ರೇಟಿಂಗ್ : 3/5
ನಿರ್ಮಾಣ : ಕೆ.ಎಂ.ನಟರಾಜ್
ನಿರ್ದೇಶನ : ಶೀನು ಸಾಗರ್
ಮಾನವ ಸಹಜ ಗುಣದ ವಾಂಛೆ..!
ಗ್ರಾಮೀಣ ಭಾಗದ ಅನಕ್ಷರಸ್ಥ ಅಥವಾ ಅರೆ ವಿದ್ಯಾವಂತ ಯುವ ಜನರ ನಡವಳಿಕೆ ಹೇಗಿರುತ್ತದೆ ಎಂಬುದಕ್ಕೆ ನಿದರ್ಶನಗಳು ಎಂಬಂತೆ ಮೂಡಿ ಬಂದಿರುವ ಚಿತ್ರದಲ್ಲಿ ಯುವ ಜನರ ಗದ್ಧಲವೇ ಎದ್ದು ಕಾಣುತ್ತದೆ.
ಮಂಜ ಎಂಬ ಕುರಿ ಕಾಯುವ ಯುವಕನ ಸುತ್ತ ಆವರಿಸುವ ಕಥೆಯಲ್ಲಿ ನೈಜತೆಗೆ ಹತ್ತಿರವಾದ ಘಟನೆಗಳೂ ನಡೆದು ಹೋಗುತ್ತವೆ.
ಮಂಜ ಮತ್ತು ಆತನ ಬೇಲಿ ಹಾರುವ ಕೆಲಸಗಳು ಎಗ್ಗಿಲ್ಲದೇ ನಡೆದು ಹೋಗುತ್ತಿರುವಾಗ ಅನಿರೀಕ್ಷಿತ ಘಟನೆಯೊಂದು ನಡೆಯುತ್ತದೆ.
ಕುರಿಫಾರಂಗೆ ಹೊಸ ಸಂಸಾರವೊಂದು ಪ್ರವೇಶ ಪಡೆಯುತ್ತದೆ. ಸಾಮಾನ್ ಸಣ್ಣಪ್ಪ (ಟೆನ್ನಿಸ್ ಕೃಷ್ಣ) ಎಂಬ ವ್ಯಕ್ತಿ ಮತ್ತು ಆತನ ಪತ್ನಿ ಹಾಗೂ ಮಗಳು ಬಂದಿಳಿಯುತ್ತಾಳೆ. ಸಣ್ಣಪ್ಪ ಕುಡುಕ. ಆತನ ಪತ್ನಿ ವ್ಯಭಿಚಾರಿ; ಮಗಳು ವಾಸಂತಿ ಮಂಜನ ಕ್ರಷ್.
ಮೂಲತಃ ಸ್ವಭಾವದಲ್ಲಿ ಕಚ್ಚೆ ಹರುಕತನ ಹೊಂದಿರುವ ಮಂಜ, ಪ್ರೇಮಿಸುವ ಹುಡುಗಿಯ ವಿಚಾರಕ್ಕೆ ಬಂದಾಗ ಮಡಿವಂತ. ಆಕೆಯ ಸಲುವಾಗಿ ಎಂಥಹ ತೊಂದರೆ ಎದುರು ಹಾಕಿಕೊಳ್ಳಲು ಸಿದ್ಧ.
ಇಂತಹ ವೇಳೆಯಲ್ಲಿ ವಾಸಂತಿ ಅಮ್ಮ ಮತ್ತು ತೋಟದ ಮಾಲೀಕ ಕೇದಾರ್ ನಾಥ್ ಇಬ್ಬರ ಅನೈತಿಕ ವಿಷಯವೊಂದು ಬಿಚ್ಚಿಕೊಳ್ಳುತ್ತದೆ. ಇದು ಸಾಮಾನ್ ಸಣ್ಣಪ್ಪನಿಗೆ ತಿಳಿದಾಗ ಆತನ ಕೊಲೆಯಾಗುತ್ತದೆ. ಇದರಿಂದ ರೊಚ್ಚಿಗೆದ್ದ ವಾಸಂತಿ ಮಂಜನಿಗೆ ಸುಫಾರಿ ಕೊಡುವುದು ನಡೆಯುತ್ತದೆ.
ಇದರಿಂದ ಮಂಜ ಕೆಲಸ ಕೊಟ್ಟ ಕೇದಾರ್ ನಾಥ್ ನನ್ನು ಮುಗಿಸಲು ಸಂಚು ಹೂಡಿ ಆ ಕೆಲಸವೂ ಬೇಗನೆ ಮುಗಿದು ಹೋಗುತ್ತದೆ. ಇದೇ ವೇಳೆ ಮಂಜನ ಸ್ನೇಹಿತರ ಎರಡು ಹುನ್ನಾರವೂ ಮುಖಗಳು ಎದ್ದು ಕಾಣುತ್ತವೆ.
ಆದರೆ ಅದೆಲ್ಲವೂ ಗಾಂಜಾ ಮಾದರಿಯ ಸಿಗರೇಟ್ ಸೇದಿ ಮತ್ತಿನಲ್ಲಿ ಉಂಟಾದ ಕನಸು ಎಂಬುದು ಪ್ರೇಕ್ಷಕನಿಗೇ ಗೊಂದಲವಾಗಿ ಕಾಡುತ್ತದೆ. ನಿರ್ದೇಶಕರು ಕನಸು ಭ್ರಮೆಯ ವ್ಯತ್ಯಾಸ ಕಾಣದಂತೆ ಗಟ್ಟಿಯಾಗಿ ಕಥೆ ಹೊಸೆದಿರುವುದು ಎದ್ದು ಕಾಣುತ್ತದೆ.
ಒಂದು ಕುರಿಫಾರಂ ಅಲ್ಲಿನ ಕಾವಲುಗಾರ ಮಂಜ ಮತ್ತು ಆತನ ಪೋಲಿ ಗೆಳೆಯರು ಇದಿಷ್ಟೇ ಒಂದು ಗ್ರಾಮವಾಗಿ ಕಾಣಿಸಲು ಪ್ರಯತ್ನಿಸಿರುವ ನಿರ್ದೇಶಕರು ಗ್ರಾಮೀಣ ಭಾಗದ ಸುಂದರ ವಿಷಯಗಳತ್ತ ಗಮನ ಹರಿಸದೇ ಹೋಗಿರುವುದು ದೊಡ್ಡ ಕೊರತೆ.
ಮನರಂಜನಾ ದೃಷ್ಟಿಯಿಂದ ಚಿತ್ರವು ಸರಿ ಎನಿಸಿದರೂ ಎಗ್ಗಿಲ್ಲದ ಪೋಲಿ ಮಾತು ಮತ್ತು ಸಂಕೇತಗಳು ಕೆಲವರಿಗೆ ಇರಿಸು ಮುರುಸು ಮಾಡುತ್ತವೆ ಎಂಬುದು ಕಟು ವಾಸ್ತವ.
ಕಾಮಿಡಿ ಕಿಲಾಡಿಗಳು ಕಲಾವಿದರ ಪಾರುಪಥ್ಯ ಇಲ್ಲಿಯೂ ಇದೆ. ಮುಖ್ಯ ಪಾತ್ರದಲ್ಲಿ ಮಡೇನೂರು ಮನು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಇನ್ನುಳಿದಂತೆ ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ ಮೊದಲಾದವರ ಪಾತ್ರ ಗಮನಾರ್ಹ.
ರಾಜೇಶ್ ಸಾಲುಂಡಿ ಸಂಭಾಷಣೆ, ರಾಕೇಶ್ ತಿಲಕ್ ಛಾಯಾಗ್ರಹಣ, ಸನ್ನಿ ಸಂಗೀತ ಚಿತ್ರಕ್ಕೆ ಪೂರಕ.