ರೇಟಿಂಗ್ : 3.5/5
ನಿರ್ಮಾಣ : ಪ್ರಕಾಶ್ ಪಳನಿ
ನಿರ್ದೇಶನ : ಪವಿತ್ರನ್
ಅಸಮಾನತೆಯ ಬೆಂಕಿ
ತಾಳ್ಮೆಯ ಕುಲುಮೆ..
ಕಾನೂನು ಪದವಿ ಪಡೆಯುವ ಸಲುವಾಗಿ ಕಾಲೇಜಿಗೆ ಸೇರುವ ಯುವಕನ ಅಸಾಧಾರಣ ತಾಳ್ಮೆಯ ನಿಲುವು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ..
ತಲತಲಾಂತರದಿಂದ ಮನುಷ್ಯ ಮನುಷ್ಯನನ್ನೇ ಶೋಷಣೆ ಮಾಡುವ ಜಾತಿ ಪದ್ಧತಿಯ ಕರಾಳ ಮುಖಗಳ ವರ್ತನೆಯನ್ನು ಯುವಕನ ತಾಳ್ಮೆ ಮತ್ತು ಪ್ರೀತಿ ಒಡೆದು ಹಾಕುತ್ತದೆ..
ಗ್ರಾಮವೊಂದರಿಂದ ಪಟ್ಟಣಕ್ಕೆ ಬಂದು ಕಾಲೇಜು ಸೇರುವ ಯುವಕ
ಮುತ್ತತ್ತಿ ಮುತ್ತುರಾಜುಗೆ ಆಂಗ್ಲ ಭಾಷೆ ಎಂಬುದು ಕಬ್ಬಿಣದ ಕಡಲೆ. ಆನಂದ ಎಂಬ ಫೇಲಾದ ವಿದ್ಯಾರ್ಥಿ ಆತನ ಸಹವರ್ತಿ.
ಹೀಗಿರುವಾಗ ಮುದ್ದು ಮುದ್ದಾಗಿ ಮಾತನಾಡುವ ಜ್ಯೋತಿ ಮುತ್ತುಲಕ್ಷ್ಮಿಯ ಗೆಳೆತನವಾಗುತ್ತದೆ. ಆಕೆ ಮಾತು ಮತ್ತು ಸಂಯಮದ ವರ್ತನೆಗಳಿಂದ ಮುತ್ತುರಾಜ ಆಕೆಗೆ ಹತ್ತಿರವಾಗುತ್ತಾನೆ.
ಇದಷ್ಟೇ ಕಾರಣ ಜಾತೀಯ ಮನೋಭಾವ ಭುಗಿಲೇಳುತ್ತದೆ. ಮದುವೆಗೆ ಕರೆದು ಮುತ್ತು ರಾಜ್ ಮೇಲೆ ಮೃಗೀಯ ವರ್ತನೆ ತೋರಲಾಗುತ್ತದೆ.
ಅಪ್ಪ ಮತ್ತು ಅಣ್ಣನ ಶ್ರೇಷ್ಠತೆಯ ವ್ಯಸನ ಆವರಿಸಿದ ಜಾತೀಯ ಮೃಗದ ವರ್ತನೆ ಮುದ್ದು ಮತ್ತು ಪೆದ್ದು ಹುಡುಗಿ ಜ್ಯೋತಿಗೆ ಕಾಣುವುದಿಲ್ಲ.
ಆದರೆ ಪೆಟ್ಟು ತಿಂದ ಅಮಾಯಕ ಮುತ್ತುರಾಜನ ವರ್ತನೆ ಬದಲಾಗಿ ಹೋಗುತ್ತದೆ. ಜಾತಿ ಪದ್ಧತಿಯ ಕ್ರೂರ ವ್ಯವಸ್ಥೆ ಆತನನ್ನು ನುಂಗಿದಂತೆ ಭಾಸವಾಗುತ್ತದೆ.
ಭುಗಿಲೇಳುವ ಆಕ್ರೋಶವನ್ನು ಹತ್ತಿಕ್ಕುತ್ತಾ ಮೃಗವಾಗುತ್ತಾನೆ. ಬದಲಾದ ಆತನ ವರಸೆ ಯಾರಿಗೂ ಅರ್ಥವಾಗುವುದಿಲ್ಲ. ಜ್ಯೋತಿಗೆ ಇದು ಪ್ರಶ್ನಾರ್ಥಕವಾದರೆ, ಉಳಿದವರಿಗೆ ಆತ ಹುಚ್ಚನ ಪ್ರತಿರೂಪ.
ಕರ್ಕಿ ನಾಯಿ ಆತನಿಗೆ ಪ್ರೀತಿಪಾತ್ರ. ಅದು ತೀರಿ ಹೋಗುವ ಸಂದರ್ಭ ಜನಾಂಗೀಯ ಘರ್ಷಣೆ ಶಾಪವಾದ ಕಾಲಘಟ್ಟ.
‘ಕಾಲ ಕಾಲ ಬೈರವ
ನಾ ಯಾರ್ ಯಾರೋ..’ ಎಂದು ಪ್ರೀತಿಯ ಕರ್ಕಿ ನಾಯಿಯ ಮೇಲೆ ಹಾಡುವ ಹಾಡು ಹೃದಯ ತಟ್ಟುತ್ತದೆ. ಕೊನೆಯಲ್ಲಿ ಹುಡುಗಿಯ ಅಪ್ಪ ಮತ್ತು ಮುತ್ತರಾಜ್ ನಡುವೆ ನಡಿಯುವ ಸಂಭಾಷಣೆ ಮತ್ತು ಟೀ ಗ್ಲಾಸ್ ಗಳ ನಡುವಿನ ಹೂ ನ ಕೊನೆಯ ದೃಶ್ಯ ಅರ್ಥಪೂರ್ಣ.
ಕರ್ಕಿ ಕನ್ನಡದ ನೇಟಿವಿಟಿಗೆ ಕೊಂಚ ದೂರವಾಗಿ ಕಾಣುತ್ತದೆ. ಏಕೆಂದರೆ ಇದರ ಮೂಲ ‘ಪರಿಯೇರುಂ ಪೆರುಮಾಳ್’ ಎಂಬ ತಮಿಳು ಚಿತ್ರ. ಆ ಚಿತ್ರದ ಒಟ್ಟಾರೆ ಆಶಯಗಳನ್ನು ಕನ್ನಡಕ್ಕೆ ಮೂಡಿಸಲು ನಿರ್ದೇಶಕರು ಹೆಚ್ಚು ಶ್ರಮವಹಿಸಿರುವುದು ಎದ್ದು ಕಾಣುತ್ತದೆ.
ಕಾಲ ಬದಲಾದರೂ ಸಾಮಾಜಿಕ ನೆಲೆಯಲ್ಲಿ ಜಾತಿ ಪದ್ಧತಿ ಬದಲಾಗಲಿಲ್ಲ; ಬದಲಿಗೆ ಕ್ರೌರ್ಯದ ವರಸೆಗಳು ಹೆಚ್ಚಾಗುತ್ತ ಮಾನವೀಯ ಮೌಲ್ಯಗಳಿಗೆ ಸವಾಲಾಗಿವೆ ಎಂಬುದನ್ನು ಗಟ್ಟಿಯಾಗಿ ಹೇಳಲಾಗಿದೆ.
ಅತ್ತ ಮೂಲ ಚಿತ್ರದ ಆಶಯವೂ ಅದನ್ನೇ ಹೇಳುವುದಾಗಿತ್ತು. ‘ಜಾತಿ ಮತ್ತು ಧರ್ಮಗಳು ಮಾನವೀಯತೆಗೆ ವಿರುದ್ಧವಾಗಿವೆ’ ಎಂಬುದನ್ನು ಗಟ್ಟಿಯಾಗಿ ಹೇಳಲಾಗಿತ್ತು.
‘ಇಲ್ಲಿ ಬದುಕೋಕೆ ನನಗೂ ಹಕ್ಕಿದೆ..’ ಎಂದು ಹತಾಶೆ ಮತ್ತು ದುಃಖ ಮಿಶ್ರಿತ ಸಂಯಮದ ಜೊತೆ ಹೇಳುವ ನಾಯಕನ ವರಸೆಯಲ್ಲಿ ಸಾಮಾಜಿಕ ಅಸಮಾನತೆ ಮತ್ತು ದೌರ್ಜನ್ಯದಲ್ಲಿ ಬೆಂದು ಹೋದ ಕುರುಹುಗಳು ಎದ್ದು ಕಾಣುತ್ತವೆ.
ಮುತ್ತುರಾಜ್ ಪಾತ್ರದಲ್ಲಿ ಜಯಪ್ರಕಾಶ್ ರೆಡ್ಡಿ (ಜೆಪಿ)ನಟನೆಯಲ್ಲಿ ಗೆಲ್ಲುತ್ತಾರೆ. ಮುಗ್ಧ ನೆಗೆಯ ಮೀನಾಕ್ಷಿ, ಸದಾ ಬೆಂಬಲ ಕೊಡುವ ಸ್ನೇಹಿತನಾಗಿ ಸಾಧು ಕೋಕಿಲ, ಸಿಡುಕು ವರ್ತನೆಯ ಉಪನ್ಯಾಸಕನಾಗಿ ಯತಿರಾಜ್, ನಟನೆಯ ಅಪ್ಪನಾಗಿ ಮಿಮಿಕ್ರಿ ಗೋಪಿ ಮೊದಲಾದವರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಅರ್ಜುನ್ ಜನ್ಯ ಸಂಗೀತ, ಹೃಷಿಕೇಶ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.