ಕಳೆದ ಮಾರ್ಚ್ 17ರಂದು ಬಿಡುಗಡೆಗೊಂಡ ಬಹು ಕೋಟಿ ವೆಚ್ಚದ ಹಾಗೂ ಬಹು ತಾರಾಗಣದ ಚಿತ್ರ ‘ಕಬ್ಜ’ ಗೆ ಪ್ರೇಕ್ಷಕ ಪ್ರಭುವಿನ ಆಶೀರ್ವಾದ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಮೂರನೇಯ ವಾರದಲ್ಲಿ ಚಿತ್ರಮಂದಿರಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಚಿತ್ರ ಹಾಕಲಾಗಿರುವ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಮುಂದುವರೆದಿದೆ.
ಹಾಗಾಗಿ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಆರ್.ಚಂದ್ರು ಹರ್ಷ ವ್ಯಕ್ತಪಡಿಸಿದ್ದಾರೆ. ಮೂರು ವಾರಗಳ ನಂತರ ಚಿತ್ರಕ್ಕೆ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಒಳ್ಳೆ ಪ್ರಯತ್ನಗಳನ್ನು ಪ್ರೇಕ್ಷಕ ಎಂದಿಗೂ ಕೈ ಬಿಡುವುದಿಲ್ಲ ಎಂದು ಅವರು ಖುಷಿಯನ್ನು ಹೊರಹಾಕಿದ್ದಾರೆ.
ಹಾಗೆ ನೋಡಿದರೆ ನಿರ್ದೇಶಕ ಆರ್.ಚಂದ್ರು ಅವರದು ಏಕಾಂಗಿ ಹೋರಾಟ. ‘ಯಾರು ಏನೇ ಅಂದರೂ ಕಾಡಾನೆ ನಡೆದಂತೆ ನಿರ್ಲಿಪ್ತ ಭಾವ.’ ಅದಕ್ಕೆ ಕಾರಣ ಅವರೊಳಗಿರುವ ಸಿನಿಮಾ ಪ್ರೀತಿ.
ನಿರ್ಮಾಪಕ ಆಗಿ ಒಂದು ಭಾರತೀಯ ಮಟ್ಟದ ಚಿತ್ರವನ್ನು ಗೆಲ್ಲಿಸುವುದು ಅಷ್ಟು ಸುಲಭವಲ್ಲ; ಅನೇಕರು ನಾನು ಏನೋ ಮಾಡಬಾರದ್ದನ್ನು ಮಾಡಿಬಿಟ್ಟೆ ಎಂದು ಟಾಮ್ ಟಾಮ್ ಹೊಡೆದುಕೊಳ್ಳುತ್ತಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ. ನಾನು ಯಾವುದಕ್ಕೂ ಬಗ್ಗದೇ ಕುಬ್ಜನಾಗದೇ ಚಿತ್ರವನ್ನು ಗೆಲ್ಲಿಸುವೆ ಎಂದು ಆವೇಶದಲ್ಲಿಯೇ ಪ್ರತಿಕ್ರಿಯೆ ನೀಡಿದರು ಚಂದ್ರು.
ಕನ್ನಡದ ನಿರ್ಮಾಪಕ ಹತ್ತಾರು ಕೋಟಿ ಅಥವಾ ನೂರಾರು ಕೋಟಿ ಹಾಕಿ ಸಿನಿಮಾ ತೆಗೆದು ಪ್ರೇಕ್ಷಕರ ಮುಂದಿಡುವುದನ್ನು ಸಹಿಸುವುದಿಲ್ಲ ಎಂದರೆ ಅಂತಹವರ ಮನಸ್ಥಿತಿ ಏನಿರಬಹುದು ಎಂದು ತಮ್ಮ ನೋವನ್ನು ಹೊರಹಾಕಿದರು ಚಂದ್ರು.
ಈ ರೀತಿ ಮಾತನಾಡುವವರು ಒಂದು ಚಿತ್ರ ಮಾಡಿ ತೋರಿಸಲಿ; ಆಗ ಅವರ ಸಾಮರ್ಥ್ಯದ ಪರಿಚಯ ನನಗೂ ಆಗುತ್ತದೆ ಎಂದು ಸವಾಲೆಸೆದಿದ್ದಾರೆ ನಿರ್ಮಾಪಕ ಚಂದ್ರು.
ಕಬ್ಜ ಚಿತ್ರದ ಮೇಕಿಂಗ್ ವಿಷಯ ಭಾರತೀಯ ಮಟ್ಟದಲ್ಲೇ ಚರ್ಚೆ ಆಗಿದೆ. ಅದರ ಅದ್ಭುತ ಚಿತ್ರಣಗಳ ಬಗ್ಗೆ ದೊಡ್ಡ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ. ಅದನ್ನು ಅರಿಯದೇ ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡುವವರ ಬಗ್ಗೆ ಪಶ್ಚಾತಾಪವಿದೆ ಎಂದರು ಆರ್.ಚಂದ್ರು.