ರೇಟಿಂಗ್ 4.5/5
ನಿರ್ಮಾಣ : ಸಂದೇಶ್ ಪ್ರೊಡಕ್ಷನ್ಸ್
ಸಂದೇಶ್ ಎನ್
ನಿರ್ದೇಶನ : ಶ್ರೀನಿ
ಒಳ್ಳೆಯ ಗ್ಯಾಂಗ್ ಸ್ಟರ್ (ಓ.ಜಿ)
ಇದು ಗ್ಯಾಂಗ್ ಸ್ಟರ್ ಕಥೆ ಅಲ್ಲವೇ ಅಲ್ಲ.. ರಕ್ತ ಪಾತ ನಡೆಯುವುದಿಲ್ಲ..
ನಡೆಯುವುದೆಲ್ಲಾ ಬುದ್ಧಿವಂತಿಕೆ ನಡೆಯ ಕಸರತ್ತು..
ಪ್ರಮುಖ ಜೈಲ್ (ಕೇಂದ್ರ ಕಾರಾಗೃಹ) ನಲ್ಲಿ ದೇಶದ ಉನ್ನತ ಅಧಿಕಾರಿಯೊಬ್ಬ ಚಿನ್ನವನ್ನು ಅಡಗಿಸಿಟ್ಟು ಹೂಡುವ ಆಟಕ್ಕೆ ಪ್ರತಿ ತಂತ್ರವನ್ನು ಹೆಣೆಯುವ ಪ್ರತಿ ಹಾದಿಯಲ್ಲಿಯೂ ದಿಟ್ಟ ಹೆಜ್ಜೆ ಮತ್ತು ಕಲಾತ್ಮಕ ನೆಯ್ಗೆಯ ಚೆಂಡಾಟ..
ದಳವಾಯಿ ಎಂಬ ಭೂಗತ ಲೋಕದ ದೊರೆ ಜೈಲಿನ ಮೇಲೆ ದಾಳಿ ನಡೆಸಿ ಅಲ್ಲಿನ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡುವ ಆಟದಲ್ಲಿ ಪೊಲೀಸ್ ವ್ಯವಸ್ಥೆ ನಲುಗುತ್ತದೆ.
ತಂತ್ರ ಪ್ರತಿತಂತ್ರದಲ್ಲಿ ಮುಳುಗಿ ಹೋಗುವ ಉನ್ನತ ಪೊಲೀಸ್ ಅಧಿಕಾರಿ (ಚೆಂಗಪ್ಪ)ಯ ಇಂಟಲಿಜೆನ್ಸ್ ನಡೆಯ ಆಟ ಘೋಸ್ಟ್ ದಳವಾಯಿ ತಂತ್ರದ ಮುಂದೆ ನಡೆಯುವುದಿಲ್ಲ..
ಜೈಲ್ ಮತ್ತು ಹೊರಗಿನ ಪ್ರಪಂಚ ಸಮಾನಾಂತರ ನಡೆಯಲ್ಲಿ ಸಾಗುವಾಗ ಕ್ಷಣ ಕ್ಷಣವೂ ಹುಟ್ಟುವ ಕುತೂಹಲ ಪ್ರೇಕ್ಷಕನ ಉಸಿರು ಬಿಗಿ ಹಿಡಿಸುತ್ತದೆ.
ಉತ್ತಮ ನಡೆಯ ಭೂಗತ ದೊರೆ, ಮುಖ್ಯ ಮಂತ್ರಿ ಮತ್ತು ಆತನ ರೇಪಿಸ್ಟ್ ಮಗನನ್ನು ಉಡಾಯಿಸುತ್ತಾನೆ. ಆನಂತರ ಆತ ಏನಾದ ಎಂಬುದು ಕಥೆಯ ತಿರುಳು ಮತ್ತು ಮುಂದಿನ ಭಾಗಕ್ಕೆ ಲೀಡ್ ಎಂಬಂತೆ ಬಿಂಬಿತವಾಗಿದೆ.
ಒಳ್ಳೆಯ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಶಿವಣ್ಣ ಇಷ್ಟವಾಗುತ್ತಾರೆ. ಅವರ ಪಾತ್ರದ ಖದರ್ ಬೇರೆಯದೇ ಶೈಲಿಯಲ್ಲಿ ಇಲ್ಲಿ ಗೋಚರವಾಗುತ್ತದೆ.
ಅಲ್ಲದೆ ಹಾಡು ಮತ್ತು ಸುಮ್ ಸುಮ್ನೆ ಬರುವ ಡೈಲಾಗ್ ಗಳಿಂದ ಅವರಿಗೆ ಇಲ್ಲಿ ಮುಕ್ತಿ ಸಿಕ್ಕಿರುವುದು ಪ್ಲಸ್ ಆಗಿದೆ
ಇನ್ನು ಮಲಯಾಳಂ ನಟ ಜಯರಾಂ ಇಡೀ ಸಿನಿಮಾ ಆವರಿಸಿಕೊಂಡಿರುವುದು ವಿಶೇಷ. ಮತ್ತೊಬ್ಬ ನಟ ಪ್ರಶಾಂತ್ ನಾರಾಯಣ್ ಅಲ್ಲಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅನುಪಮ್ ಖೇರ್ ಕೇವಲ ಒಂದೇ ದೃಶ್ಯದಲ್ಲಿ ಕಾಣ ಸಿಗುತ್ತಾರೆ.
ಚಿತ್ರದಲ್ಲಿ ಟಿವಿ ಆಂಕರ್ ಆಗಿ ಕಾಣಿಸಿ ಕೊಂಡಿರುವ ಅರ್ಚನಾ ಜೋಯಿಸ್ ಪಾತ್ರವೇ ಮಹಿಳಾ ಪ್ರಮುಖ ಪಾತ್ರ. ಇನ್ನುಳಿದಂತೆ ಮಹಿಳಾ ಪಾತ್ರಗಳು ಹೆಚ್ಚು ಕಾಣಿಸುವುದಿಲ್ಲ.
ಮಹೇಂದ್ರ ಸಿಂಹ ಛಾಯಾಗ್ರಹಣ ನೆರಳು ಬೆಳಕಿನ ಆಟದಲ್ಲಿ ಗೆಲ್ಲುತ್ತದೆ. ಅರ್ಜುನ್ ಜನ್ಯ ಹಿನ್ನೆಲೆ ಸಂಗೀತದ ಅಬ್ಬರ ಚಿತ್ರದ ಹೈಲೈಟ್.
ಶಿವರಾಜ್ ಕುಮಾರ್ ಸಂಪೂರ್ಣ ಸಾಹಸ ಪ್ರಧಾನ ನಡೆಯಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿರುವ ಈ ಚಿತ್ರ ಅಭಿಮಾನಿಗಳ ಹಾಟ್ ಫೇವರಿಟ್ ಆಗುವುದರಲ್ಲಿ ಸಂಶಯವೇ ಇಲ್ಲ..