ನಾಟಿ ವೈದ್ಯ ನಾರಾಯಣ
ವ್ಯವಸ್ಥೆಗೊಂದು ತಿರುಗು ಬಾಣ
ಪುರಾತನವಾದ ಆಯುರ್ವೇದ ವೈದ್ಯ ಪದ್ಧತಿ ಎಂತಹ ರೋಗವನ್ನೂ ಗುಣಪಡಿಸುವ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಆದರೆ ವ್ಯವಸ್ಥೆ ಅದನ್ನು ನಾಶಪಡಿಸುವ ಹುನ್ನಾರ ನಡೆಸುತ್ತಲೇ ಬಂದಿದೆ.
ಇದಕ್ಕೆ ಪರಿಹಾರವೇನು ಜನ ಸ್ನೇಹಿಯಾದ ವೈದ್ಯ ಪದ್ಧತಿಯನ್ನು ಉಳಿಸಿ ಬೆಳೆಸಲು ಏನು ಮಾಡಬೇಕು ಎಂಬುದಕ್ಕೆ ಸ್ವತಃ ನಾಟಿ ವೈದ್ಯರಾದ ಮಧುಸೂದನ್ ಅವರು ಮಾಡಿದ ಪ್ರಯತ್ನವೇ ಈ ಚಿತ್ರ..
ಮಧುರಕಾವ್ಯ..!
ಒಂದು ಊರು ಅಲ್ಲಿನ ಬಡ ಜನರಿಗೆ ಸಹಜವಾಗಿ ಉಂಟಾಗುವ ಕಾಯಿಲೆಗಳು. ಇದು ಅಸಹಾಯಕತೆ ಹಂತದಲ್ಲಿ ಇರುವಾಗ ಕಾಣಿಸಿಕೊಳ್ಳುವ ಯಶೋದಾ ಮಾತೆ ಎಲ್ಲರ ಮೆಚ್ಚಿನ ವೈದ್ಯೆ ಮತ್ತು ಅವ್ವ.
ಅದೇ ರೀತಿ ದಾರಿ ತಪ್ಪಿ ಬರುವ ಮಾವೀರನೂ ಆಕೆಗೆ ಮಗನಾಗುತ್ತಾನೆ. ಆದರೆ ವ್ಯವಸ್ಥೆ ಆಕೆಯನ್ನು ಮುಗಿಸಲು ಯತ್ನಿಸಿದಾಗ ಸಮಾಜಕ್ಕೆ ನೆರವಾಗುವ ಸಂಕಲ್ಪ ಮಾಡುವ ಮಾವೀರ ಅದಕ್ಕಾಗಿ ವಿಭಿನ್ನ ದಾರಿ ಕಂಡುಕೊಳ್ಳುತ್ತಾನೆ..
ಹಾಗಾಗಿ ಆ ಊರಿನ ಸರ್ಕಾರಿ ಆಸ್ಪತ್ರೆ ಮತ್ತು ಇತರ ಕಡೆಗಳಿಂದ ರೋಗಿಗಳೇ ನಾಪತ್ತೆಯಾಗುತ್ತಾರೆ. ಆತ ಕಾಡಿನಲ್ಲಿ ಆಶ್ರಮ ಕಟ್ಟಿಕೊಳ್ಳುತ್ತಾನೆ. ಆಗ ವ್ಯವಸ್ಥೆ ವಿರುದ್ಧ ಹೋರಾಡುವ ಗುಂಪೊಂದು ಆತನಿಗೆ ನೆರವಾಗಿ ನಿಲ್ಲುತ್ತದೆ.
ಮಾವೀರ ವೀರತ್ವದ ಗುಣಗಳನ್ನು ಹೊಂದಿದವನು. ಆದರೆ ಆತ ಅಮಾಯಕ ಮತ್ತು ಅನಾಥ. ಸಿಕ್ಕಿರುವ ಮಾತೆಗೆ ಮಗುವಾಗಲು ಯತ್ನಿಸುತ್ತಾನೆ ಮತ್ತು ಚಿಕಿತ್ಸಾ ಕಾಯಕದಲ್ಲಿ ಆಕೆಗೆ ನೆರವಾಗುತ್ತಾನೆ.
ಯಶೋದಾ ಚಿಕಿತ್ಸೆ ಪ್ರಸಿದ್ಧಿ ಪಡೆಯುವಾಗ ವ್ಯವಸ್ಥೆಯಲ್ಲಿ ಅನ್ಯ ಮಾರ್ಗದಿಂದ ಸುಲಿಗೆ ಮಾಡಿ ಲಾಭ ಪಡೆಯುವ ಮಂತ್ರಿಗೆ ಅಡ್ಡಿಯಾಗುತ್ತದೆ. ಆತ ಸಂಚು ರೂಪಿಸುತ್ತಾನೆ. ಜನರು ಸಾಯುತ್ತಾರೆ. ಇದು ಯಶೋದಾ ಮಾತೆಗೆ ಕಳಂಕ.
ಆಕೆ ಹತಾಶಳಾಗಿ ಚಿಕಿತ್ಸೆ ಬಿಡುವ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಘಟನೆಗಳು ನಡೆಯುತ್ತವೆ. ಅಪಹರಿಸಲ್ಪಡುವ ಮಂತ್ರಿ ಮತ್ತು ಆತನ ಸಹಾಯಕರಿಗೆ ಕಾಡಿನಲ್ಲಿ ಬುದ್ಧಿ ಕಲಿಸಲಾಗುತ್ತದೆ. ಮುಂದೆ ಅಪ್ಪ ಮಗನಿಗೆ ಜಯವಾಗುತ್ತದೆ.
ಈ ಚಿತ್ರಕ್ಕೆ ಮಧುಸೂದನ್ ಕ್ಯಾತನಹಳ್ಳಿ ಅವರೇ ನಟ, ನಿರ್ಮಾಪಕ, ನಿರ್ದೇಶಕ. ಕಥೆಯನ್ನು ಕಮರ್ಷಿಯಲ್ ಆಗಿ ಹೆಣೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಹೊಸ ಸಾಧ್ಯತೆಗಳನ್ನು ಪರಿಶೀಲಿಸಲು ನಿರ್ದೇಶಕರು ಮನಸ್ಸು ಮಾಡಿಲ್ಲ ಅಷ್ಟೇ.
ಆದರೆ ನಿಸರ್ಗ ಹಾಗೂ ಅದರ ತಾಣಗಳನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗಾಗಿ ‘ಮಧುರಕಾವ್ಯ’ ಉತ್ತಮ ಸಂದೇಶ ನೀಡುವ ಚಿತ್ರವಾಗಿಯೇ ಗಮನ ಸೆಳೆಯುತ್ತದೆ.
ಜನ ಸ್ನೇಹಿಯಾದ ಅದರಲ್ಲಿಯೂ ಬಡ ಜನರಿಗೆ ವರವಾಗಿರುವ ವೈದ್ಯ ಪದ್ಧತಿಯನ್ನು ವ್ಯವಸ್ಥೆ ಹೇಗೆಲ್ಲಾ ಹಾಳು ಮಾಡಿದೆ ಎಂಬುದರ ಚಿತ್ರಣ ಕಾಣಬಹುದು.
‘ವೈದೋನಾರಾಯಣ ಹರಿ’ ಎಂಬುದಕ್ಕೆ ನಿಜವಾದ ಅರ್ಥ ಏನು ಎಂಬುದಕ್ಕೂ ಚಿತ್ರದಲ್ಲಿ ಉತ್ತರ ಸಿಗುತ್ತದೆ.