಟುವ ಆತುರದ ಪ್ರಯತ್ನದಲ್ಲಿ ನಿರ್ದೇಶಕರು ವ್ಯವಸ್ಥೆಯನ್ನು ಅದರಲ್ಲೂ ಪೊಲೀಸ್ ವ್ಯವಸ್ಥೆಯನ್ನು ಪರಿಶೀಲಿಸಿದಂತೆ ಕಾಣುವುದೇ ಇಲ್ಲ.

ಆತ್ಮವನ್ನು ಬಂಧಿಸಲು ಅಘೋರಿಗಳ ನೆರವು ಪಡೆಯುವ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಪ್ರಯತ್ನದ ಫಲವಾಗಿ ಅಘೋರಿಗಳ ಅಗೋಚರ ಪ್ರಪಂಚ ಕಾಣ ಸಿಗುತ್ತದೆ.

ಅದರಲ್ಲೊಬ್ಬ ಸುಂದರ ಹೆಣ್ಣು ಮಗಳು ವೈರಾಗ್ಯದ ವಿರೋಧದ ನೆಲೆಯಲ್ಲಿ ಕಾಣುವುದು ಅಚ್ಚರಿ ಆದರೂ ಅಘೋರಿಗಳ ನೃತ್ಯದ ಸಂದರ್ಭದಲ್ಲಿ ಆಕೆಯ ಹೆಜ್ಜೆಗಳು ಮನಮೋಹಕ.

ಶವದ ಮಾಂಸವನ್ನು ಭಕ್ಷಣೆ ಮಾಡುವ ಆಕೆಯ ವರಸೆ ಅತ್ಯಂತ ಸೋಜಿಗ. ತ್ರಿಶೂಲ ಹಿಡಿದು ಕಾರಿನಲ್ಲಿ ಕಾಶಿಯಿಂದ ಬೆಂಗಳೂರಿಗೆ ಬರುವ ಆಕೆಯ ಪ್ರಭಾವಲಯ ಪ್ರಶ್ನಾತೀತ.

ಹೆಣ್ಣನ್ನು ರಕ್ಷಣೆ ಮಾಡುವ ಕಾಳಿ ಮಾತಾ ಅದ್ಭುತ. ಆದರೆ ತನ್ನನ್ನೇ ಹೋಲುವ ಆತ್ಮದ ಅಸ್ತಿತ್ವ ಅಚ್ಚರಿಯ ಜೊತೆಗೆ ಪ್ರಶ್ನಾತೀತ. ಆ ಆತ್ಮದ ನೆಲೆ ಬೆಲೆ ಮತ್ತೂ ಅಚ್ಚರಿ.

ಪ್ರಾಪಂಚಿಕವಾದ ನೆಲೆಯಲ್ಲಿ ‌ಪುರುಷ ಅತ್ಯಂತ ಸ್ವಾರ್ಥಿ ಮತ್ತು ಆಸೆಬುರುಕ. ಆತನಲ್ಲಿ ಹೆಡೆ ಎತ್ತುವ ತನ್ನದೆನ್ನುವ ವಾಂಛೆ ಎಂತಹ ಹೀನ ಕೆಲಸಕ್ಕೂ ಪ್ರೇರೇಪಿಸುತ್ತದೆ.

ಚಿತ್ರದ ದ್ವಿತೀಯಾರ್ಧದಲ್ಲಿ ಮಾತಾ ಭೈರಾದೇವಿ ಕಾಣೆಯಾದರೂ ಯಂತ್ರಗಳ ಮೂಲಕ ಆತ್ಮವನ್ನು ಶೋಧಿಸುವ ಭೂಮಿಕಾ ತನ್ನ ಸ್ನಿಗ್ಧ ಸೌಂದರ್ಯದಿಂದ ಅರವಿಂದ್ ಜೊತೆಗೆ ಪ್ರೇಕ್ಷಕರನ್ನೂ ಮೋಡಿ ಮಾಡುವುದು ವಿಶೇಷ.

ಆಸೆಯ ಬಲೆಯನ್ನು ತನ್ನ ಸುತ್ತಲೂ ನೆಯ್ದುಕೊಳ್ಳುವ ಅರವಿಂದ್ ಗೆ ಮೇಲಿಂದ ಮೇಲೆ ಘಟಿಸುವ ದುರಂತಗಳ ಬಗ್ಗೆ ಅರಿವೇ ಇಲ್ಲ. ಸುತ್ತಲೂ ಆವರಿಸಿರುವ ಮೋಹಪಾಶದಲ್ಲಿ ಅಧಿಕಾರ ಮತ್ತು ಕಾರ್ಯಗಳು ಮರೆತೇ ಹೋಗಿವೆ.

ಆತ್ಮವನ್ನು ಬಂಧಿಸಿಟ್ಟರೂ ಬಿಡದ ಮೋಹಪಾಶ ಸೇಡಿನ ಕಿಡಿಯಾಗುತ್ತದೆ. ಅದೇ ಭಾಗ ಎರಡಕ್ಕೆ ಮುನ್ನುಡಿ. ಹಠಾತ್ ಅಂತ್ಯ ಕಾಣುವ ಕಥೆಗೆ ಪ್ರೇಕ್ಷಕನ ಆತ್ಮದಲ್ಲಿ ತುಡಿಯುವ ನಿರಾಶೆಯ ಹೊಗೆ ತನ್ನೊಳಗೇ ಲೀನವಾಗುವುದರಿಂದ ಹೊರಗೆ ಕಾಣುವುದೇ ಇಲ್ಲ.

ಮಾತಾ ಭೈರಾದೇವಿ ಮತ್ತು ಕಾಳಿ ಮಾತಾ ವೇಷದಲ್ಲಿ ರಾಧಿಕಾ ಕುಮಾರಸ್ವಾಮಿ ಪರಕಾಯ ಪ್ರವೇಶ ಮಾಡಿದ್ದರೂ ಗ್ಲಾಮರ್ ಯುಕ್ತ ಕಣ್ಣೋಟದಿಂದ ಭಯ ಹುಟ್ಟುವುದೇ ಇಲ್ಲ.

ಆದರೆ ‘ಜೈ ದುರ್ಗಾ ರೀಮ್ ದುರ್ಗಾ..’ ಎಂಬ (ರವಿಶಂಕರ್ ಹಾಡಿರುವ) ಹಾಡಿನಲ್ಲಿ ಪ್ರೇಕ್ಷಕ ಎದ್ದೆದ್ದು ಕುಣಿಯದೇ ಹೋದರೆ ಅದು ಅಚ್ಚರಿ.

ಸಂಗೀತ ನಿರ್ದೇಶಕ ಕೆ.ಕೆ.ಸೆಂಥಿಲ್ ಪ್ರಸಾದ್, ಛಾಯಾಗ್ರಾಹಕ ಜೆ.ಎಸ್.ವಾಲಿ ಹಾಗೂ ಕಲಾ ನಿರ್ದೇಶಕರ ಕಲಾ ಕುಸುರಿ ಜೊತೆಗೆ ನಿರ್ದೇಶಕರ ಅತ್ಯಾದ್ಭುತ ಕಲ್ಪನೆಗೆ ತಕ್ಕಂತೆ ಹೊಂದಿಸಲಾಗಿರುವ ಅದ್ದೂರಿತನ ಕಾಣುವುದು ಇಲ್ಲಿಯೇ..

ರಮೇಶ್ ಅರವಿಂದ್ ವಿರೋಧಾಭಾಸದ ಪಾತ್ರವನ್ನು ಅತ್ಯಂತ ಜಾಣ್ಮೆಯಿಂದ ಮತ್ತು ವ್ಯವಧಾನಯುಕ್ತ ನಡವಳಿಕೆಯಿಂದ ನಿಭಾಯಿಸಿರುವುದು ಎದ್ದು ಕಾಣುತ್ತದೆ.

ರಂಗಾಯಣ ರಘು ಅವರ ಪಾತ್ರವಂತೂ ನಕ್ಕು ನಗಿಸುತ್ತದೆ. ಕಾಶಿಯಲ್ಲಿ ಚಿತ್ರೀಕರಣ ನಡೆದಾಗ ಪಾಲ್ಗೊಂಡಿದ್ದ ದಿವಂಗತ ಶಿವರಾಮ್ (ಶರಪಂಜರ) ಮತ್ತೆ ಮತ್ತೆ ನೆನಪಾಗುತ್ತಾರೆ.

‘ಘೋರ ರೂಪ’ ಪದಗಳಲ್ಲಿ ಕಂಡರೂ ಅಂಜನಾ ಹಾಕಿ ನೋಡುವ (ಈಗಿನ ಸಿಸಿ ಟಿವಿ) ತಂತ್ರ ಸಾಧಕರ ಉಪಾಯ. ಭಂಗಿ‌ ಸೇದುವ ಮಾತಾ ವರಸೆ; ಅರಣ್ಯದಲ್ಲಿ ಕಾಣುವ ನೆರಳು ಬೆಳಕಿನ ಪರಿಣಾಮಗಳು; ಡಿಸಿಪಿ ಮನೆಯ ಸುತ್ತಲೂ ಆವರಿಸು ಕಪ್ಪು ಮೋಡದಂತಹ ಆತ್ಮದ ನೆರಳು ಚಿತ್ರದ ತಾಂತ್ರಿಕ ಶ್ರೀಮಂತಿಕೆಯನ್ನು ಪ್ರೇಕ್ಷಕನ ಮನಸ್ಸಿನಲ್ಲಿ ಉಳಿಸುತ್ತವೆ.

ರವಿಶಂಕರ್, ಅನು ಪ್ರಭಾಕರ್, ಸ್ಕಂದಾ ಅಶೋಕ್ ಪಾತ್ರಗಳು ಗಮನಾರ್ಹ.

ಭೈರಾದೇವಿ ಭಯಾನಕವಲ್ಲ; ಆದರೆ ಅತ್ಯುತ್ತಮ ಸಂದೇಶ ಇರುವ ಚಿತ್ರವಾಗಿರುವುದರಿಂದ ಇಡೀ ಕುಟುಂಬ ನೋಡಿ ನಕ್ಕು ನಲಿದು ಬರಬಹುದು..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *