ಇದು ಒಂಥರಾ ಪ್ರೇಮಕಥೆ.. ಪ್ರೇಮದಿಂದ ಪ್ರೇಮಕ್ಕಾಗಿ ನಡೆಯುವ ಪ್ರೇಮದ ಕಥೆ. ಹೆಸರು ಸೂರ್ಯ..!
ಪ್ರೇಮ ಕಥೆಗಳು ಸಾಕಷ್ಟು ದೃಶ್ಯ ರೂಪ ಪಡೆದಿವೆ. ಆದರೆ ಈ ಕಥೆ ಕೊಂಚ ವಿಭಿನ್ನವಾಗಿದೆ ಎಂದು ಹೇಳಿಕೊಂಡರು ಚಿತ್ರದ ನಿರ್ದೇಶಕ ಸಾಗರ್.
ಈ ಚಿತ್ರದ ಮುಖ್ಯ ಪಾತ್ರಧಾರಿ ಹೆಸರು ಸೂರ್ಯ. ಆತ ಪ್ರೇಮದ ಸಲುವಾಗಿ ಯುದ್ಧವನ್ನೇ ಸಾರುತ್ತಾನೆ. ನಂತರ ಈ ಪ್ರೇಮಕಥೆ ಏನಾಗುತ್ತದೆ ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು ಎಂದರು
ಬಿ.ಸುರೇಶ್ ಅವರ ಬಳಿ ಸಹಾಯಕರಾಗಿ ದುಡಿದು ಅನುಭವ ಹೊಂದಿರುವ ಸಾಗರ್ ಅವರನ್ನು ಬಹಳ ಸಮಯ ಕಾಡಿರುವ ಕಥೆ ಇದು. ಅದನ್ನು ಸಮೂಹದಲ್ಲಿ ಹೇಳುವ ತಯಾರಿ ಮಾಡಿಕೊಂಡ ನಂತರವೇ ಶೇ.70 ರಷ್ಟು ಕೆಲಸ ಮುಗಿದಿದೆ ಎಂದರು.
ಯುವನಟ ಪ್ರಶಾಂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರ ಎದುರು ಹರ್ಷಿತಾ ಕಾಣಿಸಿಕೊಂಡಿದ್ದಾರೆ. ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾಹಿತಿಗಳು ಬಂದವು.
ಅದು ಚಿತ್ರದ ಟೀಸರ್ ಬಿಡುಗಡೆ ಸಮಾರಂಭ.
ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಮೂರು ಹಾಡುಗಳನ್ನು ಚಿತ್ರೀಕರಿಸಿದ್ದು, ಉಳಿದ ಎರಡು ಸೆಟ್ ಸಾಂಗ್ ಹಾಗೂ ಹೆಚ್ಎಂಟಿಯಲ್ಲಿ ಮಾಡಬೇಕೆಂದಿರುವ ಸಾಹಸ ದೃಶ್ಯದ ಚಿತ್ರೀಕರಣವಷ್ಟೇ ಬಾಕಿಯಿದೆ. ನವೆಂಬರ್ ಕೊನೆ ಅಥವಾ ಡಿಸೆಂಬರ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದರು.
ಖಳನಟ ರವಿಶಂಕರ್ ಅವರನ್ನು ವಿಶೇಷ ಪಾತ್ರದಲ್ಲಿ ಕಾಣಬಹುದು. ಅಲ್ಲದೆ ನಟಿ ಶೃತಿ ಅವರು ಒಬ್ಬ ಡಾಕ್ಟರ್ ಆಗಿ ಮತ್ತು ಈಗಿನ ಕಾಲದ ಅಮ್ಮನಾಗಿಯೂ ಕಾಣಿಸಿ ಕೊಂಡಿದ್ದಾರೆ, ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಉತ್ತರ ಕರ್ನಾಟಕ ಭಾಗದ ವಿಲನ್ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರಕ್ಕೆ ಶ್ರೀಶಾಸ್ತ ಸಂಗೀತ ನೀಡುತ್ತಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದಾರೆ ಎಂಬ ಮಾಹಿತಿಗಳು ಬಂದವು.
ಪೂನಾ ಫಿಲಂ ಇನ್ ಸ್ಟಿಟ್ಯೂಟ್ನಲ್ಲಿ ಅಭಿನಯ ಕಲಿತಿರುವ ಪ್ರಶಾಂತ್ ಅವರಿಗೆ ಇದು ಮೊದಲ ಚಿತ್ರ. ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದ ಪ್ರಶಾಂತ್ ಅವರನ್ನು ಗುರುತಿಸಿ ನಿರ್ದೇಶಕ ಸಾಗರ್ ಮುಖ್ಯ ಪಾತ್ರ ನೀಡಿದ್ದಾರೆ.
ಈ ಹಿಂದೆ ಮೆಲೋಡಿ ಡ್ರಾಮಾ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದೆ, ಇದು ಎರಡನೇ ಚಿತ್ರ. ಬೆಂಗಳೂರು ಸುತ್ತಮುತ್ತ ಈವರೆಗೆ 35 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಲಾಗಿದೆ ಎಂದವರು ಛಾಯಾಗ್ರಾಹಕ ಮನುರಾಜ್.
ಹೆಸರಾಂತ ನಿರ್ದೇಶಕ ಬಹದ್ದೂರ್ ಚೇತನ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.