ಪೊಲೀಸ್ ಹಾಗೂ ನಕ್ಸಲರ ನಡುವಿನ ತಿಕ್ಕಾಟ ಮತ್ತು ಹೋರಾಟವನ್ನು ಬಿಂಬಿಸುವ ಕಥೆಯನ್ನು ಹೊಂದಿರುವ ‘ಶತಭಿಷ’ ಎಂಬ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ.
ತಮಿಳು ಮೂಲದ ಎಂ.ವೆಂಕಟೇಶನ್ ನಿರ್ದೇಶನದ ಈ ಚಿತ್ರ ಕೊರೊನಾಗೆ ಮುಂಚೆ ಸೆಟ್ಟೇರಿತ್ತು. ಅನಿವಾರ್ಯ ಕಾರಣಗಳಿಂದ ಬಿಡುಗಡೆ ತಡವಾಯಿತು ಎಂದು ಹೇಳಿಕೊಂಡಿತು ಚಿತ್ರತಂಡ.
ದೀಪು ಅರ್ಜುನ್ ಮುಖ್ಯ ಪಾತ್ರದಲ್ಲಿದ್ದು, ಕಾಶಿ ಶೇಖರ್ ತಮ್ಮ ಪತ್ನಿಯ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಹಳ್ಳಿ ಅಥವಾ ಪಟ್ಟಣ ಪ್ರದೇಶದಲ್ಲಿ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದ ಹುಡುಗರು ಸಹವಾಸ ದೋಷದಿಂದ ಹೇಗೆಲ್ಲಾ ಹಾಳಾಗುತ್ತಾರೆ ಎಂಬುದನ್ನು ಹೇಳುವುದೇ ಚಿತ್ರದ ಉದ್ದೇಶ ಎಂಬ ಮಾಹಿತಿಗಳನ್ನು ನೀಡಿದರು ಮುಖ್ಯ ಪಾತ್ರದಲ್ಲಿ ನಟಿಸಿರುವ ದೀಪು.
ಇದು ಮೊದಲ ಚಿತ್ರ. ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಆಶಯದಲ್ಲಿ ಚಿತ್ರದಲ್ಲಿ ನಟಿಸಿರುವೆ. ಗೆದ್ದರೆ ಇನ್ನೂ ಉತ್ತಮ ಪ್ರಯತ್ನಗಳಾಗುತ್ತವೆ ಎಂದರು.
ದೀಪು ಮತ್ತು ನಿರ್ದೇಶಕರ ಒತ್ತಾಯದ ಮೇರೆಗೆ ಈ ಚಿತ್ರದ ನಿರ್ಮಾಪಕ ಆಗ ಬೇಕಾಯಿತು. ಚಿತ್ರದಲ್ಲಿ ಪ್ರಮುಖ ಎನಿಸುವ ಇನ್ಸ್ ಪೆಕ್ಟರ್ ಪಾತ್ರವನ್ನು ನಿರ್ವಹಿಸಿರುವುದಾಗಿ ಹೇಳಿಕೊಂಡರು ನಿರ್ಮಾಪಕ ಕಾಶಿ ಶೇಖರ್.
ಬಿಡುಗಡೆಪೂರ್ವ ಆ ಸುದ್ದಿಗೋಷ್ಠಿಗೆ ನಿರ್ದೇಶಕರು ಬಂದಿರಲಿಲ್ಲ. ತಮಿಳು ಮೂಲದ ಅವರು ದೂರದಿಂದ ಬರುಬೇಕು. ಬರುತ್ತಾರೆ ಎಂಬ ನಂಬಿಕೆಯಲ್ಲೇ ಸಮಯ ದೂಡಿತು ಚಿತ್ರತಂಡ.
ಸಾಹಸ ನಿರ್ದೇಶಕ ಅಶೋಕ್, ನಟ ಸಾಮ್ರಾಟ್ ಕುಮಾರ್, ಸಿದ್ಧಾರ್ಥ, ಅಮಿತ್ ರಾಜ್ ಹಾಗೂ ಇತರರು ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹೇಳಿಕೊಂಡರು.