Snehapriya.com

June 8, 2025

ಪ್ರವೀಣ್ ನಿರ್ದೇಶನದ ಎವಿಡೆನ್ಸ್ ಸದ್ಯವೇ ಟೀಸರ್ ಬಿಡುಗಡೆ..

Social Share :


ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ವಿನೂತನ ನೆಲೆಯ ಕುತೂಹಲಕಾರಿ ಚಿತ್ರ ‘ಎವಿಡೆನ್ಸ್’ ಬಿಡುಗಡೆಗೆ ಸಜ್ಜಾಗಿದ್ದು, ಸದ್ಯವೇ ಚಿತ್ರದ ಟೀಸರ್ ಬಿಡುಗಡೆ ಕಾಣಲಿದೆ.

ಹಲವು ಚಿತ್ರಗಳಿಗೆ ಗೀತ ರಚನೆ ಮಾಡಿರುವ ಸಿ.ಪಿ.ಪ್ರವೀಣ್ ನಿರ್ದೇಶನದ ಈ ಚಿತ್ರವು ಈಗ ಸೆನ್ಸಾರ್ ಅಂಗಳದಲ್ಲಿದೆ.

ಶ್ರೀಧೃತಿ ಪ್ರೊಡಕ್ಷನ್ ಲಾಂಛನದಲ್ಲಿ ಡಾ.ಕೊಡ್ಲಾಡಿ ಸುರೇಂದ್ರಶೆಟ್ಟಿ ಅರ್ಪಣೆ ಮಾಡಿರುವ ಈ ಚಿತ್ರವನ್ನು ಶ್ರೀನಿವಾಸ್‌ಪ್ರಭು, ಕೆ.ಮಾದೇಶ್ (ಕೊಡಿಹಳ್ಳಿ), ನಟರಾಜ್ ಸಿ.ಎಸ್.(ಚನ್ನಸಂದ್ರ) ಸೇರಿ ನಿರ್ಮಾಣ ಮಾಡಿದ್ದಾರೆ.

ಇದೇ ತಿಂಗಳ ಅಂತ್ಯಕ್ಕೆ ಚಿತ್ರದ ಟೀಸರ್ ಬಿಡುಗಡೆ ಕಾಣಲಿದೆ ಅಲ್ಲದೆ ಚಿತ್ರವನ್ನು ಆಗಸ್ಟ್ ವೇಳೆಗೆ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು..

ಅರವಿಂದ್ ಅಚ್ಚು, ಎಂ.ಎನ್.ರವೀಂದ್ರ ರಾವ್ (ದೂರದರ್ಶನ), ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗಲ ಹೊರವಲಯದಲ್ಲಿ ಚಿತ್ರೀಕರಣ ನಡೆದಿದೆ. ಒಂದು ಕೊಲೆ ನಡೆಯುತ್ತದೆ. ಆಗ ಅದರ ಸಾಕ್ಷಾಧಾರಗಳನ್ನು ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್, ಸಸ್ಪೆನ್ಸ್ , ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮ ಕಥಾಹಂದರವನ್ನು ಈ ಚಿತ್ರ ಹೊಂದಿದೆ.

ಪ್ರವೀಣ್ ರಾಮಕೃಷ್ಣ (ಸಿ.ಪಿ.ಪ್ರವೀಣ್) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವಂಥಹ ಕಥೆ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಡುತ್ತದೆ.

ಜೋಶ್ ಖ್ಯಾತಿಯ ರೋಬೊ ಗಣೇಶನ್ ಮುಖ್ಯ ಪಾತ್ರದಲ್ಲಿದ್ದು, ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ಮಾನಸ ಜೋಶಿ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನುಳಿದಂತೆ ಆಕರ್ಷ್ ಆದಿತ್ಯ, ರಚಿತಾ, ಪೂಜಿತ ಬೋಬೆಗೌಡ, ಚಮಕ್‌ಚಂದ್ರ, ಪವನ್‌ಸುರೇಶ್, ಶಶಿಧರಕೋಟೆ, ಕಾರ್ತಿಕ್ ವರ್ಣೇಕರ್, ಮನಮೋಹನ್ ರೈ, ರೇಣು ಶಿಕಾರಿ, ಆರಾಧ್ಯ ಶಿವಕುಮಾರ್ ಹಾಗೂ ಇತರರು ನಟಿಸಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆಯೇ ಹಿನ್ನೆಲೆ ಸಂಗೀತವನ್ನು ಸಿ.ಜೆ. ಮಾಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್ ಮತ್ತು ಪ್ರವೀಣ್‌ ರಾಮಕೃಷ್ಣ ಹಾಗೂ ಕಾರ್ತೀಕ್ ಸಾಹಿತ್ಯ ರಚಿಸಿದ್ದಾರೆ.

ಹನುಮಯ್ಯ ಬಂಡಾರು ಮತ್ತು ಆರ್. ಚಂದ್ರಶೇಖರ ಪ್ರಸಾದ್ ಸಂಭಾಷಣೆ, ರವಿ ಸುವರ್ಣ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಸಂಕಲನ, ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಸಿನಿಮಾ-ಗಾಸಿಪ್
Social Share :

Leave a Comment

Your email address will not be published. Required fields are marked *