ನಿರ್ಮಾಣ : ಸಂತೋಷ್ ಶೇಖರ್
ನಿರ್ದೇಶನ : ಮುರಳಿ ಮಾಸ್ಟರ್
ಭಯ ಮಿಶ್ರಿತ ನಗುವಿನ ಭುಗ್ಗೆ..
ಕಾಡಿನ ಮಧ್ಯೆ ಇರುವ ನಿಗೂಢ ಮನೆಯಲ್ಲಿ ನಡೆಯುವ ಪ್ರಹಸನ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ.. ಮರೆಯಾಗುವ ಮುನ್ನವೇ ಬೆಚ್ಚಿ ಬೀಳಿಸುವ ದೃಶ್ಯಗಳು ಮರೆಯಾದ ಬಳಿಕ ನಗುವಿನ ಬುಗ್ಗೆಯನ್ನೇ ಎಬ್ಬಿಸುತ್ತವೆ..
ಒಂದು ಸುದ್ದಿ ಚಾನೆಲ್ ನಲ್ಲಿ ಕೆಲಸ ಮಾಡುವ ಅರ್ಜುನ್ (ಕೋಮಲ್) ಹಾಗೂ ಗರುಡ (ಗೋವಿಂದೇಗೌಡ) ಹುಡುಗರಿಬ್ಬರ ಚಾಲಾಕಿತನ ಅವರಿಗೇ ಮುಳುವಾಗುತ್ತದೆ. ರೌಡಿಗಳ ಬುಡಕ್ಕೆ ಕೈ ಹಾಕಿದ ಪರಿಣಾಮ ಊರು ಬಿಟ್ಟು ಒಂಟಿ ಮನೆ ಸೇರಿಕೊಳ್ಳುವ ಐವರ ಕಥೆ ಏನಾಯಿತು ಎಂಬುದೇ ತಿರುಳು..
ಅರ್ಜುನ್, ಗರುಡ ಜೊತೆಗೆ ಚೆಂದುಳ್ಳಿ ಚೆಲುವೆ ಅಮೃತಾ ಮತ್ತು ಬಿಟ್ಟಿರಲಾರದ ಜೋಡಿಯಾದ ನಂದಿನಿ-ಶ್ರೇಯಸ್ ಒಂಟಿ ಮನೆಯಲ್ಲಿ ಅನುಭವಿಸುವ ಭಯ, ನೋವು, ತಮಾಷೆ ಎಲ್ಲವೂ ಪ್ರೇಕ್ಷಕನನ್ನು ನಗೆಗಡಲಿನಲ್ಲಿ ತೇಲಿಸುತ್ತದೆ.
ಭೂತ ಪ್ರತ್ಯಕ್ಷವಾಗುವ ಕ್ಷಣ ಭಯ ಮೈ ಜುಂ ಎನ್ನುವಂತಾದರೇ.. ಈ ಐವರ ಪ್ರತಿಕ್ರಿಯೆಗೆ ಮರು ಕ್ಷಣ ನಗೆ ಹುಟ್ಟಿಸುತ್ತದೆ. ದೆವ್ವ ಇದೆ. ಆದರೆ ಇಲ್ಲ; ದೆವ್ವ ಇಲ್ಲ. ಆದರೆ ಇದೆ; ಇದೇ ಕಣ್ಣಾ ಮುಚ್ಚಾಲೆ ಆಟದಲ್ಲಿ ಹೊತ್ತು ಕಳೆದು ಹೋಗುವುದು ತಿಳಿಯುವುದೇ ಇಲ್ಲ.
ಅದೇ ದೆವ್ವದ ಮನೆ; ಗೊಂಬೆ, ಇವಿಲ್ ಡೆಡ್ ನ ಕತ್ತಿನ ಭಾಗ ಕಚ್ಚುವಿಕೆ ಜೊತೆ ನಮೋ ಭೂತಾತ್ಮದ ಅದೇ ಮ್ಯಾನರಿಜಂ ಮುಂದುವರಿಕೆ ಎಲ್ಲವೂ ಇದ್ದರೂ ಭೂತ ಹೆದರಿಸಿ ನಗಿಸುತ್ತದೆ ಎಂಬುದೇ ಕುತೂಹಲದ ವಿಷಯವಾಗುತ್ತದೆ.
ನಿರ್ದೇಶಕ ಮುರುಳಿ ಮಾಸ್ಟರ್ ತಂತ್ರಜ್ಞಾನದ ಹೊಸತನವನ್ನು ಅತ್ಯುತ್ತಮವಾಗಿಯೇ ಬಳಸಿಕೊಂಡಿದ್ದಾರೆ. ಹಾಗಾಗಿ ಚಿತ್ರದಲ್ಲಿ ಭಯ, ನಗುವಿನಷ್ಟೇ ವೇಗವೂ ಇದೆ.
ಕೋಮಲ್ ಕುಮಾರ್ ತಮ್ಮ ಎಂದಿನ ಸಹಜ ಶೈಲಿಯ ನಟನೆಯಿಂದ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಾರೆ. ಅವರೊಟ್ಟಿಗೆ ನಗೆಯ ಬುಗ್ಗೆ ಹರಿಸಲು ಜಿಜಿ ಸಹಕರಿಸಿದ್ದಾರೆ. ಲೇಖಾಚಂದ್ರ ಹಾಗೂ ಮೋನಿಕಾ, ವರುಣ್ ರಾಜ್ ವರಸೆಯೂ ಉತ್ತಮವಾಗಿದೆ. ಸ್ವಲ್ಪವೇ ಬಂದು ಹೋಗುವ ಮಿಮಿಕ್ರಿ ಗೋಪಿ ಹಾಗೂ ರಘು ರಾಮನ ಕೊಪ್ಪ ಅವರ ಪಾತ್ರವೂ ನಕ್ಕು ನಗಿಸುತ್ತದೆ.
ರಿಯಾಲಿಟಿ ಶೋಗಳು ಮಾಡುವ ಅವಾಂತರ ಅಥವಾ ಆಘಾತಗಳು ಕಡಿಮೆಯದೇನೂ ಅಲ್ಲ. ಅಂತಹ ರಿಯಾಲಿಟಿ ಶೋನ ಹುಡುಗರಿಬ್ಬರು ಒಂದು ತುಂಬು ಕುಟುಂಬದ ಸಂತೋಷದ ಸಮಯವನ್ನು ಮಸಣವಾಗಿಸಿದ ಸಂದರ್ಭ ಅಭಿವ್ಯಕ್ತಗೊಂಡಿರುವುದರಿಂದ ಇದು ಸಂದೇಶ ನೀಡುವ ಚಿತ್ರವೂ ಹೌದು..
ದೆವ್ವ ಪಿಶಾಚಿ ಬರೀ ಕಲ್ಪನೆ ಎಂಬುದನ್ನು ಸಾಬೀತು ಮಾಡುತ್ತಲೇ ಅವುಗಳ ಹಿಡಿತಕ್ಕೆ ನಿಧಾನವಾಗಿ ಪ್ರೇಕ್ಷಕನ ಮನಸ್ಸನ್ನು ಸಿಲುಕಿಸುವ ಪ್ರಯತ್ನವೇ ಇದು ಎಂಬುದು ಚಿತ್ರ ನೋಡಿ ಮುಗಿಸಿದ ನಂತರ ಅನಿಸುತ್ತದೆ.
ಕೊನೆಯಲ್ಲಿ ಒಂದೊಳ್ಖೆ ಕೆಲಸ ನಮ್ಮನ್ನು ಕಾಯುತ್ತದೆ ಎಂಬುದರ ಸಮರ್ಥ ಅಭಿವ್ಯಕ್ತಿಯೂ ಇದೆ. ಹಾಗಾಗಿ ಮನರಂಜನೆ ತುಂಬಿರುವ ಈ ಚಿತ್ರವನ್ನೊಮ್ಮೆ ನೋಡಿ ನಕ್ಕು ಹೊರಬರಬಹುದು..