ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್’ ನಿರ್ದೇಶನ ಮಾಡಿದ ಚೇತನ್ ಕುಮಾರ್ ದೀರ್ಘ ಕಾಲದ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.
ಈಗ ಅವರು ‘ಬರ್ಮ’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ‘ಗಟ್ಟಿಮೇಳ’ ಧಾರಾವಾಹಿ ಮೂಲಕ ಮನೆ ಮಾತಾಗಿರುವ ರಕ್ಷ್ ರಾಮ್ ಈ ಚಿತ್ರದ ಮುಖ್ಯ ನಟ ಹಾಗೂ ನಿರ್ಮಾಪಕ.
ಈಚೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಾಲಯ ಆವರಣದಲ್ಲಿ ನಡೆದ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಆರಂಭ ಫಲಕ ತೋರಿದರೆ, ನಟ ರಾಘವೇಂದ್ರ ರಾಜ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು ಹಾಗೂ ನಟ ಧ್ರುವಸರ್ಜಾ ಮೊದಲ ದೃಶ್ಯವನ್ನು ನಿರ್ದೇಶನ ಮಾಡಿದರು.
ನಿರ್ಮಾಪಕ ಕೆ.ಪಿ.ಶ್ರೀಕಾಂತ್, ನಿರ್ದೇಶಕ ಎ.ಪಿ.ಅರ್ಜುನ್, ನಟ ಧೀರನ್ ರಾಮಕುಮಾರ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಹಾಗೆ ನೋಡಿದರೆ ಇದು ಎರಡು ಮಹಾ ಪ್ರತಿಭೆಗಳ ಸಂಗಮ. ಬಹದ್ದೂರ್, ಭರ್ಜರಿ, ಭರಾಟೆ, ಜೇಮ್ಸ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚೇತನ್ ಅದಮ್ಯ ಬರಹಗಾರರೂ ಹೌದು.
ರಕ್ಷ್ ರಾಮ್ ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾದವರು. ಪುಟ್ಟಗೌರಿ ಮದುವೆ, ಗಟ್ಟಿಮೇಳ ಮೊದಲಾದ ಧಾರಾವಾಹಿಗಳ ಒಂದು ಸಾವಿರಕ್ಕೂ ಅಧಿಕ ಕಂತುಗಳಲ್ಲಿ ಪಾತ್ರ ಮಾಡಿದ ಕೀರ್ತಿ ಅವರದು.
ಮುಹೂರ್ತದ ಬಳಿಕ ಚಿತ್ರ ತಂಡವು ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿತು. ಚೇತನ್ ಕುಮಾರ್ ಆಯ್ಕೆ ಮಾಡಿಕೊಳ್ಳುವ ಕಥೆಗಳು ಸದಾ ವಿಭಿನ್ನವಾಗಿರುತ್ತವೆ. ಈ ಸಿನಿಮಾ ಮೂಲಕ ಹೀರೋ ಪಟ್ಟಕ್ಕೇರುತ್ತಿರುವ ರಕ್ಷ್ ರಾಮ್ ಅವರಿಗೆ ಗೆಲುವಾಗಲಿ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾರೈಸಿದರು.
ಬರ್ಮ ನನಗೆ ಐದನೇ ಸಿನಿಮಾ ಎಂದರು ಚೇತನ್ ಕುಮಾರ್. ಬರ್ಮ ಎಂದರೆ ಬ್ರಹ್ಮ ನೆಲೆ ಅದು ಒಂದು ದೇಶದ ಜಾಗವೂ ಆಗಿರುತ್ತದೆ. ಚಿತ್ರಕ್ಕೆ ಪೂರಕ ಎಂಬ ಕಾರಣ ಈ ಹೆಸರನ್ನು ಚಿತ್ರಕ್ಕೆ ಇಡಲಾಯಿತು ಎಂದರು.
ಐದು ಭಾಷೆಗಳಲ್ಲಿ ಚಿತ್ರ ತಯಾರಾಗಿ ಬಿಡುಗಡೆ ಕಾಣಲಿದೆ ಎಂಬುದು ರಕ್ಷ್ ರಾಮ್ ಮಾಹಿತಿ. ಹರಿಕೃಷ್ಣ ಸಂಗೀತ ನಿರ್ದೇಶಕರಾಗಿದ್ದು, ಡಿ-ಬಿಟ್ಸ್ ನ ಶೈಲಜಾನಾಗ್ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿರುವ ಮಾಹಿತಿಯೂ ಬಂತು.
ಸಂಕೇತ್ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದ್ದು, ಅಕ್ಟೋಬರ್ 3 ರಿಂದ ಮಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ರಕ್ಷ್ ರಾಮ್ ಅವರ ಪತ್ನಿ ಅನೂಷಾ ಚಿತ್ರದ ನಿರ್ಮಾಪಕಿ.