ರೇಟಿಂಗ್ : 3/5
ನಿರ್ಮಾಣ : ಪನರ್ ಗೀತಾ ಸಿನಿಮಾಸ್ ಬ್ಯಾನರ್ ನಡಿ
ಗೋಪಾಲ್ ಹಳೆಪಾಳ್ಯ
ನಿರ್ದೇಶನ : ಗೋಪಾಲ್ ಹಳೇ ಪಾಳ್ಯ
ಪುನರಪಿ ಜನನಂ ಪುನರಪಿ ಮರಣಂ
ಆತ್ಮ ಸಾಯುವುದಿಲ್ಲ; ಬದಲಿಗೆ ಮರುಹುಟ್ಟು ಪಡೆಯುತ್ತದೆ. ಆದರೆ ಜನ್ಮಾಂತರದ ಫಲಗಳು ಅವರವರ ಕರ್ಮದ ಆಧಾರದಲ್ಲಿ ಪೂರ್ವ ನಿಯೋಜಿತವಾಗಿರುತ್ತವೆ..
ಈ ಅಂಶಗಳನ್ನು ಪ್ರಸ್ತುತಪಡಿಸಲು ನಿರ್ದೇಶಕರು ರಸ್ತೆಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಅದೇ ನೈಟ್ ರೋಡ್..
ಪೊಲೀಸ್ ಇನ್ಸ್ ಪೆಕ್ಟರ್ ದಕ್ಷ (ಧರ್ಮ) ಹೆಸರಿಗೆ ತಕ್ಕ ದಕ್ಷ ಅಧಿಕಾರಿ. ಆದರೆ ಸ್ವಂತ ತಮ್ಮ(ಕಲ್ಯಾಣ್)ನೆ ಅವರಿಗೆ ತಲೆ ನೋವಾಗಿ ಪರಿಣಮಿಸಿ ಸಾವಿಗೀಡಾಗುತ್ತಾನೆ. ಆತನ ಸಾವಿನ ತನಿಖೆಗೆ ಹೊರಟ ದಕ್ಷಗೆ ಎದುರಾಗುವುದು ತರ್ಕಕ್ಕೆ ನಿಲುಕದ ದೊಡ್ಡ ದೊಡ್ಡ ಸವಾಲುಗಳು..
ಒಂದೇ ಜಾಗದಲ್ಲಿ ನಿಗೂಢ ಸಾವಿಗೀಡಾದ ದಕ್ಷನ ತಮ್ಮ ಕಲ್ಯಾಣ್ ಮತ್ತು ಸೂರಪ್ಪ ಎಂಬ ಮತ್ತೊಬ್ಬ ವ್ಯಕ್ತಿಯ ಸಾವುಗಳಿಗೆ ಹೊಂದಾಣಿಕೆ ಇರುತ್ತದೆ. ಅವರ ಹೆಸರು ಮತ್ತು ಊರು ಹಾಗೂ ಹುಟ್ಟಿದ ದಿನಾಂಕ ಪರಿಶೀಲಿಸುತ್ತಾ ಹೋಗುವ ಇನ್ಸ್ ಪೆಕ್ಟರ್ ದಕ್ಷ ಅದಕ್ಕಾಗಿ ಹುಡುಕಿಕೊಳ್ಳುವ ಮಾರ್ಗ ಆಧ್ಯಾತ್ಮ..
ಮಂದಾರ್ತಿ ಎಂಬ ಗ್ರಾಮದ ರಸ್ತೆಯಲ್ಲಿ ಕರಾಳ ಅಮಾವಾಸ್ಯೆಯ ದಿನ ಅಪಘಾತದಿಂದ ವ್ಯಕ್ತಿಗಳು ಬಲಿಯಾಗುತ್ತಾರೆ. ಅಚ್ಚರಿ ಎಂದರೆ ಅವರೆಲ್ಲಾ ಕೆಡುಕಿನ ಗುಣವುಳ್ಳವರೇ ಆಗಿರುತ್ತಾರೆ.
ನೈಟ್ ರೋಡ್ ಇತಿಹಾಸ. ಅಲ್ಲಿ ಬರುವ ರಣಭೈರೇಗೌಡ ಎಂಬ ವ್ಯಕ್ತಿಯ ಇತಿಹಾಸ. ಕೊನೆಗೆ ತನ್ನ ಕೈಕೆಳಗೆ ಕೆಲಸ ಮಾಡುವ ಸಾಗರ್ ಎಂಬ ಸಬ್ ಇನ್ಸ್ ಪೆಕ್ಟರ್ ರಣ ಭೈರೇಗೌಡನ ಈ ಜನ್ಮ ಎಂಬುದನ್ನೆಲ್ಲಾ ಪರಿಶೀಲಿಸಿ ಮುಗಿಸುವ ಹೊತ್ತಿಗೆ ಸಿನಿಮಾ ಮುಗಿದೇ ಹೋಗುತ್ತದೆ..
ತಾಳ್ಮೆಯಿಂದ ಪರಿಶೀಲಿಸಿದರೆ ನಿಗೂಢ ಸತ್ಯಗಳು ಹೊರ ಬರುತ್ತವೆ;
ಈ ಜನ್ಮದಲ್ಲಿ ಸಿಗದಿದ್ದ ಶಿಕ್ಷೆ ಮುಂದಿನ ಜನ್ಮದಲ್ಲಿ ಸಿಗುತ್ತದೆ; ಕರ್ಮ ಯಾರನ್ನೂ ಬಿಡುವುದಿಲ್ಲ ಎಂಬ ಅತಾರ್ಕಿಕ ವಿಷಯಗಳು ಇಲ್ಲಿ ಹೆಚ್ಚು ಮಹತ್ವ ಪಡೆಯುವುದೇ ವಿಶೇಷ.
ರಸ್ತೆಯ ಮೇಲೆ ಹೋಗುವ ವಾಹನಗಳನ್ನು ಮೇಲಿನಿಂದ ಸೆರೆ ಹಿಡಿದಿಡುವುದು ಮತ್ತು ದಕ್ಷ ಕೆಲ ಸಂಖ್ಯೆ ಗಳನ್ನು ಬಳಸಿ ಉತ್ತರ ಕಂಡುಕೊಳ್ಳುವ ಮಾರ್ಗ ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುವುದು ನಿಜ.
ಆದರೆ ನಿರ್ದೇಶಕರು ಕಲ್ಪನೆಗೆ ನಿಲುಕದ ವಿವೇಚನಾ ಮಾರ್ಗವನ್ನು ಅನಗತ್ಯವಾಗಿ ಹೇರಿಕೆ ಮಾಡುವುದರಿಂದ ಪ್ರೇಕ್ಷಕನ ತಲೆ ನುಚ್ಚು ನೀರಾಗದಿದ್ದರೆ ಅದೇ ಕೌತುಕ.
ಪೊಲೀಸ್ ತನಿಖಾ ಅಧಿಕಾರಿಯಾಗಿ ಧರ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇನ್ನುಳಿದಂತೆ ಸೀನನ ಪಾತ್ರದಲ್ಲಿ ಗೋವಿಂದೇಗೌಡ ಹಾಗೂ ಸಬ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ರವಿ ಕಿಶೋರ್ ಗಮನ ಸೆಳೆಯುತ್ತಾರೆ.
ಲಕ್ಷ್ಮಿ ರೈ, ಗಿರಿಜಾ ಲೋಕೇಶ್, ಶೈಲಶ್ರೀ, ಮಂಜು ರಂಗಾಯಣ, ನಚ್ಚಿ, ಪ್ರಭು ಮೊದಲಾದವರ ನಟನೆ ಗಮನಾರ್ಹ.
ಪ್ರವೀಣ್ ಶೆಟ್ಟಿ ಕ್ಯಾಮೆರಾ ಮತ್ತು ಸತೀಶ್ ಆರ್ಯನ್ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್.