ಇನ್ನೂ ಹದಿ ಹರೆಯದ ಎರಡು ಮುಗ್ಧ ಜೀವಗಳು ಪ್ರೇಮ ಎಂಬುದಕ್ಕೆ ಪ್ರವೇಶ ಪಡೆಯುತ್ತವೆ. ಆದರೆ ಅದು ಸುಲಭವೇ..
ಖಂಡಿತಾ ಅಲ್ಲ. ಏಕೆಂದರೆ ಆಗ ಹಾಗಿತ್ತು ಕಾಲ. ಟೆಲಿಫೋನ್ ಕೂಡ ಸಿಗುವುದು ಕಷ್ಟವಾದ ಕಾಲದಲ್ಲಿ ಪ್ರೇಮಿಗಳಿಗೆ ಆಸರೆಯಾಗಿದ್ದೇ ಬೇರೆ..
ಅದೇ ಕಾಗದ..!
ಅರುಣ್ ಕುಮಾರ್ ಆಂಜನೇಯ ನಿರ್ಮಾಣದಲ್ಲಿ ರಂಜಿತ್ ನಿರ್ದೇಶಿಸಿರುವ ‘ಕಾಗದ’ ಚಿತ್ರವು ಈ ವಾರ ಅಂದರೆ ಜುಲೈ 5 ರಂದು ತೆರೆಗೆ ಬರುತ್ತಿದೆ.
ಮೊಬೈಲ್ ಅಷ್ಟಾಗಿ ಬಳಕೆ ಇಲ್ಲದ ಸಮಯದ ಪ್ರೇಮಕಥೆ ಇದು. ನಿರ್ದೇಶಕರ ಪ್ರಕಾರ 2005 ರ ಕಾಲಘಟ್ಟದಲ್ಲಿ ನಡೆಯುತ್ತದೆ. ಹಳ್ಳಿ ಹಳ್ಳಿಗಳ ನಡುವಿನ ವೈಷಮ್ಯದ ನಡುವೆಯೂ ಒಂದು ಪ್ರೇಮಕಥೆ ಅರಳುವ ಪರಿ ಇದು.
ಆದಿತ್ಯ ಹಾಗೂ ಅಂಕಿತ ಜಯರಾಂ ಮುಖ್ಯ ಪಾತ್ರದಲ್ಲಿದ್ದಾರೆ. ನೇಹಾ ಪಾಟೀಲ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ.ಲ.ರಜವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಹಾಗೂ ಇತರರು ತಾರಾಬಳಗದಲ್ಲಿದ್ದಾರೆ.
ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಪವನ್ ಗೌಡ ಸಂಕಲನ ಚಿತ್ರಕ್ಕಿದೆ.