ಅಪರೂಪಕ್ಕೆ ಎಂಬಂತೆ ನಡೆದ ನಿರ್ದೇಶಕರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ನಿರ್ದೇಶಕರಾದ ಓಂ ಸಾಯಿ ಪ್ರಕಾಶ್, ಜೋಸೈಮನ್, ಟಿ ಎಸ್ ನಾಗಭರಣ, ಬಿ ಎಲ್ ನಾಗಣ್ಣ ಮೊದಲಾದವರು ಪಾಲ್ಗೊಂಡಿದ್ದು ವಿಶೇಷ.
ಈಚೆಗೆ ಬೆಂಗಳೂರಿನ ಶಿವಾನಂದ ಸರ್ಕಲ್ ನ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು.
ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಸಭೆಯಲ್ಲಿ ಸುಧಾಕರ ಬನ್ನಂಜೆ,
ಜೆ.ಜೆ.ಕೃಷ್ಣ, ಜಯಸಿಂಹ ಮುಸುರಿ, ಟೇಶಿ ವೆಂಕಟೇಶ್, ಪಿ ವಿ ಎಸ್ ಗುರುಪ್ರಸಾದ್ ಸೇರಿದಂತೆ ಸಾಕಷ್ಟು ನಿರ್ದೇಶಕರು ಪಾಲ್ಗೊಂಡಿದ್ದರು.
ಮಹಾಸಭೆಯಲ್ಲಿ ಈ ಹಿಂದಿನ ಪರಿಸ್ಥಿತಿ ಹಾಗೂ ಹೊಸ ಯೋಜನೆಗಳ ಬಗ್ಗೆ ರೂಪು ರೇಷೆಗಳನ್ನು ತಯಾರಿಸುವ ಬಗ್ಗೆ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಒಮ್ಮತದ ಅಭಿಪ್ರಾಯಗಳನ್ನು ಮಂಡಿಸಿದರು.
ಮುಖ್ಯವಾಗಿ ಹಿಂದಿನ ಅಧ್ಯಕ್ಷ ಟೆ.ಸಿ.ವೆಂಕಟೇಶ್ ಅವರು ತಮ್ಮ ಮೇಲಿರುವ ಆರೋಪಗಳಿಗೆ ಸಂಬಂಧಿಸಿದಂತೆ ಲೆಕ್ಕ ಪತ್ರಗಳನ್ನು ಮಂಡಿಸಿ ಇದು ಪಾರದರ್ಶಕವಾಗಿದೆ ಎಂದು ಸಮರ್ಥಿಸಿಕೊಂಡಿದ್ದೂ ನಡೆಯಿತು. ಅದಕ್ಕೆ ಅನೇಕ ಸದಸ್ಯರ ಬೆಂಬಲವೂ ದೊರೆಯಿತು.
ಆರು ವರ್ಷಗಳಿಂದ ಸಂಘದ ನವೀಕರಣವೂ ಬಾಕಿ ಉಳಿದಿದ್ದು ಎನ್ನಾರ್ ಕೆ ವಿಶ್ವನಾಥ್ ಅವರು ಅದಕ್ಕೆ ಬೇಕಾದ ಸಂಪೂರ್ಣ ದಾಖಲೆಯನ್ನು ಉಪ ನಿಬಂಧಕರ ಕಛೇರಿಗೆ ಒದಗಿಸಿ ಸಂಘದ ನವೀಕರಣ ಕಾರ್ಯವನ್ನು ಸಂಪೂರ್ಣಗೊಳಿಸಿದ್ದಾರೆ ಎಂಬ ವಿವರ ವ್ಯಕ್ತವಾಯಿತು.
ವಿಶೇಷವೆಂದರೆ; ಮಧ್ಯಾಹ್ನದ ಭೋಜನದೊಂದಿಗೆ ಮುಕ್ತಾಯ ಗೊಳ್ಳಬೇಕಾಗಿದ್ದ ಸರ್ವ ಸದಸ್ಯರ ಸಭೆಯು ಮುಂದುವರಿದು ಯಶಸ್ವಿಯಾಗಿ ಸಂಜೆಯವರೆಗೆ ನಡೆಯಿತು. ಅಲ್ಲಿಯವರೆಗೆ ಸದಸ್ಯರು ಕಾದು ಕುಳಿತು ಕಾರ್ಯಕ್ರಮದ ಎಲ್ಲಾ ವಿಚಾರಗಳನ್ನು ಆಲಿಸಿ ಸಹಕರಿಸಿದರು.
ಅಧ್ಯಕ್ಷರಾಗಿ ಎನ್ನಾರ್ ಕೆ ವಿಶ್ವನಾಥ್, ಉಪಾಧ್ಯಕ್ಷರಾಗಿ ಎಸ್ ಕೆ ನಾಗೇಂದ್ರ ಅರಸ್, ಜಗದೀಶ್ ಕೊಪ್ಪ, ಕಾರ್ಯದರ್ಶಿಯಾಗಿ ಪಾರ್ಥಸಾರಥಿ ಕೆ, ಜಂಟಿ ಕಾರ್ಯದರ್ಶಿಯಾಗಿ ಎಂ ಡಿ ರಾಮ್ ಪ್ರಸಾದ್, ಖಜಾಂಚಿಯಾಗಿ ಮಂಜುನಾಥ್ ದೈವಜ್ಞ..
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೋಸೈಮನ್, ಉಮೇಶ್ ನಾಯಕ್, ಆದಿತ್ಯ ಚಿಕ್ಕಣ್ಣ, ಸೆಬಾಸ್ಟಿನ್ ಡೇವಿಡ್, ಮಳವಳ್ಳಿ ಸಾಯಿಕೃಷ್ಣ, ವಿಶಾಲ್ ಧೀರಜ್, ಬಿ ಶಂಕರ್, ಮರಡಿಹಳ್ಳಿ ನಾಗಚಂದ್ರ ಕಾರ್ಯ ನಿರ್ವಹಿಸುತ್ತಿರುವ ವಿವರ ಸಹ ವ್ಯಕ್ತವಾದವು.