ಕನ್ನಡದ ಆಕ್ಷನ್ ಕ್ವೀನ್, ಕನಸಿನ ರಾಣಿ ಮಾಲಾಶ್ರೀ ಮುಖ್ಯ ಪಾತ್ರದಲ್ಲಿರುವ ‘ಮಾರಕಾಸ್ತ್ರ’ ಎಂಬ ಚಿತ್ರವು ಟೀಸರ್ ಮಾತ್ರದಿಂದಲೇ ಗಮನ ಸೆಳೆಯುತ್ತಿದೆ..
ಬಲಿಷ್ಟವಾದ ದಿಟ್ಟತನದ ಕಥೆ. ಹೊಸ ನೆಲೆಯ ನಿರೂಪಣೆ ಮತ್ತು ಕಥೆ ಅಗೋಚರ ಶಕ್ತಿಯ ಬಲದಿಂದ ಸಿನಿಮಾಸಕ್ತರಲ್ಲಿ ಹೆಚ್ಚು ಕುತೂಹಲ ಹುಟ್ಟಿಸಿರುವ ಚಿತ್ರ ‘ಮಾರಕಾಸ್ತ್ರ’.
ಗುರುಮೂರ್ತಿ ಸುನಾಮಿ ಈ ಚಿತ್ರದ ನಿರ್ದೇಶಕ. ಇವರು ಸಾಮಾನ್ಯರಲ್ಲಿ ಅಸಾಮಾನ್ಯ ದಿವ್ಯ ಚೇತನ. ಚಿತ್ರದ ಬಗ್ಗೆ ಇಷ್ಟು ಹೇಳಲು ಕಾರಣ
ವಾಗಿದ್ದೇ ನಿರ್ದೇಶಕರ ಹೊಸ ಹುಮ್ಮಸ್ಸಿನ ಈ ಶಕ್ತಿ.
ಗುರುಮೂರ್ತಿ ಚಿಕ್ಕ ವಯಸ್ಸಿನಲ್ಲೇ ಕಾಲಿನ ಸ್ವಾಧೀನ ಕಳೆದುಕೊಂಡ ಯುವಕ.ಆದರೂ ಎದೆಗುಂದದೆ ಅಕ್ಷರ ಕಲಿತು ಮುಂದೆ ಸಿನಿಮಾ ಕನಸುಗಳನ್ನು ಕಂಡಿದ್ದೇ ವಿಶೇಷ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಹೊಸ ದರೋಜಿ ಗ್ರಾಮದ ಈ ಯುವಕ ‘ಬಳ್ಳಾರಿಯ ನವಜೀವನ ವಿಕಲಚೇತನ ಸಂಸ್ಥೆ’ ಯಲ್ಲಿ ಕಲಿಯುವಾಗಲೇ ಹುಟ್ಟಿದ ಕನಸುಗಳು ನಿರ್ದೇಶಕ ಆಗುವ ಮಟ್ಟಕ್ಕೆ ಕರೆ ತಂದಿವೆ..
ತಂದೆ ರೈತ, ಸಹೋದರರು ಕೂಲಿ ಕೆಲಸಗಾರರು.. ಇದರ ನಡುವೆ ಮೂರು ಚಕ್ರದ ಸೈಕಲ್ ಮೇಲೆ ಕುಳಿತು ಜೀವನವನ್ನೇ ಎಳೆದಾಡುತ್ತಿದ್ದ ಯುವಕ ಕನಸು ಕಾಣಲು ಆರಂಭಿಸಿದಾಗ ದಕ್ಕಿದ್ದು ನಿರಾಸೆ ಮತ್ತು ಅವಮಾನಗಳು..
ಆದರೂ ಛಲ ಬಿಡದ ತ್ರಿವಿಕ್ರಮನಂತೆ ಓಡಾಡಿದ ಪ್ರಯತ್ನದಲ್ಲಿ ಕೋಮಲ ನಟರಾಜ್ ಅವರಂತಹ ನಿರ್ಮಾಪಕರ ಕೈಗೆ ಸಿಕ್ಕು ಈಗ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ.
ಮುಂದಿನ ಹಾದಿಯೂ ಕಠಿಣವಾಗಿದೆ. ಆದರೆ ಕ್ರಿಯಾಶೀಲತೆಯ ಈ ನಡೆಗೆ ಬೆಂಬಲವಂತೂ ಸಿಕ್ಕುತ್ತದೆ. ಮುಂದೆ ಅಸಾಧ್ಯ ಕನಸುಗಳನ್ನು ನನಸಾಗಿಸಿಕೊಳ್ಳಬಹುದೆಂಬುದು ಅವರ ಲೆಕ್ಕಾಚಾರ.
ಅದಕ್ಕಾಗಿ ಹಗಲು ರಾತ್ರಿ ಕುಳಿತು ಸ್ಕ್ರಿಪ್ಟ್ ಗಳ ಮೇಲೆ ಸ್ಕ್ರಿಪ್ಟ್ ಬರೆಯುತ್ತಾ ದೊಡ್ಡ ಮಟ್ಟದ ಹೀರೋಗಳನ್ನು ದೊಡ್ಡ ಮಟ್ಟದ ಚಿತ್ರ ಮಾಡುವ ಆಶಯದಲ್ಲಿ ಕಾಯುತ್ತಿದ್ದಾರೆ.
ಅವರ ಈ ಕನಸುಗಳಿಗೆ ‘ಮಾರಕಾಸ್ತ್ರ’ ಚಿತ್ರ ಮೆಟ್ಟಿಲಾಗಿದೆ. ಭರವಸೆಯ ಬೆಳಕಿನಲ್ಲಿ ತೇಲುತ್ತಿರುವ ಗುರುಮೂರ್ತಿ ಸುನಾಮಿ; ಹೊಸ ಹೆಜ್ಜೆಗಳ ಅನನ್ಯ ಹುಡುಕಾಟದಲ್ಲಿಯೂ ತೊಡಗಿದ್ದಾರೆ.