ಬಾಲನಟ ಹಾಗೂ ಟಿವಿ ನಿರೂಪಕರಾಗಿ ಜನಪ್ರಿಯವಾಗಿರುವ ಮಾಸ್ಟರ್ ಆನಂದ್ ಈಗ ಸಿನಿಮಾ ಹೀರೋ ಆಗಿ ಹೊಮ್ಮಿದ್ದಾರೆ.
ಅದು ‘ನಾ ಕೋಳಿಕೆ ರಂಗ’ ಎಂಬ ಗ್ರಾಮೀಣ ಭಾಗದ ಕಥೆ ಇರುವ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಎಸ್.ಟಿ.ಸೋಮಶೇಖರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
‘ನಾನು ಕೋಳಿಕೆ ರಂಗ..’ ಎಂಬುದು ಹೆಸರಾಂತ ನಾಟಕಕಾರ ಟಿ.ಪಿ.ಕೈಲಾಸಂ ಅವರು ಬರೆದ ಹಾಡಿನ ಸಾಲು. ಕೋಳಿ ಮತ್ತು ರಂಗ ಕಥೆಯಲ್ಲಿ ಬರುವುದರಿಂದ ಈ ಹೆಸರನ್ನು ಇಡಲಾಗಿದೆ ಎಂದು ಮಾಸ್ಟರ್ ಆನಂದ್ ವಿವರ ನೀಡಿದರು.
ಅದು ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ. ನಿರ್ಮಾಪಕ ಎಸ್.ಟಿ.ಸೋಮಶೇಖರ್, ಆನಂದ್ ಎದುರು ನಟಿಸಿರುವ ಅವರ ಪುತ್ರಿ ರಾಜೇಶ್ವರಿ, ಹಿರಿಯ ನಟಿ ಭವ್ಯ, ನಿರ್ದೇಶಕ ಗೊರವಾಲೆ ಮಹೇಶ್ ಹಾಗೂ ಚಿತ್ರತಂಡದ ಇತರ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಚಿತ್ರವು ಕೊರೊನಾ ಸಮಯಕ್ಕಿಂತೂ ಮೊದಲೇ ಆರಂಭವಾಗಿತ್ತು. ಆನಂತರದಲ್ಲಿ ಎದುರಾದ ಸಮಸ್ಯೆಗಳು ಸಾಕಷ್ಟಿದ್ದವು. ಆದರೂ ನಿರ್ಮಾಪಕರು ಎದೆಗುಂದದೆ ಚಿತ್ರ ಮಾಡಿ ಮುಗಿಸಲು ನೆರವಾದರು ಎಂದು ಹೇಳುತ್ತಾ ಹೋದರು ಮಾಸ್ಟರ್ ಆನಂದ್.
ಮುಂದಿನ ತಿಂಗಳು ಅಂದರೆ ನವೆಂಬರ್ 10 ರಂದು ಈ ಚಿತ್ರ ತೆರೆ ಕಾಣುತ್ತಿದ್ದು, ದಸರಾ ವೇಳೆ ಬಿಡುಗಡೆ ಕಾಣಬೇಕು ಎಂಬ ಇಚ್ಛೆಗೆ ಅನುಗುಣವಾಗಿಯೇ ಬಿಡುಗಡೆ ಕಾಣುತ್ತಿರುವುದು ವಿಶೇಷ ಎಂದರು.
ಅಲ್ಲದೆ ಚಿತ್ರದಲ್ಲಿರುವ ‘ಮರೆಯೋದುಂಟೆ ಮೈಸೂರ ದೊರೆಯ’ ಎಂಬ ಹಾಡು ಈಗಾಗಲೇ ಜನಮನ ಗೆದ್ದಿದೆ. ಇದರ ಚಿತ್ರೀಕರಣ ಕೂಡ ಅತ್ಯುತ್ತಮ ಎಂಬುದನ್ನು ವಿವರಿಸಿದರು ಆನಂದ್.
ಇಲ್ಲಿ ಕೋಳಿ ರಂಗ ಮತ್ತು ಅಮ್ಮನ ಕಥೆ ಇದೆ. ಮಂಡ್ಯ ಭಾಗದಲ್ಲೇ ಶೇ. 90 ರಷ್ಟು ಚಿತ್ರೀಕರಣ ನಡೆದಿದೆ. ಸಂತೆ ಕಸಲಗೆರೆ ಎಂಬ ಊರಿನಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯವಾಗಿ ಚಿತ್ರದಲ್ಲಿ ಮಂಡ್ಯ ಹಾಗೂ ಮೈಸೂರು ಸೊಗಡಿನ ಭಾಷೆ ಇದೆ ಎಂಬ ವಿವರ ಬಂತು.
ಭವ್ಯಾ ಅವರು ತಾಯಿ ಪಾತ್ರ ನಿರ್ವಹಿಸಿದ್ದು, ಇಲ್ಲಿ ಅಮ್ಮನ ವಾತ್ಸಲ್ಯದ ಕಥೆ ಮತ್ತು ಕೋಳಿ ಮತ್ತು ರಂಗ ಎಲ್ಲವೂ ವಿಶಿಷ್ಟವೇ.
ಹಂಸಲೇಖ ಅವರ ಜೊತೆ ಇರುವ ರಾಜು ಎಮ್ಮಿಗನೂರು ಚಿತ್ರಕ್ಕೆ ಸಂಗೀತ ನೀಡಿದ್ದು, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಒಂದು ಹಾಡು ಹಾಡಿರುವುದು ಚಿತ್ರದ ಹೈಲೈಟ್ ಎಂಬ ಮಾಹಿತಿಯೂ ಬಂತು.
ಇದು ಮೌಢ್ಯಗಳ ಕುರಿತಾದ ಕಥೆ. ಒಂದು ಗಟ್ಟಿಯಾದ ಸಂದೇಶವೂ ಇದೆ. ತಾಯಿ ಸೆಂಟಿಮೆಂಟ್ ಕೂಡ ಚಿತ್ರದ ಮುಖ್ಯಾಂಶವಾಗುತ್ತದೆ ಎಂದರು ನಿರ್ದೇಶಕ ಗೊರವಾಲೆ ಮಹೇಶ್.
ನನಗೂ ಇಷ್ಟವಾದ ಕಥೆ ಇದು ಎಂದರು ಹಿರಿಯ ನಟಿ ಭವ್ಯ. ತಾಯಿಯ ಭಾವುಕ ವಿಷಯ ಬಹಳವೇ ದೊಡ್ಡದು. ಅದರ ನಿರ್ವಹಣೆ ಕೂಡ ಉತ್ತಮವಾಗಿದೆ ಎಂದರು.
ನಿರ್ಮಾಪಕ ಎಸ್.ಟಿ.ಸೋಮಶೇಖರ್ ಈ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ ಸಹಕರಿಸಿ ಎಂದರು. ಅವರ ಪುತ್ರಿ ರಾಜೇಶ್ವರಿ ಸಹ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.
ಚಿತ್ರಕ್ಕೆ ಧನಪಾಲ್ ಮತ್ತು ಬೆಟ್ಟೇಗೌಡ ಛಾಯಾಗ್ರಹಣ, ವಿಶ್ವ ಸಂಕಲನವಿದ್ದು, ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಪುಂಗ, ಶಕೀಲಾಇತರರು ನಟಿಸಿದ್ದಾರೆ.