ಕಳೆದ ಏಳೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಹಲವು ಚಿತ್ರಗಳಲ್ಲಿ ದುಡಿದಿದ್ದ ಸತೀಶ್ ಕುಮಾರ್ ಈಗ ‘ಜೊತೆಯಾಗಿರು’ ಎಂಬ ಚಿತ್ರದ ಮೂಲಕ ಈಗ ನಿರ್ದೇಶಕರಾಗಿದ್ದಾರೆ.
ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಇದು 2009ರಲ್ಲಿ ನಡೆದ ಸತ್ಯ ಘಟನೆ ಆಧರಿಸಿ ಕಥೆ ಮಾಡಲಾಗಿದೆ ಎಂಬುದು ಮಾಹಿತಿ.
ಆಗಿನ್ನೂ ಕೀಪ್ಯಾಡ್ ಮೊಬೈಲ್ ಇದ್ದಂಥ ಸಮಯ. ಆಗ ಹುಡುಗಿಯ ಮೊಬೈಲ್ ಗೆ ಬರುವ ಒಂದು ಮಿಸ್ ಕಾಲ್ ನಿಂದ ಆರಂಭವಾಗುವ ಪ್ರೇಮಕಥೆ ಮುಂದೆ ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಚಿತ್ರವನ್ನು ಅದೇ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರಿಸಲಾಗಿದೆ ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ರೇಣು ಮೂವೀಸ್ ನಿರ್ಮಾಣದ ಈ ಚಿತ್ರದ ಐದು ಹಾಡುಗಳಿಗೆ ವಿನು ಮನಸು ಸಂಗೀತ ನಿರ್ದೇಶನವಿದೆ.
ಸತೀಶ್ ಚಂದ್ರಯ್ಯ ಸಂಕಲನ, ರಾಜ ಶಿವಶಂಕರ್ ಮತ್ತು ಆನಂದ್ ಇಳಯರಾಜ ಛಾಯಾಗ್ರಹಣ, ಕೆ.ಕಲ್ಯಾಣ್ ಮತ್ತು ಮನ್ವರ್ಷಿ ಸಾಹಿತ್ಯವಿದ್ದು, ಹಾಡುಗಳನ್ನು ಕಳಸ, ಸಕಲೇಶಪುರ, ಕುಂದಾಪುರದ ಸುತ್ತಮುತ್ತಲಿನ ಸುಂದರ ಸ್ಥಳಗಳಲ್ಲಿ ಚಿತ್ರಿಕರಿಸಲಾಗಿದೆ.
ವೆಂಕಟೇಶ್ ಹೆಗ್ಡೆ ಹಾಗೂ ಸುನೀಲ್ ಕಾಂಚನ್, ರಶ್ಮಿಗೌಡ ಹಾಗೂ ಪೂಜಾ ಆಚಾರ್ ಮುಖ್ಯ ಪಾತ್ರದಲ್ಲಿದ್ದಾರೆ. ಉಳಿದ ತಾರಾಗಣದಲ್ಲಿ ಶಂಕರ ನಾರಾಯಣ್, ಸುಧೀರ್, ಸುಧಾ, ಯಶೋಧ, ಅಶ್ವಿನಿ, ಸಂತೋಷ್ , ರಾಜಶೇಖರ್, ಮಂಜು ಹಾಗೂ ಇತರರು ನಟಿಸಿದ್ದಾರೆ.