Snehapriya.com

June 8, 2025

ತೋತಾಪುರಿ 2 ಚಿತ್ರವಿಮರ್ಶೆ

Social Share :

ನಿರ್ಮಾಪಕರು : ಕೆ.ಎ.ಸುರೇಶ್

ನಿರ್ದೇಶನ : ವಿಜಯಪ್ರಸಾದ್

ಮನರಂಜನೆಯ ಸುವಿಹಾರಿ
ಸರ್ವ ಧರ್ಮಗಳ ಬೆನ್ನೇರಿ..

ಸರ್ವ ಧರ್ಮ ಒಗ್ಗೂಡುವುದೆಂದರೇ..
ಇದೇನೇ..

ಧರ್ಮ ಆಚಾರ-ವಿಚಾರ ಎಂದೆಲ್ಲಾ ಕಿತ್ತಾಡಿಕೊಳ್ಳುವ ಪ್ರಸಂಗಗಳು ಸಾಮಾನ್ಯವೆನಿಸಿರುವ ಈ ದಿನಮಾನಗಳಲ್ಲಿ ಧರ್ಮ, ಜಾತಿ ಮತ್ತು ಏಕತೆ ಕುರಿತ ಸೊಗಸಾದ ಮನರಂಜನಾತ್ಮಕ ಚಿತ್ರಣವಿದು..

ಅಧಿಕ ಪ್ರಸಂಗಿಯಾದರೂ ನಿಷ್ಕಲ್ಮಶ ಮನಸ್ಸಿನ ಈರೇಗೌಡ ಮತ್ತು ಆತನ ಸುತ್ತಲೂ ಇರುವ ಪಾತ್ರಗಳು ಜೀವನೋತ್ಸಾಹದಲ್ಲಿ ಮಿಂದೇಳುವುದೇ ಮಜಾ..

ಜೀವನವೆಂಬ ಸಾಗರದಲ್ಲಿ ಮಿಂದೆದ್ದ ಪಾತ್ರಗಳು ಅತಿಯಾದ ಜೀವನೋತ್ಸಹದಲ್ಲಿ ನಲಿಯುವ ಕ್ಷಣದಲ್ಲಿ ಪಟಾಕಿಂತೆ ಸಿಡಿಯುವ ಮಾತುಗಳು ಕಚಗುಳಿ ಇಡುತ್ತವೆ ಮತ್ತು ಕೆಲವೊಮ್ಮೆ ಬೆಚ್ಚಿ ಬೀಳಿಸುತ್ತವೆ (ಕೆಲವರಿಗೆ ಕಿರಿ ಕಿರಿ ಎನಿಸಲೂಬಹುದು).

ಕಿಸ್ಕಿಂದೆಯಂತಹ ಜಾಗದಲ್ಲಿ ತಮಾಷೆಯ ಪ್ರಸಂಗಗಳು ಏರ್ಪಡುತ್ತವೆ. ಭಾವೈಕ್ಯತಾ ಸಮಾವೇಶ ನಡೆದಂತೆ ಸಭೆಗಳು ನಡೆಯುತ್ತವೆ. ಮಾತಿನ ಭರದಲ್ಲಿ ಜೀವನ ಥಳಕು ಹಾಕಿಕೊಳ್ಳುತ್ತದೆ. ಕಥೆಗಳು ಬಿಚ್ಚಿಕೊಳ್ಳುತ್ತವೆ.

ಅದರಲ್ಲಿ ಪೂರ್ವ ಭಾಗದಲ್ಲಿ ಆಸಕ್ತಿ ಕೆರಳಿಸಿದ್ದ ಸಿಸ್ಟರ್ ವಿಕ್ಟೋರಿಯಾ ಹಾಗೂ ನಾರಾಯಣ ಪಿಳ್ಳೈ ಕಥೆ ಅದಮ್ಯ ಪ್ರೇಮದ ಕಥೆಯಾಗಿ ಬಿಚ್ಚಿಕೊಳ್ಳುತ್ತದೆ. ಈರೇಗೌಡ ಮತ್ತು ಶಕೀಲಾ ಬಾನು ಅವರ ಪ್ರೇಮಕಥೆ ತ್ಯಾಗದ ಕಥೆಯಾಗಿ ರೂಪುಗೊಳ್ಳುವುದು ಈರೇಗೌಡ ಮತ್ತು ರಂಗಮ್ಮ ಅವರ ಸಾಹಸ ಪುರಾಣಗಳು ಬಿಚ್ಚಿಕೊಂಡಾಗ..

ರಾಯರು, ಇಮಾಮ್ ಸಾಬ್ ಹಾಗೂ ಇನ್ನಿತರ ಯಜಮಾನರ ನಡುವೆ ಬಿಚ್ಚಿಕೊಳ್ಳುವ ಕಥೆ ಮತ್ತು ಸಂಭಾಷಣೆ ಕಚಗುಳಿ ಇಡುತ್ತವೆ. ಇದರ ನಡುವೆ ವಿಕ್ಟೋರಿಯಾ ಹಾಗೂ ನಾರಾಯಣ ಪಿಳ್ಳೈ ಪ್ರೇಮಕಥೆ ಜೊತೆಗೆ ಮಹಮದ್ ರಫಿ ಅವರ ‘ಬಹರೋ..’ ಹಾಡು ವಿಸ್ಕಿಯ ನಶೆಯಲ್ಲಿ ಪ್ರೇಮಾನ್ಮಾದ ಉಕ್ಕಿದಂತೆ..

ಪ್ರೇಮದ ಸೆಳೆತಕ್ಕೆ ಇರುವ ಕಾರಣಗಳು ಇಲ್ಲಿ ನೈಜತೆಯನ್ನು ಕಾಪಾಡಿಕೊಳ್ಳುತ್ತವೆ. ಹಾಗಾಗಿ ವಿಕ್ಟೋರಿಯಾಳ ಕಾಂಟೆಸ್ಸಾ ಕಾರು, ರಂಗಮ್ಮನ ಸ್ಕೂಟರ್ ನಲ್ಲಿನ ತ್ರಿಬಲ್ ರೈಡಿಂಗ್ ದೃಶ್ಯ, ಟಿವಿಎಸ್ ಪಂಕ್ಚರ್ ಪ್ರಸಂಗಗಳು ನಗೆಯ ಬುಗ್ಗೆಯನ್ನೇ ಹರಿಸುತ್ತವೆ.

ಕೊನೆಯಲ್ಲಿ ಬರುವ ಸಂವಿಧಾನ ಸಮಬಾಳು ಸಮಪಾಲು ಎಂಬ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳು ಪ್ರಸಕ್ತ ಕಾಲಮಾನದ ಪ್ರಶ್ನೆಗಳ ಹುಡುಕಾಟದಲ್ಲಿ ಕಾಣುವ ಪರಿಹಾರ ಸೂತ್ರದಂತೆ ಕಾಣುತ್ತವೆ.

ನಟನೆಯಲ್ಲಿ ನವರಸ ನಾಯಕರನ್ನು ಮೀರಿಸುವವರಿಲ್ಲ. ಅಸಹಾಯಕ; ಪಶ್ಚಾತಾಪ; ಅಧಿಕ ಪ್ರಸಂಗಿ ಎಲ್ಲದರಲ್ಲೂ ವಿಶಿಷ್ಟ ಮ್ಯಾನರಿಜಂ ಮೆರೆಯುವ ಅವರ ಶೈಲಿಯ ಸೊಗಸು ಚಿತ್ರದ ಹೈಲೈಟ್.

ಡಾಲಿ ಧನಂಜಯ್ಯ ಮೈಚಳಿ ಬಿಟ್ಟು ಅಭಿನಯಿಸಿದ್ದಾರೆ. ಪ್ರೇಮಿಸಿದ ಹುಡುಗಿ ಸಿಗುವುದಿಲ್ಲ ಎಂದು ಕಾರಿನ ಹಿಂದೆ ಅವರು ಓಡುವ ರೀತಿ ಅಮರ ಪ್ರೇಮಿಯೊಬ್ಬ ಪ್ರೇಮೋನ್ಮಾದದಿಂದ ವರ್ತಿಸುವ ಆ ರೀತಿ ಮನೋಜ್ಞ.

ವೀಣಾ ಸುಂದರ್ ಬೋಲ್ಡ್ ನಟನೆ ಮೆರೆದರೆ; ಅದಿತಿ ಪ್ರಭುದೇವ ನಟನೆ ಮುಗ್ಧತೆಗೆ ಹಿಡಿದ ಕೈಗನ್ನಡಿ. ಸುಮನ್ ರಂಗನಾಥ್ ಸುಂದರ, ನಂಜಮ್ಮನ ಪಾತ್ರ ಅಪ್ರತಿಮ.

ಇನ್ನು ಡಬ್ಬಲ್ ಮೀನಿಂಗ್ ಎನ್ನುವವರಿಗೆ ನಿರ್ದೇಶಕ ವಿಜಯ ಪ್ರಸಾದ್ ತಮ್ಮದೇ ‘ನೀರ್ ದೋಸೆ’ ಸಿನಿಮಾ ತೋರಿಸಿ, ‘ಸಭ್ಯತೆ ಸಭ್ಯತೆ ಅತಾ ಹೊಕ್ಕಳು ತೋರಿಸೋರಿಗಿಂತ ನೇರ ಇಷ್ಟ ಆಯ್ತು..’ ಎಂದು ಜಗ್ಗೇಶ್ ಅವರಿಂದ ಹೇಳಿಸಿ ಉತ್ತರ ಕೊಡಿಸಿದ್ದಾರೆ.

ಕೊನೆಯಲ್ಲಿ ಹಿಡಿ ಮಣ್ಣು ದೇಶ ಕಟ್ಟುತ್ತೆ ಅಂದ್ರೆ ಮನಸ್ಸಗಳನ್ನು ಬೆಸೆಯಲ್ವೇ ಎಂಬ ಸಂಭಾಷಣೆ ಕೂಡ ಸೌಹಾರ್ದತೆಯ ಸಂದೇಶ ಕೊಡುತ್ತದೆ.

ನಿರಂಜನ್ ಬಾಬು ಛಾಯಾಗ್ರಹಣ, ಅರುಣ್ ಆಂಡ್ರ್ಯೂ ಸಂಗೀತ ಚಿತ್ರಕ್ಕೆ ಪೂರಕ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *