ಆನೇಕಲ್ ಬಾಲರಾಜು ಅವರ ಪುತ್ರ ಸಂತೋಷ್ ಬಾಲರಾಜ್ ನಟನೆಯ ಹಾಗೂ ಅಶೋಕ್ ಕಡಬ ನಿರ್ದೇಶನದ ಚಿತ್ರ ಸತ್ಯಂ ಬಿಡುಗಡೆಗೆ ಸಜ್ಜಾಗಿದೆ.
ವಿ.ಕೆ.ಮಹಂತೇಶ್ ನಿರ್ಮಾಣದ ಈ ಚಿತ್ರದಲ್ಲಿ ಬಹಳವೇ ವಿಶೇಷತೆಗಳಿದ್ದು, ಭೂತ ಕೋಲ ಪ್ರಮುಖ ಪಾತ್ರ ವಹಿಸಿರುವುದು ಚಿತ್ರತಂಡದ ಹುಮ್ಮಸ್ಸು ಹೆಚ್ಚಿಸಿದೆ.
ಚಿತ್ರವು ವಿಭಿನ್ನ ಬಗೆಯ ಕಥಾಹಂದರವನ್ನು ಹೊಂದಿದೆ. ಮುಖ್ಯವಾಗಿ ಹಿರಿಯ ನಿರ್ದೇಶಕ ದಿವಂಗತ ಕೆ.ವಿ.ರಾಜು ಅವರು ಚಿತ್ರಕಥೆ ಬರೆದಿದ್ದಾರೆ.
ಚಿತ್ರ ಆರಂಭವಾಗಿ ಎರಡೂವರೆ ವರ್ಷ ಕಳೆದಿವೆ. ಹಾಗಾಗಿ ಇದು ಯಾವುದೇ ಪ್ರೇರಣೆ ಪಡೆದು ಆಗಿರುವ ಚಿತ್ರವಲ್ಲ; ಕೆ.ವಿ.ರಾಜು ಮತ್ತು ನಮ್ಮ ತಂಡ ಸಾಕಷ್ಟು ಅಧ್ಯಯನ ನಡೆಸಿ ಕಥೆ ಚಿತ್ರಕಥೆ ಮಾಡಿದೆ ಎಂಬ ಉತ್ತರ ಕೊಟ್ಟರು ನಿರ್ದೇಶಕ ಅಶೋಕ್ ಕಡಬ.
ಈ ಚಿತ್ರವನ್ನು ಕಾಂತಾರ ಪ್ರೇರಣೆಯಿಂದ ಮಾಡಿದಿರಾ ಎಂಬ ಪ್ರಶ್ನೆ ಎದುರಾದಾಗ, ನಮ್ಮ ಚಿತ್ರದ ಆರಂಭ ಬಹಳ ಹಳೆಯದು. ಕಾಂತಾರ ಈಚೆಗೆ ಬಂದಿದ್ದು ಎಂದು ಸಮರ್ಥಿಸಿಕೊಂಡರು ಅಶೋಕ್ ಕಡಬ.
ಎಲ್ಲೋ ಒಂದು ಕಡೆ ಹುಲಿ ಉಗುರು ಕಾಣುತ್ತದೆ. ಅದು ನಿಜವಾದುದೇ ಎಂಬ ಪ್ರಶ್ನೆಗೆ, ಅದು ನಿರ್ಮಾಪಕರು ಕೊಟ್ಟಿದ್ದರೆ ನಿಜವಾದದ್ದು ಆಗಿರುತ್ತಿತ್ತೋ ಏನೋ.. ಆದರೆ ಅದನ್ನು ಕೊಟ್ಟಿದ್ದು ಕಲಾ ನಿರ್ದೇಶಕ. ಹಾಗಾಗಿ ಅದು ಡುಪ್ಲಿಕೆಟ್ ಎಂಬ ಉತ್ತರ ಬಂತು ಅವರಿಂದ.
ಅದು ಸತ್ಯಂ ಚಿತ್ರದ ಟೀಸರ್ ಬಿಡುಗಡೆಯ ಸಮಾರಂಭ. ಚಿತ್ರತಂಡ ಅತ್ಯಂತ ಖುಷಿಯಿಂದ ಪಾಲ್ಗೊಂಡಿತ್ತು. ನಿರ್ಮಾಪಕ ವಿ.ಕೆ.ಮಹಂತೇಶ್ ಚಿತ್ರದ ಸಾಕಷ್ಟು ವಿಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಚಿತ್ರ ನಿರ್ಮಾಣ ನನ್ನ ಫ್ಯಾಷನ್. ಅಶೋಕ್ ಕಡಬ ಅವರ ಕಥೆ ಇಷ್ಟವಾಯ್ತು ಮಾಡಿದೆವು. ಆದರೆ ಹಣ ಲೆಕ್ಕ ಹಾಕಲಿಲ್ಲ. ಆನೇಕಲ್ ಬಾಲರಾಜ್ ಬಹಳವೇ ಬೆಂಬಲ ಕೊಟ್ಟಿದ್ದರು. ದುರ್ದೈವ ಅವರು ನಮ್ಮನ್ನು ಅಗಲಿ ಹೋದರು. ಹಾಗಾಗಿ ಚಿತ್ರದ ಕೆಲಸಗಳು ತಡವಾದವು ಎಂದರು.
ಈ ಚಿತ್ರ ತಡವಾದರೂ ಇದರ ಆಶಯಗಳು ದೊಡ್ಡದಾಗಿವೆ ಎಂದರು ಸಂತೋಷ್ ಬಾಲರಾಜ್. ಹಿಂದೆ ಕರಿಯ-2, ಕೆಂಪ, ಗಣಪ ಈ ಚಿತ್ರಗಳು ಒಂದು ರೀತಿಯಾದರೇ..
ಸತ್ಯಂನ ಗುಣವೇ ಬೇರೆ ಇದು ಸಂಪೂರ್ಣ ಕಮರ್ಷಿಯಲ್ ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದರು.
ಈ ಚಿತ್ರದಲ್ಲಿ ನಟಿಸಿದ್ದು ಖುಷಿ ಕೊಟ್ಟಿದೆ ಎಂದವರು ನಟಿ ರಂಜನಿ ರಾಘವನ್. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನನ್ನ ಪಾತ್ರವೂ ವಿಭಿನ್ನವಾಗಿದೆ ಎಂದರು.
ಕೆ.ವಿ.ರಾಜು ಅವರಂತಹ ಪ್ರಬುದ್ಧ ನಿರ್ದೇಶಕ ಮತ್ತು ಗಟ್ಟಿ ಸಂಭಾಷಣೆಕಾರ ಬಿಟ್ಟು ಹೋದ ಉಳಿದ ಸಂಭಾಷಣೆ ನಾನು ಮಾಡಿರುವೆ. ಈ ಅವಕಾಶ ಬಹಳ ದೊಡ್ಡದಾಗಿದೆ ಎಂದವರು ಗೀತ ಸಾಹಿತಿ ಕಿನ್ನಾಳ್ ರಾಜ್.
ವಿಶೇಷವೆಂದರೆ; ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ಕೆ.ಎ.ಸುರೇಶ್ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಇದು ನನ್ನ ಮೊದಲ ಪ್ರಯತ್ನ. ಮುಂದೆ ವಿತರಣೆ ಕೆಲಸ ಬಹಳಷ್ಟು ಆಗಬಹುದು ಎಂದರು ಸುರೇಶ್.
ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ಚಿತ್ರಕ್ಕಿದೆ. ಸಿನಿಟೆಕ್ ಸೂರಿ ಚಿತ್ರದ ಛಾಯಾಗ್ರಾಹಕ.