ನಿರ್ಮಾಣ : ಸ್ವಾತಿ ಕುಮಾರ್
ನಿರ್ದೇಶನ : ಎಸ್.ನಾರಾಯಣ್
ರಕ್ತ ಸಿಕ್ತ ಅಧ್ಯಾಯ ಜೊತೆಗೆ ಮಾಫಿಯ..
ಕಥೆಯ ಒಳಗೆ ಐದು ಡೈಮೆನ್ಸನ್ ಇದೆಯೋ ಇಲ್ಲವೋ.. ಆದರೆ ಸಿನಿಮಾ ಹೊರಗೆ ಐದು ಕುತೂಹಲಕಾರಿ ಅಂಶಗಳಿವೆ..
ಇದು ನಿರ್ದೇಶಕ ಎಸ್.ನಾರಾಯಣ್ ಅವರ ಐವತ್ತನೇ ಸಿನಿಮಾ, ನಟ ಆದಿತ್ಯ ಅವರ 25 ನೇ ಸಿನಿಮಾ, ಪ್ರಮುಖ ಪಾತ್ರದಲ್ಲಿ ಎಸ್.ನಾರಾಯಣ್ ನಟಿಸಿದ್ದಾರೆ ಮಾತ್ರವಲ್ಲ ಸಂಗೀತವನ್ನೂ ನೀಡಿದ್ದಾರೆ ಮತ್ತು ಇದು ಈಗಿನ ಕಾಲದ ಚಿತ್ರ.
ಮೊದಲಿಗೆ ಒಬ್ಬನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗುತ್ತದೆ. ಅದರ ಬೆನ್ನ ಹಿಂದೆ ಮತ್ತೊಬ್ಬನ ಹತ್ಯೆ ನಡೆಯುತ್ತದೆ. ಅದು ಐವರು ಸ್ನೇಹಿತರ ತಂಡದಲ್ಲಿ ಇಬ್ಬರ ಹತ್ಯೆ.
ಪೊಲೀಸರಿಗೆ ಈ ನಿಗೂಢ ಮತ್ತು ಕ್ರೌರ್ಯ ಮೆರೆದ ಕೊಲೆಗಳು ಸವಾಲಾಗುತ್ತವೆ. ಅದಕ್ಕಾಗಿ ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುತ್ತದೆ. ಅವರ ಹೆಸರು ಅಭಿನಂದನ್.
ಅಭಿನಂದನ್ ಹುಡುಕಾಟದಲ್ಲಿ ದೊರೆಯುವುದು ಅಡುಗೆ ಕೆಲಸ ಮಾಡುವ ಮಹಿಳೆ. ಅಲ್ಲಿಂದ ಕೌತುಕ ಆರಂಭವಾಗುತ್ತದೆ. ಆ ಮಹಿಳೆಯ ಮಗ ಹೀರೋ ತಿಳಿಯುವ ಹೊತ್ತಿಗೆ ಮೊದಲರ್ಧ ಮುಗಿಯುತ್ತದೆ.
ಮುಂದೆ ಅದರ ಫ್ಲ್ಯಾಶ್ ಬ್ಯಾಗ್ ಗಳು ತೆರೆದುಕೊಳ್ಳುತ್ತಾ ಗಾಬರಿ ಹುಟ್ಟಿಸುತ್ತವೆ. ಮುಖ್ಯವಾಗಿ ಬ್ಲಡ್ ಮಾಫಿಯಾ ವಿಷಯ ಬೆಚ್ಚಿ ಬೀಳಿಸುತ್ತದೆ.
ಒಂದು ಉತ್ತಮ ಸಂದೇಶವಿರುವ ಚಿತ್ರದ ಮೂಲಕ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಮರು ಪ್ರವೇಶ ಪಡೆದರೂ ಮಗ ಪಂಕಜ್ ಹಾಗೂ ಇತರರ ನೆರವಿನಿಂದ ಹೊಸ ನಿರೂಪಣೆಯತ್ತ ವಾಲಿದ್ದಾರೆ.
ಹಾಗಾಗಿ ಓವರ್ ಬಿಲ್ಡಪ್, ಹಿಂಸೆ ನೀಡುವ ಸಂಭಾಷಣೆ ಇಲ್ಲಿ ಕಾಣ ಸಿಗುವುದಿಲ್ಲ. ಆದಿತ್ಯ ಸಿಕ್ಕ ಅವಕಾಶದಲ್ಲಿ ಮಿಂಚಿದ್ದಾರೆ. ಅದಿತಿ ಪ್ರಭುದೇವ ಪಾತ್ರಕ್ಕೆ ಮಿತಿ ಇದೆ. ಉಳಿದ ಪಾತ್ರಗಳು ಗಮನ ಸೆಳೆಯುತ್ತವೆ.
ದಾನ ಮಾಡುವ ರಕ್ತ ಎಲ್ಲಿಗೆ ಹೋಗುತ್ತದೆ. ಅದರ ಮೌಲ್ಯಗಳೇನು.. ಸಮಾಜದಲ್ಲಿ ನಡೆಯುತ್ತಿರುವ ಅದರ ದುರುಪಯೋಗ ಏನು ಎಂಬುದರ ಮೇಲೆ ಬೆಳಕು ಚೆಲ್ಲುವ ಚಿತ್ರವಾಗಿರುವ 5 ಡಿ ಹಲವು ವಿಶೇಷತೆಗಳಿಂದಲೂ ಗಮನ ಸೆಳೆಯುತ್ತದೆ.
ಕುಮಾರ್ ಗೌಡ ಛಾಯಾಗ್ರಹಣ ಹಾಗೂ ಧರ್ಮಾವಿಶ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ.