ರೇಟಿಂಗ್ : 3.5
ನಿರ್ಮಾಣ : ಚಂದ್ರಕಾಂತ ಪೂಜಾರಿ ಉಮೇಶ್ ಹೆಗ್ಡೆ (ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್)
ನಿರ್ದೇಶನ : ಗುರುತೇಜ್ ಶೆಟ್ಟಿ
ಕಲೆಯ ಆರಾಧಕನ ಕೊಲೆಯ ಸ್ಥಾನ
ಯಾರೂ ಕೂಡ ಹುಟ್ಟಿನಿಂದ ಕೆಟ್ಟವರಾಗುವುದಿಲ್ಲ; ಕೆಲವೊಮ್ಮೆ ಪರಿಸ್ಥಿತಿ ಅವರನ್ನು ತಪ್ಪಿತಸ್ಥರನ್ನಾಗಿ ಮಾಡುತ್ತದೆ.
ಇಲ್ಲಿಯೂ ಕೂಡ ಕಲೆಯನ್ನು ಆರಾಧಿಸುವ ಮತ್ತು ನಟನೆಗಾಗಿ ಜೀವನವನ್ನೇ ಮುಡಿಪಾಗಿಡಲು ಹೋದ ನಿರ್ಮಲ ಮನಸ್ಸಿನ ಹುಡುಗ ಕೊಲೆಗಾರ ಮತ್ತು ಭೂಗತ ಜಗತ್ತಿನ ಡಾನ್ ಆಗುತ್ತಾನೆ.
ರಾಘವ ಎಂಬ ಆ ಹುಡುಗ ನಟನಾ ಶಾಲೆಯ ಅತ್ಯುತ್ತಮ ವಿದ್ಯಾರ್ಥಿ. ಆತನ ಕಲೆಗೆ ಮಾರು ಹೋಗಿ ಪ್ರೀತಿ ತುಂಬಿಕೊಂಡ ಹುಡುಗಿ ಅಂಜಲಿ. ಆ ಶಾಲೆಗೆ ಕಳಂಕ ಎಂಬಂತೆ ಇರುವ ಕಾಳಿ. ಈತ ಹೂಡುವ ಆಟದಲ್ಲಿ ಬಲಿಪಶುವಾಗುವ ರಾಘವ ಮುಂದೆ ರಾನಿಯಾಗುವುದು ರೋಚಕ.
ನಿರ್ದೇಶಕರು ಸ್ಕ್ರೀನ್ ಪ್ಲೇನಲ್ಲಿ ಆಟ ಆಡಲು ಕಾಮಿಡಿ ನಟರನ್ನು ಬಳಸಿ ಕೊಂಡಿರುವುದರಿಂದ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಾ ಹೋಗುವ ಕಥೆಯಲ್ಲಿ ರಾನಿಯ ರೌದ್ರ ನರ್ತನ ಮತ್ತು ಲಲಿತ ಕಲೆಯ ಸೊಬಗು ಒಮ್ಮೆಗೆ ಕಾಣುತ್ತಾ ಹೋಗುತ್ತದೆ.
ಅಮಾಯಕ ಹುಡುಗ ಅಥವಾ ಸುಶಿಕ್ಷಿತ ಹುಡುಗ ಭೂಗತ ಲೋಕದ ಸಹವಾಸ ಬೇಡವೆಂದರೂ ಅದು ಆತನನ್ನು ಬಿಡುವುದಿಲ್ಲ. ಕೊಂಚವೂ ಪ್ರೇಮದ ಸ್ಪರ್ಶವಿಲ್ಲದ ನಿರ್ಮಲ ಮನಸ್ಸಿನ ಆತನಿಗೆ ಎಲ್ಲವೂ ಬೆಂಬಿಡದೆ ಕಾಡುತ್ತವೆ.
ಹಾಗಾಗಿ ರಾನಿಗೆ ಅಂಜಲಿ (ರಾಧ್ಯ) ಮನಸ್ಸಿನಿಂದ ಬಿಟ್ಟು ಹೋಗಿದ್ದರೂ ಸುಪ್ರೀತಾ (ಸಮೀಕ್ಷಾ) ಅನಿವಾರ್ಯ ಪ್ರೇಮಿಯಂತೆ ಕಾಡುತ್ತಾಳೆ. ಇಬ್ಬರ ಜೊತೆಗೂ ಅಂತರ ಕಾಯ್ದುಕೊಳ್ಳುವ ರಾನಿಯ ನಡೆ ಅದ್ಭುತ.
ಇಷ್ಟರ ನಡುವೆಯೂ ಪೊಲೀಸ್ ಅಧಿಕಾರಿ ಜಾಹ್ನವಿ ರಾನಿಗೆ ಸಹಕರಿಸುವ ಕುತೂಹಲ ಮತ್ತು ಆಕೆಯ ಸಂಬಂಧವೂ ಕೌತುಕ.
ಸಾಮಾಜಿಕ ನೆಲೆಯಲ್ಲಿ ದುಷ್ಟತನ ಮೈಗೂಡಿಸಿಕೊಂಡ ಕಾಳಿ ಮತ್ತು ಆತನ ಪುತ್ರ ಗೌಳಿ ಮತ್ತು ಕೆಟ್ಟ ವ್ಯವಸ್ಥೆ ರಾಘವನಂತಹ ಅಮಾಯಕ ಹುಡುಗನ ಜೀವ ಬಲಿ ಪಡೆಯುವ ಕಥಾನಕ ಮನೋಜ್ಞವೆನಿಸುವುದು ಕಿರಣ್ ರಾಜ್ ಅವರ ಮುಗ್ಧ ನಟನೆಯಿಂದಲೇ..
ಕ್ರಿಯಾಶೀಲ ನಡೆಯ ಯುವಕ ರಾಘವನ ಅಮಾಯಕತ್ವ ಕೆಲವು ಘಟನೆಗಳಿಂದ ಹಿಂಗಿ ಹೋಗಿ ಆತನ ಭವಿಷ್ಯವನ್ನೇ ನುಂಗುವುದು ವಿಪರ್ಯಾಸ.
ನಟನಾ ತರಬೇತಿ ಶಾಲೆ ಮತ್ತು ಕಲಾ ವಿದ್ಯಾಲಯ ಹಾಗೂ ವಿದ್ಯಾರ್ಥಿಗಳು ಆಧುನಿಕ ಸಂವೇದನೆಗೆ ತೆಗೆದುಕೊಳ್ಳುವುದರಿಂದ ಸಮಕಾಲೀನ ಚಿತ್ರವಾಗಿ ರಾನಿ ನಿಲ್ಲುತ್ತದೆ.
ಕಿರಣ್ ರಾಜ್ ಪೂರ್ಣವಾಗಿ ಪ್ರೇಕ್ಷಕನ ನ್ನು ಆವರಿಸಿ ಬಿಡುತ್ತಾರೆ. ರಾಧ್ಯಾ, ಸಮೀಕ್ಷಾ ಎರಡೂ ಪಾತ್ರಗಳು ಬೇರೆ ಬೇರೆ ನೆಲೆಯಲ್ಲಿ ಕಾಡುತ್ತವೆ. ಸ್ನೇಹಿತ್ (ಗಿರೀಶ್ ಹೆಗಡೆ) ಪಾತ್ರವಂತೂ ಬಹಳವೇ ಕಾಡುತ್ತದೆ. ಅಪೂರ್ವ, ರವಿಶಂಕರ್, ಯಶ್ ಶೆಟ್ಟಿ, ಧರ್ಮಣ್ಣ ಮೊದಲಾದ ಪಾತ್ರಗಳೂ ಗಮನ ಸೆಳೆಯುತ್ತವೆ.
ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ‘ಹವಾಮಾನವೇ ಸುಂದರ ಸುಂದರ ಹಾಡು ನೆನಪಿನಲ್ಲಿ ಉಳಿಯುತ್ತದೆ. ರಾಘವೇಂದ್ರ ಬಿ.ಕೋಲಾರ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕ.