ಚಿತ್ರದ ಹೆಸರು ಮಿಸ್ಟರ್ ನಟ್ವರ್ ಲಾಲ್.. ಕೇಳಿದ ತಕ್ಷಣವೇ ಅಮಿತಾಬ್ ಬಚ್ಚನ್ ನೆನಪಾಗುತ್ತಾರೆ..
ಆದರೆ ಇದು ಅನೇಕ ಸೋಗುಗಳನ್ನು ಹಾಕಿ ವಂಚನೆಯನ್ನೇ ಕಾಯಕ ಮಾಡಿಕೊಂಡ ಖಳನೊಬ್ಬನ ಕಥೆ. ಆದರೆ ರಾಜ್ಯ ಸರ್ಕಾರದ ಅನೇಕ ಹಗರಣಗಳು ಚಿತ್ರದಲ್ಲಿಯೂ ಕಾಣ ಸಿಗುತ್ತವೆ.
ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಎದ್ದು ಕಂಡಿದ್ದು ಅದೇ ಹಗರಣಗಳು..
ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ ಎಂಬ ಉತ್ತರ ಕೊಟ್ಟರು ಮೂಲತಃ ವಕೀಲರಾಗಿರುವ ನಿರ್ದೇಶಕ ಎ.ವಿ.ಲವ.
ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಗಣ್ಯರ ದಂಡೇ ಆಗಮಿಸಿತ್ತು. ಶಾಸಕ ಡಾ.ರಂಗನಾಥ್, ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಮಾಜಿ ಅಧ್ಯಕ್ಷ ಭಾ.ಮ.ಹರೀಶ್, ಪದಾಧಿಕಾರಿಗಳಾದ ಶಿಲ್ಪಾ ಶ್ರೀನಿವಾಸ್, ಮಹಾದೇವ್ ಚಿಂಗಾರಿ,
ವೆಂಕಟೇಶ್, ಭಾ.ಮ.ಗಿರೀಶ್, ಕುಶಾಲ್ ಚಂದ್ರಶೇಖರ್, ದುನಿಯಾ ಸಿದ್ದರಾಜು, ಪ್ರಭು ಹಾಗೂ ನಿರ್ದೇಶಕ ಬಹದ್ದೂರ್ ಚೇತನ್ ಹಾಗೂ ಇತರರು ಹಾಜರಿದ್ದರು.
ಗಣ್ಯರೆಲ್ಲರೂ ಚಿತ್ರಕ್ಕೆ ಶುಭ ಹಾರೈಸಿ ಲವ ಮತ್ತು ತನುಷ್ ಅವರ ಧೈರ್ಯ ಸಾಹಸಗಳನ್ನು ಕೊಂಡಾಡಿದರು. ಚಿತ್ರೀಕರಣ ಸಂದರ್ಭದಲ್ಲಿ ಶಾಸಕ ರಂಗನಾಥ್ ಅವರು ಮಾಡಿದ ಸಹಾಯವನ್ನು ನೆನೆಯಿತು ಚಿತ್ರತಂಡ.
ಮುಖ್ಯ ಪಾತ್ರದಲ್ಲಿರುವ ನಟಿ ಸೋಮಾಲ್ ಮಂಥೇರೋ, ನಟಿ ಹರಿಣಿ, ಕಲಾವಿದರಾದ ವಿಜಯ್ ಚೆಂಡೂರ್, ಸುಧೀ ಕಾಕ್ರೋಚ್,
ರಘು ರಾಮನಕೊಪ್ಪ ಹಾಗೂ ಛಾಯಾಗ್ರಾಹಕ ವಿಲಿಯಂ ಡೇವಿಡ್ ಚಿತ್ರೀಕರಣ ಸಂದರ್ಭದ ಅನುಭವಗಳನ್ನು ಹೇಳಿಕೊಂಡರು.
ಮುಖ್ಯ ಪಾತ್ರದಲ್ಲಿರುವ ತನುಷ್ ಶಿವಣ್ಣ ತನುಷ್ ಸಿನಿಮಾಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಈ ಸಂದರ್ಭದಲ್ಲಿ ಎದುರಾದ ಸಂಕಷ್ಟಗಳನ್ನು ನೆನೆದರು.
ಸಿನಿಮಾಗೆ ಐದು ಕೋಟಿ ಹಾಕಿದ ನಂತರವೂ ಈ ಸಿನಿಮಾ ಸಹವಾಸವೇ ಬೇಡ ಎನಿಸಿದ್ದೂ ಇದೆ. ಆದರೆ ಗೆಳೆಯರು ಎಲ್ಲಿಂದ ಮತ್ತು ಹೇಗೆ ಸಹಾಯ ಮಾಡಿದರೆಂಬುದು ಅಚ್ಚರಿಯಾಗಿದೆ ಎಂದರು ನಿರ್ಮಾಪಕ ಕಮ್ ನಟ ತನುಷ್ ಶಿವಣ್ಣ.
ಅಂದ ಹಾಗೆ ಮಿ.ನಟ್ವರ್ ಲಾಲ್ ಇದೇ ತಿಂಗಳು ಅಂದರೆ ಫೆಬ್ರವರಿ 23 ರಂದು ತೆರೆ ಕಾಣುತ್ತಿದೆ.