ಎಂದಿನಂತೆ ಕೆಲಸಕ್ಕೆ ಧಾವಿಸಿದ ಬೆಂಗಳೂರಿನ ಜಯನಗರದಲ್ಲಿರುವ ಬಿಎಂಟಿಸಿ 3ನೇ ಘಟಕದ ಸಿಬ್ಬಂದಿಗೆ ಮಂಗಳವಾರ ಬೆಳಿಗ್ಗೆಯೇ ರೋಮಾಂಚಕ ಸಂಗತಿಯೊಂದು ಎದುರಾಯ್ತು..
ಕನಸು ಮನಸಿನಲ್ಲಿಯೂ ಎಣಿಸದ ಅಥವಾ ಕನಸಿನಂತೆಯೇ ಎದುರಾದ ರೋಚಕ ಸನ್ನಿವೇಶದಲ್ಲಿ ಅವರೆಲ್ಲರೂ ಮಿಂದೆದ್ದರು..
ಅದು ರಜನಿಕಾಂತ್..!
ಒಂದು ಕಾಲದಲ್ಲಿ ಬಿಟಿಎಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್; ಆನಂತರ ಸ್ಟಾರ್ ಆಗಿ ಆಗಸದೆತ್ತರ ಬೆಳೆದಿದ್ದು ಇತಿಹಾಸ..
ಆದರೆ ತಾವು ಬೆಳೆದು ಬಂದ ದಾರಿಯನ್ನು ಈ ಸೂಪರ್ ಸ್ಟಾರ್ ಎಂದಿಗೂ ಮರೆಯಲೇ ಇಲ್ಲ. ಬೆಂಗಳೂರಿನ ಪೂರ್ವಾಶ್ರಮದ ಆ ತಾಣವನ್ನು ಅಚ್ಚರಿಯ ಭೇಟಿಯ ಮೂಲಕ ಪರಿಶೀಲಿಸಲು ಮನಸ್ಸು ಮಾಡಿದ್ದರ ಫಲ..
ಆಗಸ್ಟ್ 29ರ ಮಂಗಳವಾರ ಜಯನಗರ ಬಿಎಂಟಿಸಿ ಸಿಬ್ಬಂದಿಗೆ ಮಹಾನ್ ನಟನನ್ನು ನೋಡುವ, ಕಣ್ತುಂಬಿಕೊಳ್ಳುವ ಮತ್ತು ಸೆಲ್ಫಿ ತೆಗೆದುಕೊಳ್ಳುವುದು ವರವಾಗಿ ಬಂದಿತ್ತು.
ಡಿಪೋನ ಸಿಬ್ಬಂದಿಯ ಸಂತಸ, ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಒಬ್ಬ ಸೂಪರ್ ಸ್ಟಾರ್ ಇಷ್ಟೊಂದು ಸರಳವಾಗಿ ತಮ್ಮ ಜೊತೆ ಬೆರೆಯುವರು ಎಂದು ಅವರು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ರಜನಿಕಾಂತ್ ಜೊತೆ ಅವರ ಬಾಲ್ಯದ ಗೆಳೆಯ ರಾಜ್ ಬಹದ್ದೂರ್ ಸಹ ಇದ್ದರು. ಸ್ನಿಗ್ಧ ನಗೆ ತಣ್ಣಗಿನ ಸ್ಪರ್ಶದಿಂದ ಅಲ್ಲಿನ ಜನರನ್ನು ಪುಳಕಿತರಾಗಿಸಿದ ರಜನಿ ಇನ್ನು ಕೆಲವು ಅಚ್ಚರಿ ತಾಣಗಳನ್ನು ಹುಡುಕುತ್ತಿದ್ದರು..
ಸೂಪರ್ ಸ್ಟಾರ್ ರಜನಿಕಾಂತ್ ಈಗ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ನಟ. ಜಪಾನ್, ಚೀನಾ, ಶ್ರೀಲಂಕಾ ಎಲ್ಲಿ ಬೇಕೆಂದರೆ ಅಲ್ಲಿ ಕಂಡು ಕೇಳರಿಯದ ಅಭಿಮಾನಿ ಬಳಗವಿದೆ..
ಮೇಲಾಗಿ ಅವರ ‘ಜೈಲರ್’ ಚಿತ್ರ ಸುಮಾರು 600 ಕೋಟಿ ಗಳಿಕೆ ಮಾಡಿದೆ. ಆದರೆ ರಜನಿಕಾಂತ್ ಈಗ ಶಾಂತಿಯನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿ ಹಿಮಾಲಯ ಹಾಗೂ ಇತರ ಭಾಗಗಳಿಗೆ ಸಂಚರಿಸಿದ್ದಾರೆ.
ಅದೇ ರೀತಿ ಅವರ ಬಾಲ್ಯದ ದಿನಗಳನ್ನು ಕಳೆದ ಬೆಂಗಳೂರಿನ ಅಚ್ಚರಿಗಳನ್ನು ಅಚ್ಚರಿಯ ಭೇಟಿ ಮೂಲಕವೇ ಹುಡುಕುತ್ತಿದ್ದಾರೆ.