ಸಂದರ್ಶನದ ವೇಳೆ ಯೂಟ್ಯೂಬ್ ನ ಪ್ರತಿನಿಧಿಯೊಬ್ಬ ಕೇಳಿದ ಪ್ರಶ್ನೆಯಿಂದ ಮಾನಸಿಕವಾಗಿ ನೊಂದಿರುವಂತೆ ಕಂಡು ಬಂದ ನಟಿ ತಾನಿಷಾ ಕುಪಂಡ
ಸೋಮವಾರ ಸುದ್ದಿಗೋಷ್ಠಿಯಲ್ಲೇ ಕಣ್ಣೀರಿಟ್ಟರು..
ಗುರುದೇಶ್ ಪಾಂಡೆ ನಿರ್ಮಾಣದ ‘ಪೆಂಟಗನ್’ ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡ ತಾನಿಷಾ ಅವರಿಗೆ ಯುಟ್ಯೂಬರ್ ನಿಂದ ಸಹ್ಯವಲ್ಲದ ಪ್ರಶ್ನೆ ಎದುರಾಗಿತ್ತು. ಅದಕ್ಕೆ ದಿಟ್ಟವಾಗಿಯೇ ಉತ್ತರ ನೀಡಿದ್ದ ನಟಿ ತಾನಿಷಾ ಮತ್ತು ಅವರ ಚಿತ್ರತಂಡ ಯುಟ್ಯೂಬರ್ ನನ್ನು ಹಿಡಿದು ಪ್ರಶ್ನೆ ಮಾಡಿತ್ತು.
ಇದು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆದರೆ ದೂರು ದಾಖಲಾಗಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡ ಯುಟ್ಯೂಬರ್ ರಾತ್ರಿ ಮೆಸೇಜ್ ಮೂಲಕ ಕಿರುಕುಳ ನೀಡಿದ ಎಂಬ ಆರೋಪ ಮಾಡಿದರು ತಾನಿಷಾ.
ಆ ಯುಟ್ಯೂಬರ್ ಜೊತೆಗೆ ಬಹಳಷ್ಟು ಜನರು ಬೇರೆ ಬೇರೆ ರೀತಿ ಕಿರುಕುಳ ನೀಡುತ್ತಿದ್ದಾರೆ. ನನ್ನ ಸಹನಟ ಒಬ್ಬ ಅಣುಕಿಸುವ ರೀತಿಯಲ್ಲಿ ಮೆಸೇಜ್ ಮಾಡಿದ್ದಾನೆ ಎಂದು ಹೇಳುವಾಗ ಅವರ ಕಣ್ಣಿನಿಂದ ಧಾರಾಕಾರ ನೀರು ಹರಿಯಿತು.
ನಾನು ಫ್ಯಾಮಿಲಿ ವಿಷಯದಿಂದ ಎಲ್ಲವನ್ನು ತಡೆದುಕೊಂಡಿರುವೆ. ಅಮ್ಮನಿಗೆ ಉಷಾರಿಲ್ಲ. ಅವರು ಬೇರೆ ವಿಷಯಗಳನ್ನು ತಡೆದುಕೊಳ್ಳುವುದಿಲ್ಲ. ಹಾಗಾಗಿ ಪೊಲೀಸ್ ಠಾಣೆಗೆ ಹೋದರೂ ಎಫ್.ಐ.ಆರ್ ದಾಖಲಿಸಲಿಲ್ಲ ಎಂದರು.
ಇನ್ನು ಮುಂದೆ ಯುಟ್ಯೂಬರ್ ಯಾರೇ ಇರಲಿ ಮಾನಸಿಕ ಕಿರುಕುಳ ಆಗುವ ಪ್ರಶ್ನೆ ದಯವಿಟ್ಟು ಕೇಳಬೇಡಿ ಎಂದರು ನಿರ್ದೇಶಕ ರಘು ಶಿವಮೊಗ್ಗ.
ಈ ಘಟನೆಯ ಬಳಿಕ ತಾನಿಷಾ ಅವರಿಗೆ ಆಗಿರುವ ನೋವು ಒಂದು ಹೆಣ್ಣಿಗೆ ಆಗಿರುವ ನೋವು. ಒಬ್ಬ ಕಲಾವಿದೆಯಾಗಿ ಅವರು ನಮ್ಮ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದನ್ನೇ ಬೇರೆ ರೀತಿ ಅರ್ಥೈಸುತ್ತಾ ನೋವು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು ರಘು.
ಕಳೆದ ಶನಿವಾರ ಸುದ್ದಿಗೋಷ್ಠಿ ಮುಗಿದ ಬಳಿಕ ನಟಿ ತಾನಿಷಾ ಅವರ ಸಂದರ್ಶನ ಪಡೆಯುತ್ತಿದ್ದ ಯುಟ್ಯೂಬರ್ ಒಬ್ಬ ‘ನೀವು ಬೋಲ್ಡ್ ಆಗಿ ನಟಿಸಿದ್ದೀರಾ.. ನ್ಯೂಡ್ ಫಿಲಂ ಅವಕಾಶ ಬಂದರೆ ಮಾಡ್ತಿರಾ.. ಎಂದು ಕೇಳಿದ್ದ. ಇದರಿಂದ ರೊಚ್ಚಿಗೆದ್ದ ತಾನಿಷಾ, ಆತನಿಗೆ ಹಿಗ್ಗಾ ಮಗ್ಗ ಜಾಡಿಸಿದ್ದರು.