Snehapriya.com

June 8, 2025

ಟೋಬಿ ಚಿತ್ರವಿಮರ್ಶೆ

Social Share :

ಟೋಬಿ ಅಂದ್ರೆ ಮಾರಿ ಅಲ್ಲ..!

ಚಿಕ್ಕ ವಯಸ್ಸಿನಲ್ಲೇ ದೌರ್ಜನ್ಯಕ್ಕೆ ಸಿಲುಕಿದ ಅಮಾಯಕ ಮತ್ತು ಒರಟ ಹುಡುಗನೊಬ್ಬನ ಅಸಾಮಾನ್ಯ ಜೀವನಗಾಥೆಯಂತೆ ಕಾಣುವ ಕಥೆಯಲ್ಲಿ ನೈಜತೆ ತುಂಬಿ ತುಳುಕುತ್ತದೆ..

ಅಮಾಯಕರಂಥವರು ವ್ಯವಸ್ಥೆಯ ಕ್ರೌರ್ಯಕ್ಕೆ ಸಿಲುಕಿ ನಲುಗುವುದು ಹೊಸತೇನೂ ಅಲ್ಲ; ಆದರೆ ರಕ್ಕಸ ಜನರು ತಮ್ಮ ಬೆಳವಣಿಗೆಗೆ ಹೆಣದ ರಾಶಿಗಳನ್ನು ದಾರಿ ಮಾಡಿಕೊಳ್ಳುವ ಕಥೆ ಟೋಬಿಯದು..

ಟೋಬಿ ಎಂದರೆ ‘ಒಳ್ಳೆಯ ಜನರು ಅಥವಾ ದೇವರು ಒಳ್ಳೆಯವನು’ ಎಂಬುದು ವಿವರಣೆಯಾಗಿ ಚಿತ್ರದಲ್ಲಿಯೇ ಸಿಗುತ್ತದೆ. ಇಲ್ಲಿನ ಟೋಬಿ ಮುಗ್ಧನೋ, ಅಸಹಾಯಕನೋ, ಧೈರ್ಯಶಾಲಿಯೋ ಎಂಬುದು ತಿಳಿಯುವುದೇ ಇಲ್ಲ. ಏಕೆಂದರೆ ಟೋಬಿ ಇದೆಲ್ಲವೂ ಆಗಿರುತ್ತಾನೆ.

ಕರಾವಳಿ ಪ್ರದೇಶದ ದುರ್ಬಲರ ಕಥೆಯಾಗಿ ಗಮನ ಸೆಳೆಯುವ ಕಥೆಯಲ್ಲಿ ಜೀವನ ಪ್ರೀತಿ ಮೈದುಂಬಿಕೊಂಡಿರುತ್ತದೆ. ಮುಗ್ಧತೆ ಹಾಸು ಹೊಕ್ಕಾಗಿರುತ್ತದೆ. ಹಾಗಾಗಿ ನಡೆಯುವ ಕ್ರೌರ್ಯ ಮತ್ತು ಸಹಿಸುವ ಮನಸ್ಥಿತಿ ಒಪ್ಪಿತ ಸಮಾಜದ ಸಹಜ ನಡವಳಿಗಳಂತೆಯೇ ಕಾಣುತ್ತದೆ.

ಆದ್ದರಿಂದಲೇ ಹೆಣ ಕುಯ್ಯುವ ಮನೆಯ ಸೂತಕದ ಛಾಯೆ; ಮೈ ಮಾರಿಕೊಳ್ಳುವ ಹೆಣ್ಣಿನ ನತದೃಷ್ಟ ನಡವಳಿಕೆ; ಅಸಹಾಯಕ ಹೆಣ್ಣಿನ ಮೇಲೆ ನಡೆಯುವ ಲೈಂಗಿಕ ಶೋಷಣೆ ಇದ್ಯಾವುದು ಭಯಾನಕ ಅನಿಸುವುದೇ ಇಲ್ಲ.

ನಲುಗಿದ ವ್ಯವಸ್ಥೆಯ ನೈಜ ಚಿತ್ರಣಗಳನ್ನು ನೀಡುವ ಪ್ರಯತ್ನದಲ್ಲಿ ನಿಧಾನಗತಿಯ ನಿರೂಪಣೆ ಇದ್ದರೂ ಪಾತ್ರಗಳ ಸಹಜತೆಯಲ್ಲಿ ಯಾವ ಕೊರತೆಯೂ ಇಲ್ಲ. ರಾಜ್ ಬಿ.ಶೆಟ್ಟಿ ಮುಗ್ಧತೆಯನ್ನು ಮೊಗೆದು ಕೊಟ್ಟಂತೆ; ಮತ್ತೊಮ್ಮೆ ಸಿಡಿಲಿನ ಕೆಂಡದಂತಹ ವರಸೆಗಳನ್ನು ತೋರಿದ್ದಾರೆ.

ಆದರೆ ಮಾರಿ ವೇಷದಲ್ಲಿ ಅಬ್ಬರ ಕಾಣುವುದಿಲ್ಲ. ಮಾರಿ ಎಂಬುದು ರೂಪಕವಾಗುವುದಾದರೆ ಮಾರಿಯ ಅಸ್ತಿತ್ವ ಅತ್ಯಂತ ದುರ್ಬಲ. ಹಾಗಾಗಿ ಪ್ರಚಾರ ಮಾಡಿಕೊಂಡ ವರಸೆಯಲ್ಲಿ ಹೇಳುವುದಾದರೆ ಇದೊಂದು ಪೇಲವ ಪ್ರದರ್ಶನ.

ಜನ್ನಿ ಪಾತ್ರದಲ್ಲಿ ಎರಡು ವರಸೆಗಳಿವೆ. ಒಂದು ಚಿಕ್ಕ ಹುಡುಗಿ ಸ್ನಿಗ್ಧ ಪಾತ್ರ ಮುಗ್ಧ ಪಾತ್ರವಾಗಿ ಗಮನ ಸೆಳೆಯುತ್ತದೆ ದೊಡ್ಡ ಹುಡುಗಿ ಚೈತ್ರಾ ಆಚಾರ್ ಅವರದು ಸಹಜ ನಟನೆ ಮತ್ತು ಗಟ್ಟಿಯಾದ ವರಸೆ.

ಇನ್ನು ಇನ್ಸ್ ಪೆಕ್ಟರ್, ಹೆಡ್ ಕಾನ್ಸ್ ಟೇಬಲ್ ಕುಶಾಲಪ್ಪ, ಸಾವಿತ್ರಿ (ಸಂಯುಕ್ತ ಹೊರನಾಡು), ದಾಮೋದರ (ಗೋಪಾಲ ಕೃಷ್ಣ ದೇಶಪಾಂಡೆ), ಆನಂದಣ್ಣ ಎಲ್ಲಾ ಪಾತ್ರಗಳು ನೈಜತೆಯನ್ನೇ ಮೊಗೆದುಕೊಡುತ್ತವೆ.

ಮಲಯಾಳಂ ಚಿತ್ರರಂಗದ ಪ್ರಭಾವ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ. ಏಕೆಂದರೆ ಅದು ನೈಜತೆಯ ವರಸೆಯನ್ನು ಮೊದಲಿನಿಂದಲೂ ನೀಡುತ್ತಾ ಬಂದಿದೆ. ಹಾಗಾಗಿ ಇಲ್ಲಿ ಮಮ್ಮುಟಿಯವರ ಹಲವು ಚಿತ್ರಗಳು ನೆನಪಾಗುತ್ತವೆ. ಅದರಲ್ಲಿ ‘ ಸೂರ್ಯ ಮಾನಸಂ’ ನ ಮುಗ್ಧ ಇಲ್ಲಿ ಬಹಳವೇ ನೆನಪಾಗುತ್ತಾನೆ.

ಟಿ.ಕೆ.ದಯಾನಂದ್ ಕಥೆ ನೊಂದವರ ಕಥೆಯಾಗಿ ಸಂವೇದನೆಗಳನ್ನು ಹುಟ್ಟು ಹಾಕಿರಬಹುದು. ಆದರೆ ನಿರೂಪಣೆಯಲ್ಲಿ ಆಪ್ತವಾಗಿ ಮನಸ್ಸಿಗೆ ತಟ್ಟುವುದಿಲ್ಲ. ಏಕೆಂದರೆ ಕ್ರೌರ್ಯ ಮತ್ತು ನೈಜತೆ ಸಹಿಸುವ ವಿಷಯವೂ ಅಲ್ಲ.

ನಿರ್ದೇಶಕ ಬೇಸಿಲ್ ಆಲ್ಚಲಕ್ಕಲ್ ಕರಾವಳಿ ಪ್ರದೇಶದ ನೈಜ ಚಿತ್ರಣಗಳನ್ನು ಮೊಗೆದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಬ್ಬರ ಮತ್ತು ಸಂವೇದನೆಗಳನ್ನು ಮರೆತ್ತಿದ್ದಾರೆ.

ಪ್ರವೀಣ್ ಶ್ರಿಯಾನ್ ಛಾಯಾಗ್ರಹಣ ಮತ್ತು ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *