Snehapriya.com

June 9, 2025

ಸಪ್ತ ಸಾಗರದಾಚೆ ಎಲ್ಲೋ ಚಿತ್ರವಿಮರ್ಶೆ

Social Share :

ನಿರ್ಮಾಣ : ಪರಂವಃ ಪಿಕ್ಚರ್ಸ್

ನಿರ್ದೇಶನ : ಹೇಮಂತ್ ರಾವ್

ಬೇರೊಂದು ಬಗೆಯಿತು ದೈವ..

ದಿವಂಗತ ಶಂಕರ್ ನಾಗ್ ಅವರ ‘ಆಕ್ಸಿಡೆಂಟ್’ ಚಿತ್ರದಲ್ಲಿ ಮಗ ಮಾಡಿದ ಭೀಕರ ಅಪಘಾತವನ್ನು ಶ್ರೀಮಂತ ರಾಜಕಾರಣಿ ತನ್ನ ಡ್ರೈವರ್ ಮೇಲೆ ಹೊರೆಸಿ ಜೈಲಿಗೆ ಕಳುಹಿಸುತ್ತಾನೆ.. ನಿಷ್ಠಾವಂತ ಆ ಚಾಲಕ ಅದನ್ನು ವಿನಮ್ರವಾಗಿ ಸ್ವೀಕರಿಸುತ್ತಾನೆ..

ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಆತ್ಮ ಕೂಡ ಅದೇ ಎನಿಸುತ್ತದೆ. ಆದರೆ ಇಲ್ಲಿ ಚಾಲಕನ ಬದುಕಿನ ಸುತ್ತ ಕಥೆ ಹೆಣೆಯಲಾಗಿದೆ.

ಬದುಕಿನ ಅನಿರೀಕ್ಷಿತ ತಿರುವುಗಳಿಗೆ ಸಾಕಷ್ಟು ಮಜಲುಗಳಿದ್ದರೂ ಎರಡೇ ಎರಡು ಆಟ ಎದ್ದು ಕಾಣುತ್ತದೆ. ಅದು ಅದೃಷ್ಟ ಮತ್ತು ದುರಾದೃಷ್ಟ..

ಇಲ್ಲಿನ ನಾಯಕನ ಬದುಕಿನಲ್ಲಿ ದುರಾದೃಷ್ಟ ಒದ್ದುಕೊಂಡು ಬರುತ್ತದೆ..
ಹಾಗಾಗಿ ಅದಮ್ಯ ಪ್ರೇಮಿಯಾಗಿ ಮೆರೆಯ ಬೇಕಾಗಿದ್ದವನು ಯಾರೂ ಹೋಗಬಾರದ ಜಾಗಕ್ಕೆ ಹೋಗಿ ಕೊಳೆಯುತ್ತಾನೆ.

ಮನು ಕೆಳ ಮಧ್ಯಮ ವರ್ಗದ ಸಾಮಾನ್ಯ ಯುವಕ. ಆದರೆ ಅವನೊಬ್ಬ ಭವ್ಯ ಪ್ರೇಮಿ; ಅಗಾಧ ಕನಸಿಗ. ಅನಿರೀಕ್ಷಿತವಾಗಿ ವಿಷ ವರ್ತುಲದಲ್ಲಿ ಸಿಲುಕುತ್ತಾನೆ. ಮುಖ್ಯವಾಗಿ ವಿಧಿ ಅವನ ಬದುಕಿನಲ್ಲಿ ಆಟವಾಡುತ್ತದೆ.

ಕನ್ನಡದ ಖ್ಯಾತ ಕವಿ ದಿವಂಗತ ಡಾ.ಗೋಪಾಲಕೃಷ್ಣ ಅಡಿಗರ ‘ಯಾವ ಮೋಹನ ಮುರಳಿ ಕರೆಯಿತು..’ ಪದ್ಯ ಪ್ರತಿ ಮನುಷ್ಯರ ನಡವಳಿಕೆ. ಅದರಲ್ಲಿ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..’ ಎಂಬುದು ಜನಪ್ರಿಯ ಸಾಲು. ಈ ಚಿತ್ರದ ಆಶಯವೂ ಇದೆ. ಇದರ ಹೆಸರೂ ಸಹ ಅದೇ ಪದ್ಯದ್ದು..

ಮನು ಮತ್ತು ಪ್ರಿಯ ಅದಮ್ಯ ಪ್ರೇಮಿಗಳು. ಆತನದು ಚಾಲಕ ವೃತ್ತಿ. ಆಕೆ ಗಾಯಕಿ. ಇಬ್ಬರ ಜೀವನದ ಕನಸಿನ ಸೌಧವನ್ನು ಕಟ್ಟುತ್ತಾ ಹೋಗುವಾಗ ಆ ಅನಿರೀಕ್ಷಿತ ಘಟನೆ ನಡೆದು ಹೋಗುತ್ತದೆ..

ಅದೇ ಕನಸಿನ ಸೌಧದ ಅನಿವಾರ್ಯತೆಯಲ್ಲಿ ಜೈಲು ಪಾಲಾಗುವ ಮನು ಮತ್ತು ಬೀದಿ ಪಾಲಾಗುವ ಆತನ ಪ್ರೇಮ ಹಾಗೂ ನಡೆದು ಹೋಗುವ ಘಟನೆಗಳಿಂದ ಒಳಗು ಹೊರಗೂ ತಲ್ಲಣದ ಅನುಭವವನ್ನು ಕೊಡುತ್ತದೆ.

ಭಾವುಕ ಪ್ರಿಯಾ ಹೋರಾಟ ನಡೆಸುತ್ತಾಳೆ.. ಆದರೆ ಸಫಲತೆ ಕಾಣುವುದಿಲ್ಲ. ಇದೇ ವೇಳೆ ದೂರ ಉಳಿಯುವ ಆತನ ವರ್ತನೆಗೆ ದುಃಖದಲ್ಲಿ ಕೊಚ್ಚಿ ಹೋಗುತ್ತಾಳೆ ಎಂಬುದು ನಿಜವೇ ಆದರೂ ಆಕೆ ಅನಂತ ಪ್ರೇಮದ ಸಾಧಕಿ ಎಂಬ ಬಿರುದು ಪಡೆಯುವ ಹೊತ್ತಿಗೆ ನಡೆಯುವ ಇತರ ಅನಿರೀಕ್ಷಿತ ಘಟನೆಗಳಿಂದ ಅದಕ್ಕೆ ಹೊರತಾಗುತ್ತಾಳೆ..

ಆಗ ಪ್ರೇಮದ ನಿರರ್ಥಕತೆ ಎದ್ದು ಕಾಣುತ್ತದೆ. ಆದರೆ ಅದನ್ನು ಮುಂದಿನ ಭಾಗದಲ್ಲಿ ತಿಳಿಸುವ ತಂತ್ರಗಾರಿಕೆಯನ್ನು ನಿರ್ದೇಶಕರು ಹೆಣೆದಿದ್ದಾರೆ.

ನಿರ್ದೇಶಕರು ಸಾಹಿತ್ಯ ಓದಿಕೊಂಡಿರುವುದರಿಂದ ಚಿತ್ರದ ಶೀರ್ಷಿಕೆಯಿಂದ ಹಿಡಿದು ಅನೇಕ ಸಂಭಾಷಣೆಗಳಲ್ಲಿ ಕನ್ನಡದ ಹೆಸರಾಂತ ಲೇಖಕರು ಕಾಣ ಸಿಗುತ್ತಾರೆ..

ಅದರಲ್ಲಿ ‘ನಾವು ಮನುಷ್ಯರಾಗಿ ಹುಟ್ಟಿಲ್ಲ; ಮನುಷ್ಯರಾಗೋಕೆ ಹುಟ್ಟಿದ್ದೇವೆ’ ಎಂಬುದು ಯಶವಂತ ಚಿತ್ತಾಲರ ಶಿಖಾರಿಯ ಮಾತು.
ಅದೇ ರೀತಿ ‘ಎಲ್ಲೇ ಹೋದರೂ ನಿನ್ನೊಳಗೆ ಸಮುದ್ರ ಇರುತ್ತದೆ’ ಹೀಗೆ ಜೀವನಾನುಭವವನ್ನು ತಳುಕು ಹಾಕುವ ಸಂಭಾಷಣೆಗಳಿಂದ ಚಿತ್ರ ಹೆಚ್ಚು ಆಪ್ತವೆನಿಸಿದರೂ ಸಮುದ್ರದ ಭೋರ್ಗರೆತದ ಶಬ್ಧವೇ ಕೊರತೆಯಾಗುತ್ತದೆ. ಪ್ರಶಾಂತವಾಗಿ ತಣ್ಣಗೆ ಚಲಿಸುವ ಕಥೆ ಸಾಕಷ್ಟು ತಾಳ್ಮೆ ಪರೀಕ್ಷಿಸುತ್ತದೆ.

ದೃಶ್ಯಗಳ ಸೊಗಸು ಮತ್ತು ಕಲಾತ್ಮಕ ಚೌಕಟ್ಟಿನ ಸೊಬಗು ಎಷ್ಟೇ ಸೆಳೆದರೂ ಕೊನೆಯಲ್ಲಿ ಮಾಮೂಲಿ ವರಸೆಯ ತ್ಯಾಗದಿಂದ ಅದೆಲ್ಲಾ ಕಳೆದು ಹೋದ ಅನುಭವವಾಗುತ್ತದೆ. ಹಾಗಾಗಿ ಹೃದಯ ಶೂನ್ಯ ದುಃಖದ ಭಾವನೆಯ ಬದಲಿಗೆ ದಟ್ಟ ಆಕಳಿಕೆಯ ನಿರರ್ಥಕ ಭಾವನೆ ಸುಳಿಯುತ್ತದೆ.

ಪ್ರೇಮೋನ್ಮಾದದ ಅಬ್ಬರವೇ ಇಲ್ಲದೆ ಪ್ರಶಾಂತ ಸಾಗರದಂತೆ ಚಲಿಸುವ ಪ್ರೀತಿ ಕಚಗುಳಿ ಇಡುವುದಿಲ್ಲ. ಮನಸ್ಸನ್ನು ಕೆಣಕುವುದಿಲ್ಲ; ಬದಲಿಗೆ ಬರಸಿಡಿನಂತಹ ಘಟನೆಗಳು ಮರುಕ ಹುಟ್ಟಿಸುತ್ತವೆ..

ಹಾಗಾಗಿ ಇದು ಹೃದಯ ಬೆಸೆಯುವ ಸಾಮರ್ಥ್ಯದ ಕಥೆಯಾಗುವ ಬದಲು ಅನುಕಂಪದ ಅಲೆಯಲ್ಲಿ ತೇಲುವಂತೆ ಕಾಣುತ್ತದೆ.

ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಪ್ರೇಮಾಲಾಪದಲ್ಲಿ ಒಬ್ಬರನ್ನೊಬ್ಬರು ಸರಿಗಟ್ಟುವಂತೆಯೇ ನಟಿಸಿದ್ದಾರೆ. ಪವಿತ್ರಾ ಲೋಕೇಶ್ ನಟನೆ ಗಮನ ಸೆಳೆಯುತ್ತದೆ. ಉಳಿದಂತೆ ರಮೇಶ್ ಇಂದಿರಾ, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್, ಶಶಿಕುಮಾರ್, ಅವಿನಾಶ್, ರವಿಭಟ್ ಹೀಗೆ ಸಾಕಷ್ಟು ಪಾತ್ರಗಳು ಪೂರಕವಾಗಿವೆ.

ನಿಧಾನಗತಿಯ ಚಲನೆಗೆ ಚರಣ್ ರಾಜ್ ಸಂಗೀತ ವೇಗವಾಗಿ ಅಬ್ಬರಿಸುತ್ತದೆ. ಆದರೆ ಹಾಡುಗಳು ಮನಸ್ಸಿನಲ್ಲಿ ಉಳಿಯುವ ರಾಗಲಾಪ ಹೊಂದಿಲ್ಲ ಎಂಬುದೇ ಕೊರತೆ..

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *