ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್) ಸಾಕಷ್ಟು ನಿಗೂಢ ಸಂಗತಿಗಳನ್ನು ಒಳಗೊಂಡಿದೆ. ಇದರ ಚರಿತ್ರೆಯ ಕೆಲವು ವಿಷಯಗಳನ್ನು ಬಿಚ್ಚುವ ಪ್ರಯತ್ನ ಚಿತ್ರವೊಂದರಲ್ಲಿ ಮಾಡಲಾಗಿದೆ.
ಅದೇ ಭೈರ್ಯ-ಕೆಎ07..!
ಕೋಲಾರ ಚಿನ್ನದ ಗಣಿಯ ಅನೇಕ ನಿಗೂಢ ವಿಷಯಗಳ ಬಗ್ಗೆ ಈಗಲೂ ಗಮನ ಹರಿಸುತ್ತಿಲ್ಲ; ಆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಇದು ಕನ್ನಡ ಚಿತ್ರರಂಗದ ಹೊಸ ಮೈಲುಗಲ್ಲಾಗಲಿದೆ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದವರು ನಿರ್ದೇಶಕ ರೋಷನ್ ಎಂ.ರಾವ್.
ಗೌರಿ ಬಿದನೂರು ಮೂಲದ ಈ ಯುವಕ ರಾಕಿಂಗ್ ಸ್ಟಾರ್ ಯಶ್ ಕಟ್ಟ ಅಭಿಮಾನಿ. ಭರತ ನಾಟ್ಯ ಹಾಗೂ ಮುಂಬೈನಲ್ಲಿ ನಟನೆ ತರಬೇತಿ ಕಲಿತಿರುವ ಯುವಕ.
ಸೆಟ್ ಕೆಲಸಗಳ ನಿರ್ಹವಣೆಯಲ್ಲಿ ಪಳಗಿರುವ ರೋಷನ್ ‘ಭೈರ್ಯ ಕೆಎ-07’ ಚಿತ್ರದ ಮುಖ್ಯ ಪಾತ್ರಧಾರಿ ಮತ್ತು ನಿರ್ದೇಶಕ.
ಬಾಗಲಕೋಟೆಯ ಷರೀಫ ಬೇಗಂ ನಡಾಫ್ ಈ ಚಿತ್ರದ ನಿರ್ಮಾಪಕರು. ಎನ್ಜಿಓ ಒಂದರ ಮುಖ್ಯಸ್ಥರಾಗಿ ಏನಾದರೂ ಸಾಧನೆ ಮಾಡುವ ಸಲುವಾಗಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ ಎಂಬುದು ಮಾಹಿತಿ.
ಈಚೆಗೆ ಉದ್ಯಮಿ ಜಿ.ಬಾಲಾಜಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಇದು ಬೆಂಗಳೂರು ಹೊರತುಪಡಿಸಿದ ಭೂಗತ ಲೋಕದ ಕಥೆ. ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್, ಚಿಂತಾಮಣಿ, ಶಿಡ್ಲಘಟ್ಟ ಭಾಗಗಳನ್ನು ಪ್ರತಿನಿಧಿಸುತ್ತದೆ.
ಕೆಜಿಎಫ್ ನ ಚಿನ್ನದ ಗಣಿ ರಕ್ಷಣೆ ಮತ್ತು ಸರ್ಕಾರ ನಡೆದುಕೊಂಡಿರುವ ಪರಿ ಯಾವುದು ಎಂಬೆಲ್ಲಾ ಪ್ರಶ್ನೆಗಳಿಗೆ ಈ ಚಿತ್ರದಲ್ಲಿ ಉತ್ತರ ಸಿಗುತ್ತದೆ ಎಂಬುದು ನಿರ್ದೇಶಕರು ನೀಡಿದ ವಿವರ.
70ರ ದಶಕ ಹಾಗೂ ಅಲ್ಲಿಂದ 15 ವರ್ಷಗಳ ಕಾಲ ಕೆಜಿಎಫ್ ನಲ್ಲಿ ಏನೆಲ್ಲಾ ನಡೆಯಿತು. ಆ ಕಾಲಘಟ್ಟ ಹೇಗಿತ್ತು ಎಂಬುದನ್ನು ವಿವರಿಸಲಾಗಿದೆ ಎಂಬುದು ವಿವರಣೆ.
ಶಿವಮೊಗ್ಗ ಮೂಲದ ಆಶಿಕಾರಾವ್ ಚಿತ್ರದಲ್ಲಿ ರೋಷನ್ ಎದುರು ನಟಿಸಿದ್ದು, ಇನ್ನುಳಿದಂತೆ ನಿರ್ದೇಶಕ, ಹಿರಿಯ ಪೋಷಕ ಕಲಾವಿದರು, ಹೆಸರಾಂತ ತಂತ್ರಜ್ಞರು ಚಿತ್ರದಲ್ಲಿದ್ದಾರೆ ಎಂಬ ಮಾಹಿತಿಗಳು ಬಂದವು.