ನವರಸ ನಾಯಕ ಜಗ್ಗೇಶ್ ಅಭಿನಯದ, ಮಠ ಗುರುಪ್ರಸಾದ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ರಂಗನಾಯಕ ಮಾರ್ಚ್ 8 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ.
ರಮೇಶ್ ಅರವಿಂದ್ ನಟನೆಯ ‘ಪುಷ್ಪಕ ವಿಮಾನ’ ಖ್ಯಾತಿಯ ನಿರ್ಮಾಪಕ ವಿಖ್ಯಾತ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು, ಮಠ , ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ಹೊಸ ಬಗೆಯ ಟ್ರೆಂಡ್ ಸೃಷ್ಟಿಸಿದ್ದ ಗುರುಪ್ರಸಾದ್ ಹಾಗೂ ಜಗ್ಗೇಶ್ ಅವರ ಜೋಡಿ ನಗುವಿನ ಅಲೆ ಎಬ್ಬಿಸಲು ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಈ ಚಿತ್ರ ಮಾರ್ಚ್ 8ರಂದು ಬಿಡುಗಡೆ ಕಾಣುತ್ತಿದೆ.15 ವರ್ಷಗಳ ನಂತರ ಮತ್ತೆ ಒಂದಾದ ಜಗ್ಗೇಶ್ ಮತ್ತು ಗುರುಪ್ರಸಾದ್ ಜೋಡಿ ಈಗ ಪ್ರೇಕ್ಷಕರಿಗೆ ಯಾವ ರೀತಿ ಮೋಡಿ ಮಾಡುವರೆಂಬುದು ಕುತೂಹಲದ ವಿಷಯವಾಗಿದೆ.
ಚಿತ್ರದ ಹಾಡು ‘ಎನ್ನ ಮನದರಸಿ..’ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡ ಮಾಧ್ಯಮಗಳೆದುರು ಮಾಹಿತಿ ಹಂಚಿಕೊಂಡಿತು. ನವರಸ ನಾಯಕ ಜಗ್ಗೇಶ್ , ಚೈತ್ರಾ ಕೊಟ್ಟೂರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.
ಜಗ್ಗೇಶ್ ಹಿಂದಿನ ದಿನಗಳಿಗೆ ಕೊಂಚ ಜಾರಿದರು. ಗುರುಪ್ರಸಾದ್ ಜಗಮೊಂಡ ಯಾರ ಮಾತನ್ನೂ ಕೇಳುವುದಿಲ್ಲ ಎಂದರು. ಉದ್ಯಮದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ನವರಸನಾಯಕ ಜಗ್ಗೇಶ್, ‘ಫೈನ್ ಓನ್’ ಎಂಬ ಡಬ್ಬಿಂಗ್ ಸ್ಟುಡಿಯೋ ಆರಂಭಿಸುವ
ಮಾಹಿತಿ ನೀಡಿದರು.