Snehapriya.com

June 9, 2025

ಸಿನಿಮಾ ಬದ್ಧತೆ ಗೌರವಿಸಿ.. ಸುದೀಪ್ ಗೆ ಎಂ.ಎನ್.ಕುಮಾರ್ ಮನವಿ

Social Share :

* ಸುದೀಪ್ ಮನೆಯ ಮುಂದೆ ಪ್ರತಿಭಟನೆ ಮಾಡುವೆ..

* ಸ್ಟಾರ್ ನಟರಾದ ನೀವು ಸಿನಿಮಾ ಬದ್ಧತೆಯನ್ನು ಗೌರವಿಸಿ

* ಸಾಲ ಮಾಡಿ ಬಡ್ಡಿ ಕಟ್ಟುವ ನಿರ್ಮಾಪಕನ ಪಾಡು ಯಾರಿಗೂ ಬೇಡ

ನಿರ್ಮಾಪಕ ಕೋಟಿಗಟ್ಟಲೆ ತೆಗೆದುಕೊಳ್ಳುವ ಸಾಲಕ್ಕೆ ಬಡ್ಡಿ ಕಟ್ಟುತ್ತಲೇ ಹೈರಾಣಾಗುತ್ತಾನೆ.. ಸ್ಟಾರ್ ನಟರಾದ ನೀವು ಸಿನಿಮಾ ಮಾಡುವ ಬದ್ಧತೆಯನ್ನು ಗೌರವಿಸಿ..

ಹೀಗೆ ಕಿಚ್ಚ ಸುದೀಪ್ ಅವರಿಗೆ ನೇರವಾಗಿ ಮನವಿ ರೂಪದ ಎಚ್ಚರಿಕೆಯನ್ನು ನೀಡಿದವರು ಹೆಸರಾಂತ ನಿರ್ಮಾಪಕ, ವಿತರಕ, ಪ್ರದರ್ಶಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಎಂ.ಎನ್.ಕುಮಾರ್.

ಸಿನಿಮಾ ಮಾಡುವ ಒಪ್ಪಂದ ಮಾಡಿಕೊಂಡು ಚಿತ್ರದಲ್ಲಿ ನಟಿಸುವ ವಿಷಯದಲ್ಲಿ ಹೊಸ ವರಸೆಗಳನ್ನು ತೋರಿದರೆ ಸಾಲ ಮಾಡಿಕೊಂಡ ನಿರ್ಮಾಪಕ ಏನು ಮಾಡಬೇಕು ಎಂದು ಮಾಧ್ಯಮಗೋಷ್ಠಿಯಲ್ಲಿ ಎಂ.ಎನ್.ಕುಮಾರ್ ಪ್ರಶ್ನೆ ಮಾಡಿದರು.

ಈಗ್ಗೆ ಸುಮಾರು ಎಂಟು ವರ್ಷಗಳಿಂದ ಸುದೀಪ್ ಅವರಿಗೆ ಹಲವಾರು ಬಾರಿ ಕೋಟಿ ಲೆಕ್ಕದಲ್ಲಿ ಹಣ ನೀಡಿದ್ದೇನೆ. ಹಿಂದೆ ಸಿನಿಮಾ ಮಾಡುವ ಒಪ್ಪಂದ ಮಾಡಿಕೊಂಡು ‘ಮುತ್ತತ್ತಿ ಸತ್ಯರಾಜು’ ಎಂಬ ಶೀರ್ಷಿಕೆ ನೋಂದಾಣಿ ಮಾಡಲು ಹೇಳಿದ್ದರು.

ಬಳಿಕ ಸುದೀಪ್ ನಾಟ್ ರೀಚಬಲ್.. ಈಗ ಅವರನ್ನು ಸಂಪರ್ಕಿಸುವುದೂ ನಮಗೆ ದುಸ್ತರ. ನಿರ್ಮಾಪಕನಾಗಿ ಬಡ್ಡಿಗೆ ಹಣ ತಂದು ಕೊಟ್ಟಿರುವ ನಾನು ಏನು ಮಾಡಬೇಕು ಹೇಳಿ..

ಈ ವಿಷಯದಲ್ಲಿ ಇನ್ನೆರಡು ದಿನದಲ್ಲಿ ಪ್ರತಿಕ್ರಿಯೆ ಬರದಿದ್ದರೆ ಸುದೀಪ್ ಅವರ ಮನೆಯ ಮುಂದೆ ಧರಣಿ ಕೂರುವೆ ಎಂದು ಎಚ್ಚರಿಸಿದರು ಎಂ.ಎನ್.ಕುಮಾರ್.

ನಾನು ಇಲ್ಲಿಯವರೆಗೂ ಎರಡು ಮನೆ ಮಾರಿದ್ದೇನೆ. ಕೋಟಿ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದೇನೆ. ಇದನ್ನೆಲ್ಲಾ ಸಿನಿಮಾ ಮಾಡುವ ಭರವಸೆಯ ಆಧಾರದಲ್ಲಿ ಪಡೆದಿರುವೆ..

ಆದರೆ ಸಿನಿಮಾ ಮಾಡಬೇಕಾದವರು ಕೈಗೆ ಸಿಗದಿದ್ದರೆ ಏನು ಮಾಡಬೇಕು. ‘ಕೋಟಿಗೊಬ್ಬ-3’, ‘ಪೈಲ್ವಾನ್’ ಮತ್ತು ‘ವಿಕ್ರಾಂತ್ ರೋಣ’ ಆದ ಮೇಲೆ ನಮ್ಮ ಸಿನಿಮಾ ಮಾಡುವರೆಂದು ನಂಬಿದ್ದೆ. ಈಗ ನೋಡಿದರೆ ಪರಭಾಷೆಯ ನಿರ್ಮಾಪಕರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಮಾಡಲಿ ಸಂತೋಷ; ಇದೇ ವೇಳೆ ಕೋಟಿಗೆ ಬಡ್ಡಿ ಕಟ್ಟುವ ನನ್ನ ಪಾಡೇನು ಎಂದು ಪ್ರಶ್ನಿಸಿದರು.

ಸುದೀಪ್ ಅವರ ‘ರಂಗ ಎಸ್ ಎಸ್ ಎಲ್ ಸಿ’, ‘ಮಾಣಿಕ್ಯ’ ಇನ್ನಿತರ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕುಮಾರ್, ಅವರ ಅನೇಕ ಚಿತ್ರಗಳಿಗೆ ಹಂಚಿಕೆದಾರರು ಆಗಿ ವ್ಯವಹಾರ ಮಾಡಿದ್ದಾರೆ.

ಸಿನಿಮಾ-ಗಾಸಿಪ್
Social Share :

1 thought on “ಸಿನಿಮಾ ಬದ್ಧತೆ ಗೌರವಿಸಿ.. ಸುದೀಪ್ ಗೆ ಎಂ.ಎನ್.ಕುಮಾರ್ ಮನವಿ”

Leave a Comment

Your email address will not be published. Required fields are marked *