ಅಲ್ಲಿ ಇಡೀ ಕುಟುಂಬದ ಸದಸ್ಯರು ಸಂಭ್ರಮದಲ್ಲಿದ್ದರು. ಮನೆಯ ಮಗನ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ..
ಸುಪ್ರೀಂ ಹೀರೋ ಎಂದೇ ಹೆಸರಾಗಿರುವ ನಟ ಶಶಿಕುಮಾರ್ ಈಗಲೂ ಚಿತ್ರರಂಗದ ಚಟುವಟಿಕೆಗಳಲ್ಲಿ ಭಾಗಿರುವುದೇ ವಿಶೇಷ.
ಅವರ ಪುತ್ರ ಆದಿತ್ಯ ಶಶಿಕುಮಾರ್ ಆ ಸಮಾರಂಭದ ಕೇಂದ್ರಬಿಂದು. ಆದಿತ್ಯ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಚಿತ್ರದ ಶೀರ್ಷಿಕೆ ಬಿಡುಗಡೆಯ ಸಮಾರಂಭವದು.
ಆದಿತ್ಯ ಶಶಿಕುಮಾರ್ ಮುಖ್ಯ ಪಾತ್ರದಲ್ಲಿರುವ ಅವರ ಮೂರನೇ ಚಿತ್ರದ ಶೀರ್ಷಿಕೆ ಬಿಡುಗಡೆಯಲ್ಲಿ ಚಿತ್ರರಂಗದ ಹಾಗೂ ಇತರ ಕ್ಷೇತ್ರಗಳ ಗಣ್ಯರು ಹಾಜರಿದ್ದರು.
ಧುವನ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ , ವಿಜಯ್ ಪಾಳೇಗಾರ್ ನಿರ್ದೇಶಿಸುತ್ತಿರುವ ಆ ಚಿತ್ರದ ಹೆಸರು ರಾಶಿ. ರಾನಿ ಚಿತ್ರದಲ್ಲಿ ನಟಿಸಿದ್ದ ಸಮೀಕ್ಷಾ ಆದಿತ್ಯ ಜೋಡಿಯಾಗಿ ನಟಿಸುತ್ತಿದ್ದಾರೆ.
ಹುಟ್ಟುಹಬ್ಬದ ಹಾರೈಕೆಗಳಿಂದ ಖುಷಿಯನ್ನು ಮೈತುಂಬಿಕೊಂಡಿದ್ದ ಆದಿತ್ಯ ಶಶಿಕುಮಾರ್, ಮೊದಲು ಅಕ್ಷಿತ್ ಆಗಿದ್ದ ನಾನು ಈಗ ಆದಿತ್ಯ ಎಂದು ಹೆಸರು ಬದಲಿಸಿಕೊಂಡಿರುವೆ. ಈ ಮಾಧ್ಯಮದ ಹಿರಿಯರು ಹಾಗೂ ಮಿತ್ರರು ಸಹಕರಿಸಬೇಕು ಎಂದು ಕೇಳಿಕೊಂಡರು.
ಮಗನ ಚಿತ್ರಕ್ಕೆ ಶುಭ ಹಾರೈಸಿದ ಸುಪ್ರೀಂ ಹೀರೋ ಶಶಿಕುಮಾರ್, ಕಥೆ ಕೇಳುವುದರಿಂದ ಹಿಡಿದು ಎಲ್ಲದರಲ್ಲೂ ಅವನಿಗೆ ಸ್ವಾತಂತ್ರ್ಯವಿದೆ. ಈ ದಿನ ಮಗನ ಹುಟ್ಟುಹಬ್ಬದ ಸಂಭ್ರಮ ಹೆಚ್ಚಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷ ಜಿ.ಎಸ್.ಚಂದ್ರಶೇಖರ್, ಡಿಸಿಪಿ ಸಿದ್ದರಾಜು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಸ್ ಚಿದಂಬರ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್ ಅವರೆ ಈ ಚಿತ್ರದ ಕಥೆ ಬರೆದಿದ್ದು, ನಿರ್ದೇಶಕ ವಿಜಯ್ ಪಾಳೇಗಾರ್ ಚಿತ್ರಕಥೆ, ಗೀತರಚನೆ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡುತ್ತಿರುವ ವಿವರಗಳು ಬಂದವು.
ಅಭಿನಂದನ್ ದೇಶಪ್ರಿಯ ಸಂಭಾಷಣೆ, ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಂಜು ಮಹದೇವ್ ಹಿನ್ನೆಲೆ ಸಂಗೀತ ಹಾಗೂ ಬಂಡೆ ಚಂದ್ರು ಸಾಹಸ ನಿರ್ದೇಶನವಿದೆ.
ಈಚೆಗೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ಸಮಾರಂಭ ನಡೆದಿದ್ದು, ಈ ಪ್ರೇಮ ಕಥೆಗೆ ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂಬುದು ನಿರ್ದೇಶಕ ವಿಜಯ್ ಪಾಳೇಗಾರ್ ನೀಡಿದ ವಿವರಣೆ.
ಕಲಾವಿದರಾದ ಕರಿಸುಬ್ಬು, ಉಗ್ರಂ ರವಿ, ಹುಲಿ ಕಾರ್ತಿಕ್ ಹಾಗೂ ಇತರರು ಚಿತ್ರದ ಬಗ್ಗೆ ಮಾತನಾಡಿದರು.