Snehapriya.com

June 8, 2025

ಮಲಗಿದ ಸ್ಪಂದನಾ ಮತ್ತೆ ಏಳಲಿಲ್ಲ ವಿಜಯ ರಾಘವೇಂದ್ರ ಪತ್ನಿ ಇನ್ನಿಲ್ಲ..

Social Share :


ರಾತ್ರಿ ಮಲಗಿದ ಸ್ಪಂದನಾ (ವಿಜಯ ರಾಘವೇಂದ್ರ ಪತ್ನಿ) ಮತ್ತೆ ಮೇಲೇಳಲೇ ಇಲ್ಲ..!

ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಬರ ಸಿಡಿಲಿನಂತಹ ಸುದ್ದಿ ಬಂದೆರಗಿದೆ.
ಅದರಲ್ಲೂ ರಾಜ್ ಕುಟುಂಬಕ್ಕೆ ಎರಡನೇ ಆಘಾತ ಇದಾಗಿದೆ..

ಕನ್ನಡದ ಜನಪ್ರಿಯ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ಸ್ಪಂದನ ಅವರಿಗೆ ಥೈಲ್ಯಾಂಡ್ ನಲ್ಲಿ ಲೋ ಬಿಪಿ ಬಳಿಕ ಹೃದಯಾಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ಮಾಹಿತಿ.

ಪೊಲೀಸ್ ಇಲಾಖೆಯಲ್ಲಿ ಕಠಿಣ ಅಧಿಕಾರಿ ಎಂದೇ ಹೆಸರಾಗಿದ್ದ ಬಿ.ಕೆ.ಶಿವರಾಮ್ ಅವರ ಪುತ್ರಿ ಸ್ಪಂದನಾ ಅವರು ನಟ ವಿಜಯ ರಾಘವೇಂದ್ರ ಅವರನ್ನು ಪ್ರೇಮಿಸಿ ಮದುವೆಯಾಗಿದ್ದರು.

ಕಾಫಿ ಡೇ ನಲ್ಲಿ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಭೇಟಿಯಾಗಿ ಪ್ರೇಮಾಂಕುರವಾಗಿತ್ತು. ಬಳಿಕ ಅವರು ಸಂಬಂಧವೇ ಆಗಬೇಕು ಎಂದು ತಿಳಿದಾಗ ಹಿರಿಯರ ಸಮ್ಮತಿ ಜೊತೆ 2007ರಲ್ಲಿ ವಿವಾಹವಾಗಿದ್ದರು.

ಎಲ್ಲರ ಕಣ್ಣು ಬೀಳುವಷ್ಟು ಅನೋನ್ಯವಾಗಿದ್ದ ವಿಜಯ ರಾಘವೇಂದ್ರ ದಂಪತಿಗಳಿಗೆ ಶೌರ್ಯ ಎಂಬ ಪುತ್ರನಿದ್ದಾನೆ. ಪಾರ್ವತಮ್ಮ ರಾಜ್‍ಕುಮಾರ್ ಅವರ ಸಹೋದರ ಎಸ್.ಎ.ಚಿನ್ನೇಗೌಡರ ಪುತ್ರ ವಿಜಯ ರಾಘವೇಂದ್ರ ಅತ್ಯಂತ ಸೌಮ್ಯ ಸ್ವಭಾವದ ನಟ. ಈಗ ಅವರ ಬದುಕಿಗೆ ಬರಸಿಡಿಲು ಬಂದೆರಗಿದೆ.

ಸ್ಪಂದನಾ ಚಿತ್ರರಂಗದ ಜೊತೆ ಉತ್ತಮ ನಂಟು ಹೊಂದಿದ್ದರು. ವಿಜಯ ರಾಘವೇಂದ್ರ ಅಭಿನಯದ ‘ಕಿಸ್ಮತ್’ ಎಂಬ ಚಿತ್ರವನ್ನು ನಿರ್ಮಿಸಿದ್ದರು ಮಾತ್ರವಲ್ಲ; ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿನಯದ ‘ಅಪೂರ್ವ’ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು.

ವಿದೇಶ ಪ್ರವಾಸದಲ್ಲಿದ್ದ ಸ್ಪಂದನಾ ಅವರಿಗೆ ಏನಾಗಿತ್ತು ಎಂಬುದರ ಮಾಹಿತಿ ಸದ್ಯಕ್ಕಿಲ್ಲ. ಅವರು ಮಲಗಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ ಎಂದು ವಿಜಯ ರಾಘವೇಂದ್ರ ಸಹೋದರ ನಟ ಮುರಳಿ ಹಾಗೂ ಸ್ಪಂದನಾ ದೊಡ್ಡಪ್ಪ ಹಿರಿಯ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.

ಸ್ಪಂದನಾ ಪಾರ್ಥಿವ ಶರೀರವನ್ನು ಬ್ಯಾಂಕಾಕ್ ನಿಂದ ತರಲು ಸರ್ಕಾರ ಸಹಕಾರ ನೀಡಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದು, ಬಿ.ಕೆ.ಹರಿಪ್ರಸಾದ್ ಈ ಸಂಬಂಧ ಬ್ಯಾಂಕಾಕ್ ಗೆ ತೆರಳಲಿದ್ದಾರೆ.

ಭಾನುವಾರ ರಾತ್ರಿಯೇ ವಿಜಯ ರಾಘವೇಂದ್ರ ಬ್ಯಾಂಕಾಕ್ ಗೆ ತೆರಳಿದ್ದಾರೆ. ಅಲ್ಲಿ ಸೋಮವಾರ ಪೋಸ್ಟ್ ಮಾರ್ಟನ್ ನಡೆದು ಮಂಗಳವಾರ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದೆ ಎಂಬುದು ಸದ್ಯದ ಮಾಹಿತಿ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *