ರೇಟಿಂಗ್ : 3.5/5
ನಿರ್ಮಾಣ : ಪ್ರತಿಭಾ
ನಿರ್ದೇಶನ : ಚೇತನ್ ಚಂದ್ರಶೇಖರ ಶೆಟ್ಟಿ
ದುಷ್ಟ ಸಂಹಾರದ ಹೊಸ ಮಾರ್ಗ
ಮಂಡ್ಯ ಹೈದ ಆಗಿದ್ದ ಹುಡುಗ ಪಂಚಾಯ್ತಿ ಅಧ್ಯಕ್ಷ ಆದ ಮೇಲೆ ಗ್ರಾಮದಲ್ಲಿ ಮಾಡುವ ಅಭಿವೃದ್ಧಿ ಕಾರ್ಯಗಳಿಂದ ಜನಪ್ರಿಯನಾಗುತ್ತಾನೆ. ಆದರೆ ಸಾಮಾಜಿಕ ವ್ಯವಸ್ಥೆ ಆತನ ಮೇಲೆ ಕ್ರೌರ್ಯದ ನೆರಳು ಬೀಳುತೆ ಮಾಡುತ್ತದೆ..
ಮಂಡ್ಯ ಜಿಲ್ಲೆಯಲ್ಲಿ ತಗಚಗೆರೆ ಎಂಬುದು ಒಂದು ಗ್ರಾಮ. ಆ ಗ್ರಾಮ ಬೆಳವಣಿಗೆ ಜಿಲ್ಲಾ ಮಟ್ಟದಲ್ಲಿ ಗಮನ ಸೆಳೆದು ನಡೆಯುವ ಘಟನಾವಳಿಗಳೇ ಚಿತ್ರದ ಕಥಾವಸ್ತು..
ಅತ್ಯುತ್ತಮ ನಡವಳಿಕೆಯ ಹುಡುಗ ಅರ್ಜುನ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದು ಗ್ರಾಮವನ್ನು ಮಾದರಿಯಾಗಿಸುತ್ತಾನೆ. ಜನಪರ ಕಾರ್ಯಗಳ ಮೂಲಕ ಜನಮನ ಗೆಲ್ಲುತ್ತಾನೆ.
ಆದರೆ ಸಾಮಾಜಿಕ ನೆಲೆಯಲ್ಲಿ ಎದ್ದು ಕಾಣುವ ಸ್ವಾರ್ಥ ಲೋಭ ಮತ್ತು ಮತ್ಸರದ ಕಾರಣದಿಂದ ಆತ ವ್ಯವಸ್ಥೆಯ ಕ್ರೌರ್ಯಕ್ಕೆ ಸಿಲುಕುತ್ತಾನೆ. ಮುಂದೆ ಶ್ರೀಕೃಷ್ಣನ ನೆರವಿನಿಂದ ಎಲ್ಲವನ್ನು ಮೆಟ್ಟಿ ನಿಲ್ಲುತ್ತಾನೆ.
ಪೂರ್ವರ್ಧದಲ್ಲಿ ಗ್ರಾಮದ ಆಗು ಹೋಗುಗಳ ಸುತ್ತುವ ಕಥೆ ಉತ್ತರಾರ್ಧದಲ್ಲಿ ಜಿಲ್ಲಾಧಿಕಾರಿ ಕಾಣೆಯಾದ ವಿಷಯದ ಸುತ್ತಲೂ ಸುತ್ತುತ್ತಾ ಹೈವೋಲ್ಟೇಜ್ ಗೆ ಜಾರುತ್ತದೆ.
ಅಷ್ಟರಲ್ಲಿ ಬಿಕ್ಕಲ, ನಾಲಾಯಕ್ ಆಗಿದ್ದ ವಕೀಲ ಕೃಷ್ಣ ಜ್ಞಾನಿಯಾಗುತ್ತಾನೆ. ಆತನ ಖಡಕ್ ಅವತಾರ ಬೆಚ್ಚಿಬೀಳಿಸುತ್ತದೆ. ಮುಂದೆ ಅದೇ ಕೃಷ್ಣನ ಅವತಾರ ಚಿತ್ರಕ್ಕೊಂದು ತಾರ್ಕಿಕ ಅಂತ್ಯವನ್ನೂ ನೀಡುತ್ತದೆ.
ಡಿಸಿ ಅಪಹರಣದಲ್ಲಿ ಸಂಶಯ ಪಡಲಾಗುವ ವೀರಪ್ಪ, ಮುತ್ತಪ್ಪ, ಟೋನಿ, ಸಬ್ ಇನ್ಸ್ ಪೆಕ್ಟರ್ ಕಿರಣ್ ಕುಮಾರ್, ರುದ್ರ, ಎಂ.ಎಲ್.ಎ ನಾಗ ಶೇಖರ್ ಎಲ್ಲರೂ ವ್ಯವಸ್ಥೆಯನ್ನು ದುರುಪಯೋಗ ಪಡಿಸುವ ಭಾಗವಾಗಿಯೇ ಕಾಣುತ್ತಾರೆ. ಇವರೆಲ್ಲರ ಬಂಡವಾಳ ಕೊನೆಗೂ ಬದಲಾಗುತ್ತದೆ.
ಕೊನೆಯಲ್ಲಿ ಬರುವ ನ್ಯಾಯಾಲಯದ ಭಾಗ ಥ್ರಿಲ್ಲಿಂಗ್ ಎನಿಸುತ್ತದೆ. ಕಾಮಿಡಿ ರೀಲ್ ಟೀಮ್ ಇಲ್ಲಿಯೂ ಅದೇ ಕಾರ್ಯ ನಿರ್ವಹಿಸುವುದರಿಂದ ಅಲ್ಲಲ್ಲಿ ತಮಾಷೆಯ ಘಟನೆಗಳು ಇಣುಕಿವೆ.
ಆದರೆ ನಿರ್ದೇಶಕರಿಗೆ ಪ್ರೀತಿ ಪ್ರೇಮದ ಕ್ಷಣಗಳ ಸಮರ್ಪಕ ನಿರ್ವಹಣೆ ಬಂದಿಲ್ಲ. ಆದ್ದರಿಂದ ಸ್ವಾತಿ ಪಾತ್ರ ಗಮನ ಸೆಳೆಯುವಲ್ಲಿ ವಿಫಲವಾಗುತ್ತದೆ. ಅಲ್ಲದೆ
ಕುತೂಹಲ ಘಟ್ಟದಲ್ಲಿ ‘ಗಾಯವಾದ ಪ್ರೀತಿಯ..’ ಅಂತಾ ಹಾಡು ಬರುವಂತೆ ಮಾಡುತ್ತಾರೆ..
ಮುಖ್ಯ ನಟ ಜೈ ಶೆಟ್ಟಿ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಶ್ರಮ ಪಟ್ಟಿದ್ದಾರೆ. ಆದರೆ ಹೊಡೆದಾಟದಲ್ಲಿ ಗಮನ ಸೆಳೆಯುತ್ತಾರೆ. ಅಶೋಕ್ ಕುಮಾರ್ ಹಾಗೂ ಇತರರು ಸಹ ಅಭಿನಯದಲ್ಲಿ ಇನ್ನೂ ಪಳಗಬೇಕು.
ಪ್ರಮೋದ್ ಶೆಟ್ಟಿ, ಸುಧಾರಾಣಿ, ಬ.ಲ.ರಜವಾಡಿ, ವಿಕ್ಟರಿ ವಾಸು, ವೆಂಕಟೇಶ್ ಪ್ರಸಾದ್, ಅಶ್ವಿನ್ ಹಾಸನ್, ರಾಜೇಂದ್ರ ಕಾರಂತ್ ಮೊದಲಾವರ ಪಾತ್ರಗಳು ಗಮನ ಸೆಳೆಯುತ್ತವೆ.
ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಪೂರನ್ ಶೆಟ್ಟಿಗಾರ್ ಸಂಗೀತ, ಫ್ರಾನ್ಸ್ ಕ್ಲಿನ್ ರಾಕಿ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ.