ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್..
ಅದು ಘೋಸ್ಟ್..!
ಸಂದೇಶ್ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಚಿತ್ರ. ಶ್ರೀನಿ ಇದರ ನಿರ್ದೇಶಕ.
ಚಿತ್ರದ ಪ್ರಚಾರದ ಸಲುವಾಗಿ ಮುಂಬೈ ಹಾಗೂ ಇತರ ಕಡೆಗಳಲ್ಲಿ ತಿರುಗಾಟ ನಡೆಸಿದ ‘ಘೋಸ್ಟ್’ ಚಿತ್ರತಂಡ ಭಾನುವಾರ ಶಿವಣ್ಣ ನಿವಾಸದಲ್ಲಿ ಪ್ರಚಾರ ಸಭೆ ನಡೆಸಿತು.
ಇದೇ 19 ಅಂದರೆ ಅಕ್ಟೋಬರ್ 19 ರಂದು ಬಿಡುಗಡೆ ಕಾಣುತ್ತಿರುವ ಚಿತ್ರದ ಆಶಯಗಳು ದೊಡ್ಡದಾಗಿವೆ. ಈ ಚಿತ್ರದಲ್ಲಿ ಬಾಲಿವುಡ್ ನ ಅನುಪಮ್ ಖೇರ್ ಹಾಗೂ ಮಲಯಾಳಂ ಚಿತ್ರರಂಗದ ಸ್ಟಾರ್ ಜಯರಾಮ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂಬೈನ ಪ್ರಚಾರ ಸಂದರ್ಭದಲ್ಲಿ ಈ ಎಲ್ಲಾ ನಟರು ಪಾಲ್ಗೊಂಡು ಪ್ಯಾನ್ ಇಂಡಿಯಾ ಖದರ್ ಹೆಚ್ಚಿಸಿದ್ದಾರೆ.
ಡಾ.ಶಿವರಾಜ್ ಕುಮಾರ್ ಸಂದೇಶ್ ಪ್ರೊಡಕ್ಷನ್ ಲಾಂಛನದಲ್ಲಿ ನಟಿಸಿರುವ ಮೂರನೇ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿರುವುದಾಗಿ ಶಿವಣ್ಣ ಮಾಹಿತಿ ನೀಡಿದರು.
ಇದುವರೆಗೂ ಮಾಡಿರದ ಪಾತ್ರವಿದು. ನಿರ್ದೇಶಕ ಶ್ರೀನಿ ಮತ್ತು ಛಾಯಾಗ್ರಾಹಕ ಮಹೇಂದ್ರ ಸಿಂಹ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದರು ಶಿವಣ್ಣ.
ಬೇರೆ ಬೇರೆ ರಾಜ್ಯಗಳಿಗೆ ತೆರಳಿದಾಗ ಅಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಅಲ್ಲಿನ ಪ್ರೀತಿ ಕಂಡು ಮನ ತುಂಬಿ ಬಂದಿದೆ ಎಂದರು.
ಉತ್ತರ ಭಾರತದಲ್ಲಿ ಹಿಂದಿ ಭಾಷೆಯಲ್ಲಿ, ಕೇರಳ ಹಾಗೂ ತಮಿಳುನಾಡಿನಲ್ಲಿ ತಮಿಳಿನಲ್ಲಿ ಅಕ್ಟೋಬರ್ 19 ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ . ಆಂಧ್ರ ಹಾಗೂ ತೆಲಂಗಾಣದಲ್ಲಿ ಮಾತ್ರ ಮುಂದಿನ ವಾರ ಚಿತ್ರ ತೆರೆಗೆ ಬರಲಿದೆ. ಅಕ್ಟೋಬರ್ 18ರ ಮಧ್ಯರಾತ್ರಿ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವಿರುತ್ತದೆ ಎಂಬ ಮಾಹಿತಿ ಕೊಟ್ಟರು ಶ್ರೀನಿ.
ನಮ್ಮ ಸಂಸ್ಥೆಯ ಮೂರನೇ ಚಿತ್ರದಲ್ಲಿ ನಾಯಕರಾಗಿ ಶಿವಣ್ಣ ನಟಿಸಿದ್ದಾರೆ. ಹಿಂದಿನ ಎರಡು ಚಿತ್ರಗಳು ಸೂಪರ್ ಹಿಟ್ ಆಗಿದೆ. ಈ ಚಿತ್ರ ಕೂಡ ಭರ್ಜರಿ ಯಶಸ್ವಿಯಾಗುವ ನಂಬಿಕೆಯಿದೆ ಎಂದರು ನಿರ್ಮಾಪಕ ಸಂದೇಶ್ ಎನ್.
ಛಾಯಾಗ್ರಾಹಕ ಮಹೇಂದ್ರ ಸಿಂಹ ಹಾಗೂ ಸಂಭಾಷಣೆ ಬರೆದಿರುವ ಪ್ರಸನ್ನ ಮಾತನಾಡಿದರು.