ರಾಜಾಹುಲಿ ಎಂಬ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಯಶಸ್ಸು ತಂದು ಕೊಟ್ಟಿತ್ತು. ನಿರ್ಮಾಪಕ ಕೆ.ಮಂಜು ಅವರಿಗೆ ಲಾಭ ತಂದುಕೊಟ್ಟಿತ್ತು. ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈಗಲೂ ಬಿರುದು ಎಂಬುದು ವಿಶೇಷ..
ಈಗ ಈ ರಾಜಾಹುಲಿಯ ಪ್ರಸ್ತಾಪ ಏಕೆಂದರೆ, ಇದೇ ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣಗೊಂಡಿದೆ. ಆದರೆ ಇದು ‘ಮಿಸ್ಟರ್ ಅಂಡ್ ಮಿಸೆಸ್ ರಾಜಾಹುಲಿ’.
ರಾಜಾಹುಲಿಯೂ ಸೇರಿದಂತೆ ಅನೇಕ ಚಿತ್ರಗಳಲ್ಲಿ ಸಹನಟನಾಗಿ ನಟಿಸಿರುವ
ಹೊನ್ನರಾಜ್ ಈ ಚಿತ್ರವನ್ನು ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಇದು ಅವರ ಬಹಳ ವರ್ಷದ ಪ್ರಯತ್ನ. ನೈಜ ಕಥೆ ಆಧರಿಸಿ ಈ ಚಿತ್ರ ತಯಾರಾಗಿದೆ. ಈ ಚಿತ್ರಕ್ಕೆ ಯಾವ ಹೆಸರಿಟ್ಟರೂ ಸರಿ ಹೊಂದಲಿಲ್ಲ. ರಾಜಾಹುಲಿ ಶೀರ್ಷಿಕೆ ಬೇಕು ಎಂದಾಗ ಅದು ಕೆ.ಮಂಜು ಅವರ ಬಳಿ ಇತ್ತು. ಅವರ ಬಳಿ ಹೋಗಿ ಕೇಳಿದಾಗ ಪ್ರೀತಿಯಿಂದಲೇ ಬರೆದುಕೊಟ್ಟರು ಎಂಬ ವಿವರ ನೀಡಿದರು ನಿರ್ದೇಶಕ ಕಮ್ ನಟ ಹೊನ್ನರಾಜು.
ಮಂಜಣ್ಣ ಹತ್ತಿರ ಶೀರ್ಷಿಕೆ ಕೇಳಿದಾಗ ಅದನ್ನು ಪ್ರೀತಿಯಿಂದಲೇ ಕೊಟ್ಟರು ಮಾತ್ರವಲ್ಲ; ಒಳ್ಳೆ ಸಿನಿಮಾ ಮಾಡು ಅಂದರು. ಅವರ ಹೃದಯವಂತಿಕೆಗೆ ನಾನು ಚಿರ ಋಣಿ ಎಂದರು ನಿರ್ದೇಶಕರು.
ಫೆ.12ರಂದು ಶೂಟಿಂಗ್ ಮುಗಿದಿದೆ.
ವಿನು ಮನಸ್ಸು 4 ಹಾಡುಗಳು ಅತ್ಯುತ್ತಮವಾಗಿ ಕೊಟ್ಟಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುವ ಆಶಯವಿದೆ ಎಂದರು ನಿರ್ದೇಶಕರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಕೆ.ಮಂಜು ಚಿತ್ರರಂಗ ಈಗ ದುರ್ಬಲವಾಗಿ ಕಾಣುತ್ತಿದೆ. ಯಾವ ಚಿತ್ರಗಳು ಓಡುತ್ತಿಲ್ಲ. ಮೊದಲು ಸಿಂಗಲ್ ಚಿತ್ರಮಂದಿರಗಳು ಮಾತ್ರ ಮುಚ್ಚಿ ಹೋಗುತ್ತಿದ್ದವು. ಈಗ ಮಲ್ಟಿಪ್ಲೆಕ್ಸ್ ಗಳನ್ನೇ ಮುಚ್ಚಲಾಗುತ್ತಿದೆ ಎಂಬುದು ದುರದೃಷ್ಟಕರ ಸಂಗತಿಯಾಗಿದೆ ಎಂದು ವಿಶ್ಲೇಷಿಸಿದರು.
ನಟಿ ಶೃತಿ ಬಬಿತಾ, ಮೈಸೂರು ಮಂಜುಳ (ಜೂ.ಮಾಲಾಶ್ರೀ), ನೃತ್ಯ ನಿರ್ದೇಶಕ ಗಿರೀಶ್, ನಟ ಅಮರ್ ತಾವರೆಕೆರೆ ಮೊದಲಾದವರು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ಅಂದ ಹಾಗೆ ಸಂಜಯ್ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.