ಒಂದು ಕಾಲದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಸ್ಯಾಂಡಲ್ ವುಡ್ ನಲ್ಲಿ ಹಾಸ್ಯ ನಟರಾಗಿ ಬೆಳೆದು ನಿಂತಿದ್ದು ಇತಿಹಾಸ..
ಅದೇ ಚಿಕ್ಕಣ್ಣ ಈಗ ಹೀರೋ..!
ಚಿತ್ರದ ಹೆಸರು ಉಪಾಧ್ಯಕ್ಷ. ಶರಣ್ ಜೊತೆ ಅಧ್ಯಕ್ಷ ಚಿತ್ರದಲ್ಲಿ ಯಶಸ್ವಿಯಾದ ಚಿಕ್ಕಣ್ಣ ಅದೇ ವರಸೆಯಲ್ಲಿ ಮಾಡಿರುವ ಚಿತ್ರವೇ ಇದು ಎಂಬಂತೆ ಇತ್ತು ಚಿತ್ರದ ಟೀಸರ್.
ಉಮಾಪತಿ ಗೌಡ ಹಾಗೂ ಸ್ಮಿತಾ ಉಮಾಪತಿ ನಿರ್ಮಾಣದ ಈ ಚಿತ್ರದ ಟೀಸರ್ ಬಿಡುಗಡೆಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳದೇ ಕಲರವ.
ದುನಿಯಾ ವಿಜಯ್, ಲವ್ಲಿಸ್ಟಾರ್ ಪ್ರೇಮ್, ಅಭಿಷೇಕ್ ಅಂಬರೀಷ್, ಧನ್ವೀರ್, ಅದಿತಿ ಪ್ರಭುದೇವ, ಗರುಡ ರಾಮ್, ಆನಂದ್ ಆಡಿಯೋ ಶ್ಯಾಮ್ ಹೀಗೆ ಗಣ್ಯರ ಸಮಾಗಮವೇ ಅದಾಗಿತ್ತು.
ಮೊದಲಿಗೆ ಗಾರೆ ಕೆಲಸದ ಗೆಳೆಯರ ಶುಭ ಹಾರೈಕೆ ಇತ್ತು. ನವರಸ ನಾಯಕ ಜಗ್ಗೇಶ್ ವಿಟಿ ಮೂಲಕ ಶುಭ ಹಾರೈಸಿದರು.
ಚಿಕ್ಕಣ್ಣ ಇಷ್ಟಪಟ್ಟು ಮೇಲೆ ಬಂದವರು ಆ ಕಷ್ಟದ ಅರಿವು ನನಗೂ ಇದೆ ಎಂದರು ದುನಿಯಾ ವಿಜಯ್. ‘ಒಬ್ಬ ವ್ಯಕ್ತಿಗೆ ಅಳೋಕೆ ಗೊತ್ತಿದ್ರೆ ಮಾತ್ರ ನಗಿಸಬಹುದು..’ ಚಿಕ್ಕಣ್ಣ ತೆರೆಯ ಮೇಲೆ ನಗಿಸಿದ ಪರಿ ಇದು ಎಂದರು.
ಮನೆ ಬಿದ್ದೋದ್ರು ಕಟ್ಟಿಕೊಳ್ಳೋ ಸಾಮರ್ಥ್ಯ ಉಳ್ಳವರು ಚಿಕ್ಕಣ್ಣ ಎಂದರು ಲವ್ಲಿಸ್ಟಾರ್ ಪ್ರೇಮ್. ಚಿಕ್ಕಣ್ಣ ದೊಡ್ಡವನಾದ ಎಂದು ಉದ್ಘರಿಸಿ ನಕ್ಕರು ಅಭಿಷೇಕ್ ಅಂಬರೀಷ್.
ಅಲ್ಲದೆ ಧನ್ವೀರ್, ಅದಿತಿ ಪ್ರಭುದೇವ,
ಮಲೈಕಾ, ಲಕ್ಕಿ ಸೂರಿ, ಆನಂದ್ ಆಡಿಯೋ ಶ್ಯಾಮ್, ನಟ ಪ್ರಥಮ್ ಮೊದಲಾದವರು ಚಿಕ್ಕಣ್ಣ ಅವರ ಸಾಧನೆ ಹೊಗಳಿ ಶುಭ ಹಾರೈಸಿದರು.
ನಾನು ಸೆಟ್ ಗೆ ಹೋಗಲಿಲ್ಲ; ಸ್ಕ್ರಿಪ್ಟ್ ಹಂತದಲ್ಲಿ ಲಕ್ಕಿ ಸೂರಿ, ತರುಣ್ ಸುಧೀರ್ ಸಹಕರಿಸಿದರು. ಚಿತ್ರದಲ್ಲಿ ಆಕ್ಷನ್ ಇದೆ. ಅದನ್ನು ಶರಣ್ ಮಾಡುತ್ತಾರೆ ಎಂಬ ವಿವರ ಕೊಟ್ಟರು ಉಮಾಪತಿ.
ಶಕ್ತಿ ಅನಿಲ್ ಚಿತ್ರದ ನಿರ್ದೇಶಕ. ನಾನು ಏನು ಹೇಳುವುದಿಲ್ಲ; ಸಿನಿಮಾ ಎಲ್ಲವನ್ನು ಹೇಳುತ್ತದೆ ಎಂದರು.
ಕೊನೆಯಲ್ಲಿ ಚಿಕ್ಕಣ್ಣ ಮಾತನಾಡುವಾಗ ಭಾವುಕರಾದರು. ಕಷ್ಟದ ದಿನಗಳು ನೆನಪಾದವು ಎಂದರು ಹಾಗೂ ಎಲ್ಲರಿಗೂ ಅಭಿಮಾನ ತುಂಬಿದ ಧನ್ಯವಾದ ತಿಳಿಸಿದರು.